ಎಲ್ಲೋ ಗೇರುಸೊಪ್ಪೆಯ ಮೂಲೆಯಲ್ಲೋ ಹೊನ್ನಾವರದ ಘಾಟಿನ ಶರಾವತಿ ವ್ಯೂ ಪಾಯಿಂಟ್ ನಲ್ಲಿ ಕಾಣುವ ಬಿಂಕದ ಸಿಂಗಾರಿ ಶರಾವತಿ ಕೊಳ್ಳದ ಆಚೆಬದಿಯ ದುರ್ಗಮ ಕಾಡಿನಲ್ಲೆಲ್ಲೋ ಅಂತರ್ಗತ ಅಥವಾ ಭೂಗತ ಜಲವಿದ್ಯುತ್ ಯೋಜನೆ ಮಾಡಿದ್ರೆ ತಪ್ಪೇನಿದೆ? 2500 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯದ ಯೋಜನೆಗೆ ಯಾಕೆ ಅಡ್ಡಿ ಮಾಡ್ತೀರಿ? ಶರಾವತಿ ನದಿಯೇನು ನಿಮ್ಮಪ್ಪನ ಮನೆ ಆಸ್ತಿಯಾ? ಹೀಗೆಲ್ಲಾ ಪ್ರಶ್ನೆ ಎತ್ತುವ ಒಂದಷ್ಟ ಮೂರ್ಖರಿಗೆ ಉತ್ತರವಾಗಿ ಒಂದು ಸಣ್ಣ ಅಂಕಣ ಬರಿಯಬೇಕು ಅನ್ನಿಸಿದ್ದರಿಂದ ಸೃಷ್ಟಿಯಾದ ಈ ಬರಹ, ಆ ಪಾಮರ ಮಹಾನುಭಾವರಿಗೆ ಸಮರ್ಪಿತ. ಅಂದ ಹಾಗೆ ಸೂಕ್ಷ್ಮ ಪರಿಸರ ಸರಪಳಿ ಅಂತ ಒಂದು ಜೈವಿಕ ಮತ್ತು ಪಾರಿಸರಿಕ ವಿಚಾರವೊಂದಿದೆ. ಈ ಲೇಖನ ಬೆಳಕು ಚೆಲ್ಲುವುದೇ ಆ ಸೂಕ್ಷ್ಮ ಪರಿಸರ ಮತ್ತು ಜೀವವೈವಿಧ್ಯತೆಯ ಸರಪಳಿಯ ಮಹತ್ವದ ಮತ್ತು ಮುಂಬರುವ ಅಪಾಯದ ಕುರಿತಾಗಿ. ಇದನ್ನು ಓದಿದ ನಂತರವಾದರೂ ಶರಾವತಿ ಯೋಜನೆಯ ಬಗ್ಗೆ ಎಡಬಿಡಂಗಿಗಳ ತರಹ ಮಾತಾಡುವ ಮೂರ್ಖ ಶಿಖಂಡಿಗಳಿಗೆ ಕಿಂಚಿತ್ ಅರಿವು ಮೂಡಲಿ ಎನ್ನುವ ಸದಾಶಯ.
ಶರಾವತಿ ನಮ್ಮ ನಾಡಿನ ಅತ್ಯಂತ ಸಂಪದ್ಭರಿತ ನದಿ ಮತ್ತು ದಟ್ಟ ವನ್ಯಕಾಡುಗಳ ಆಶ್ರಯಧಾತೆ. ತೀರ್ಥಹಳ್ಳಿಯ ಅಂಬುತೀರ್ಥದಲ್ಲಿ ಹುಟ್ಟಿ, ಲಿಂಗನಮಕ್ಕಿಯಿಂದ ಜೋಗ ಜಲಪಾತದ ಮೂಲಕ ಧುಮುಕಿ, ಮಾವಿನಗುಂಡಿ ಮುಖಾಂತರ ಗೇರುಸೊಪ್ಪಾ ತಲುಪಿ ಆನಂತರ ಹೊನ್ನಾವರದ ಕರ್ಕಿ ಸಮೀಪ ಅರಬ್ಬೀ ಸಮುದ್ರ ಸೇರುವವರೆಗೆ ಶರಾವತಿ ತನ್ನೆರಡೂ ಇಕ್ಕೆಲಗಳಲ್ಲಿ ದಟ್ಟ ಗಾಢ ಹಸಿರ ಹೊದಿಕೆ ಹೊದ್ದುಕೊಂಡೇ ಸಾಗುತ್ತಾಳೆ. ಆ ಸಂಪೂರ್ಣ ಶರಾವತಿ ಕೊಳ್ಳದ ಮಳೆಕಾಡಿಗೆ ಶರಾವತಿಯೇ ತಾಯಿ ಮತ್ತು ಅವಳದೇ ಶ್ರೀರಕ್ಷೆ. ಶರಾವತಿಯ ಒಟ್ಟು ಹರಿವಿನ ಮಾರ್ಗದ ಅಂತರ 128 ಕಿಮೀ. ಅವಳ ಪ್ರಮುಖ ಉಪನದಿಗಳು ನಂದಿಹೊಳೆ, ಹರಿದ್ರಾವತಿ, ಮಾವಿನ ಹೊಳೆ ಹಿಲ್ಕುಂಜಿ, ಎಣ್ಣೆಹೊಳೆ, ಹುರಳೀಹೊಳೆ, ನಾಗೋಡಿಹೊಳೆ, ತಲಕಳಲೇ ಹಳ್ಳ, ಕೊಡಸೆ ಹೊಳೆ, ಕಲಕಟ್ಟೆ, ಕಂದೊಡ್ಡಿ, ಸರಳೆಹೊಳೆ ಒಟ್ಟು ಬಾರಾ ಗಂಗಾ ಅಥವಾ ಸರಳವಾಗಿ ಬಾರಂಗಿ. ಶರಾವತಿಯ ಹನ್ನೆರಡೂ ತಂಗಿಯರೂ ಒನುಪು ವಯ್ಯಾರ ಬಿಂಕದಲ್ಲಾಗಲೀ ಸಮೃದ್ಧತೆಯಲ್ಲಾಗಲಿ ಒಬ್ಬರಿಗಿಂತ ಒಬ್ಬರು ಚುರುಕು. ಹೀಗಾಗಿ ಶರಾವತಿ ಕೊಳ್ಳದಲ್ಲಿ ಜಲಕ್ಷಾಮ ತಲೆದೋರಿದ್ದೇ ಕಡಿಮೆ. ತೀರ್ಥಹಳ್ಳಿ, ಸಾಗರ, ಹೊಸನಗರ, ಹೊನ್ನಾವರ ಎಂಬ ಮಲೆನಾಡಿನ ಈ ನಾಲ್ಕು ತಾಲೂಕುಗಳ ಜೀವನದಿಯಾದ ಶರಾವತಿ ಕೊಳ್ಳದ ಒಟ್ಟು ವಿಸ್ತೀರ್ಣ 2985ಚ ಕಿಮೀ. ಇದಿಷ್ಟು ನಾನು ಹೇಳಿದ್ದು ಹತ್ತಿಪ್ಪತ್ತು ವರ್ಷಗಳ ಹಿಂದಿನ ಸುವರ್ಣಕಾಲದ ಕಥೆ. ಶರಾವತಿ ಈಗ ಮೊದಲಿನಂತಿಲ್ಲ ಮತ್ತು ಶರಾವತಿ ಪಾತ್ರದ ಕಾಡುಗಳೂ ಮೊದಲಿನಷ್ಟಿಲ್ಲ. ಮೊದಲಿನಷ್ಟು ಮಳೆಯೂ ಇಲ್ಲ; ಸೊಬಗೂ ಇಲ್ಲ. ಹಿಂದೊಂದು ಕಾಲದಲ್ಲಿ ವರ್ಷದ ಅರೆವಾಸಿ ಪೂರ್ತಿ ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಶರಾವತಿಯ ಕನಿಷ್ಟ 20-30 ಟಿಎಂಸಿ ನೀರು ಅರಬ್ಬಿ ಸಮುದ್ರ ಸೇರುತ್ತಿತ್ತು, ಅದೀಗ ಇತಿಹಾಸ. ಈಗ ಅಷ್ಟು ವೈಭವದ ಮಳೆಯೂ ಇಲ್ಲ, ಮಳೆಕಾಡುಗಳೂ ಇಲ್ಲ, ಆ ಪ್ರಮಾಣದ ನೀರು ಕಡಲು ಸೇರುತ್ತಲೂ ಇಲ್ಲ.
ಹಿಂದೊಮ್ಮೆ ವಾರ್ಷಿಕ ಆರು ಸಾವಿರ ಮಿಲಿಮೀಟರ್ ಮಳೆ ಸುರಿಸುತ್ತಿದ್ದ ಮಳೆ ಕಾಡುಗಳು ಶರಾವತಿಯ ಮಡಿಲಲ್ಲಿದ್ದವು. ಜೂನ್ ನಿಂದ ಸೆಪ್ಟೆಂಬರ್ ವರೆಗೆ ರಣ ಮಳೆ ಸುರಿಯುತ್ತಿದ್ದ ಕಾಲವದು. ಆದರೆ ಈಗ ಅದರ ಅರ್ಧದಷ್ಟೂ ಮಳೆಯಾಗುತ್ತಿಲ್ಲ. ಶರಾವತಿ ನದಿಗೆ ಈಗಾಗಲೆ 8 ಪೂರ್ಣ ಪ್ರಮಾಣದ ಡ್ಯಾಂಗಳಿವೆ. ಇದರಲ್ಲಿ ಲಿಂಗನಮಕ್ಕಿ ಬಿಟ್ಟರೆ ಎರಡನೇ ದೊಡ್ಡ ಡ್ಯಾಂ ಆದ ಗೇರುಸೊಪ್ಪಾ ಡ್ಯಾಂ ನಿರ್ಮಾಣ ಯೋಜನೆ ಪೂರ್ಣವಾಗಿದ್ದು 2002ರಲ್ಲಿ.
ವಿದ್ಯುತ್ ಉದ್ದೇಶಕ್ಕಾಗಿ ನಿರ್ಮಾಣವಾದ ಈ ಡ್ಯಾಂ ಎತ್ತರ 56 ಮೀ ಮತ್ತು ಉದ್ದ 545 ಮೀ. ಶರಾವತಿ ಟೆಲ್ರೆಸ್ ಯೋಜನೆ ಶುರುವಾದಾಗಲೇ ಶರಾವತಿಯ ವೈಭವದ ದಿನಗಳು ಮುಗಿದು ಹೋದವು. ಆ ನಂತರವೇ ಶರಾವತಿ ಕೊಳ್ಳದ ಮಳೆ ಪ್ರಮಾಣ ಕುಂಠಿತವಾಗಿದ್ದು.
ಶರಾವತಿ ನದಿ ಕಣಿವೆಯ ದಟ್ಟ ಅರಣ್ಯವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿದ್ದು 1972ರಲ್ಲಿ. ಆಗ ಈ ಪ್ರದೇಶದ ವ್ಯಾಪ್ತಿ ಇದ್ದಿದ್ದು 431 ಚದರ ಕಿಲೋ ಮೀಟರ್ ನಿತ್ಯ ಹರಿದ್ವರ್ಣದ ಕಾಡುಗಳು. ಶರಾವತಿ ಕೊಳ್ಳದ ದಟ್ಟ ಅರಣ್ಯದ ಕೋರ್ ಝೋನ್ 74 ಚ.ಕಿ.ಮೀ ವಿಸ್ತೀರ್ಣವಿದ್ದರೆ ಬಫರ್ ಝೋನ್ 170 ಚ.ಕಿ.ಮೀ ಮತ್ತು ಪ್ರವಾಸಿಗಳ ಸಂಚರಿಸಬಹುದಾದ ಟೂರಿಸಂ ಝೋನ್ 57 ಚ.ಕಿ.ಮೀನಷ್ಟಿತ್ತು. ಈ 74 ಚ.ಕಿ.ಮೀ ಕೋರ್ ಝೋನ್ ಇಂದಿಗೂ ಮಾನವ ಪ್ರವೇಶಿಸಲಾರದಷ್ಟು ದುರ್ಗಮ ಅರಣ್ಯವೆಂದೇ ಕರೆಸಿಕೊಂಡಿದೆ. ನಿರಂತರ ಅಡವಿ ಒತ್ತುವರಿಯಿಂದಾಗಿ ಈ ಬಫರ್ ಜೋನ್ ಮೊದಲಿಗಿಂತಲೂ ತೆಳುವಾಗಿರುವುದು ಸತ್ಯ. ಜೊತೆಗೆ ಇಕೋ ಟೂರಿಸಂ ಹೆಸರಲ್ಲಿ ಕಾಡಿನಲ್ಲಿ ಮಾನವನ ಓಡಾಟವೂ ಹೆಚ್ಚಾಗಿದೆ. ಆದರೂ ಶರಾವತಿ ದುರ್ಗಮ ಕಾಡಿನ ನಿಭಿಡತೆ ಇವತ್ತಿಗೂ ಹಾಗೇ ಇದೆ. ಕೆಲವು ಚಾರಣಿಗರೂ ಕಾಡಿನ ಪ್ರೇಮಿಗಳೂ ಮತ್ತು ಅರಣ್ಯ ಇಲಾಖೆಯ ನೌಕರರಾದ ಫಾರೆಸ್ಟ್ ವಾಚರ್ಸ್ ಗಳೂ ಹೋಗಲಾರದ ಪ್ರದೇಶಗಳಿವೆ.
ಇಂತದ್ದೇ ಒಂದು ಪ್ರದೇಶದಲ್ಲೀಗ ಅಂತರ್ಗತ ಜಲವಿದ್ಯುತ್ ಯೋಜನೆಗೆ ನೆಲಕಿಂಡಿ ಕೊರೆದು ಸರ್ವೇ ಮಾಡಲು ಸರ್ಕಾರಿ ಪ್ರಭುಗಳು ಹುಕುಂ ಮಾಡಿದ್ದಾರೆ. ಈ ಯೋಜನೆಯಿಂದ ಕನಿಷ್ಟ 1000 ಎಕರೆ ಕಾಡು ನಾಶವಾಗುತ್ತದೆ ಎಂದು ತಜ್ಞರು ಹೇಳಿಕೊಂಡಿದ್ದಾರಾದರೂ ಅಸಲಿಗೆ ಇದರ ಇನ್ನೂ ಹೆಚ್ಚು ಎನ್ನಲಾಗುತ್ತಿದೆ. ನೆಲಕಿಂಡಿ ಕೊರೆಯುವ ಯಂತ್ರಗಳಿಂದ ಮುಂದೆ ಭೂಕುಸಿತ ಸಂಭವಿಸುವ ಅಪಾಯ ತಪ್ಪಿದ್ದಲ್ಲ. ಇನ್ನು ಇಲ್ಲಿ ನಾಶವಾಗುವ ಸಂಪದ್ಭರಿತ ಅರಣ್ಯ ಮತ್ತು ವನ್ಯ ಸಂಕುಲಕ್ಕೆ ಬೆಲೆ ಕಟ್ಟಲಾದೀತೇ! ಇಷ್ಟೆಲ್ಲಾ ಆದಾಗ್ಯೂ ಈ ಯೋಜನೆ ನಿಜಕ್ಕೂ ಕಾರ್ಯಸಾಧುವೇ ಎಂದರೆ ಅದೂ ಇಲ್ಲ. ಭೂಗರ್ಭದಲ್ಲಿ ಸುರಂಗದೊಳಗೆ ನೀರು ಹರಿಸಿ ಯಂತ್ರಗಳ ಚಕ್ರ ತರುಗಿಸಿ ವಿದ್ಯುತ್ ಉತ್ಪಾದಿಸುವುದಕ್ಕೆ ಬೇಕಿರುವ ಶ್ರಮವೆಷ್ಟು? ತಾಂತ್ರಿಕವಾಗಿಯೂ ಇದೆಷ್ಟು ಪರಿಣಾಮಕಾರಿ? ಇದಕ್ಕೆ ತಗುಲಲಿರುವ ಖರ್ಚು ಎಷ್ಟು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಸಮರ್ಪಕವಾದ ಉತ್ತರವಿಲ್ಲ. ಈ ನಿಟ್ಟಿನಲ್ಲಿ ಶರಾವತಿ ವೈಲ್ಡ್ ಲೈಫ್ ವಿಚಾರ ಒಂಚೂರು ತಿಳಿದುಕೊಳ್ಳುವುದು ಉತ್ತಮ.
ಅತ್ಯಂತ ಶ್ರೀಮಂತ ಹಾಗೂ ಸಂಪದ್ಭರಿತ ಜೀವ ವೈವಿಧ್ಯ ತಾಣ ಶರಾವತಿ ಮಳೆ ಕಾಡು. ಪಶ್ಚಿಮ ಘಟ್ಟಗಳಲ್ಲೇ ಅತ್ಯಂತ ಅಪರೂಪದ 15 ವಿಭಿನ್ನ ಜೀವ ಸಂತತಿಗಳು ಇಲ್ಲಿವೆ. ಬ್ಯಾಕ್ ಗ್ರಿಡ್ ಕ್ಯಾಟ್ ಫಿಶ್( ಬ್ಯಾಟ್ಸಿಯೋ ಶರಾವತಿಯೆನ್ಸಿಸ್ batasio sharavatiensis) ಎನ್ನುವ ಅತ್ಯಂತ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಮತ್ಸ್ಯ ಸಂಕುಲವಿರುವುದು ಶರಾವತಿಯ ಮಡಿಲಲ್ಲೇ. ಆಲ್ಗೋಡು ಬಳಿ ಹರಿವ ಶರಾವತಿಯಲ್ಲಿ ಪತ್ತೆ ಹಚ್ಚಲಾದ ಅಪೂರ್ವ ಮತ್ಸ್ಯ ತಳಿ ಸ್ಕಿಷ್ಟುರ ಶರಾವತಿಯೆನ್ಸಿಸ್( schistura sharavatiensis) ಇತ್ತೀಚೆಗಷ್ಟೇ ಎರಡು ವಿಶೇಷ ಆಲ್ಗೆ ಅಥವಾ ಪಶ್ಚಿಮ ಘಟ್ಟದ ಪಾಚಿ ಜಾತಿಯ ವೈವಿಧ್ಯವನ್ನು ಹೀರೇ ಭಾಸ್ಕರ ಡ್ಯಾಂ ನಲ್ಲಿ ಕಂಡುಹಿಡಿಯಲಾಗಿದೆ.
ಶರಾವತಿ ವನ್ಯಜೀವಿ ತಾಣವೆಂದರೆ ಮೊತ್ತಮೊದಲಿಗೆ ನೆನಪಾಗುವುದೇ ಸಿಂಗಳೀಕ ಅಥವಾ ಸಿಂಹ ಬಾಲದ ಕೋತಿ( lion tailed macaque) ಇದು ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಅಪೂರ್ವ ಜೀವಿಗಳಲ್ಲ, ಐಯುಸಿಎನ್ ವರದಿಯ ಪ್ರಕಾರ, ಇಡೀ ಪ್ರಪಂಚದ ಜೀವ ಸಂಕುಲದಲ್ಲೇ ಅತ್ಯಂತ ವಿರಳ ಮತ್ತು ಅಳಿವಿನಂಚಿನಲ್ಲಿರುವ ಕೋತಿಗಳ ಪ್ರಬೇಧ. ಶರಾವತಿ ಕೊಳ್ಳದಲ್ಲಿ ಹುಲಿ ಸಂರಕ್ಷಿತ ಅರಣ್ಯಪಾಲಿದೆ. ಚಿರತೆ, ಕರಿಚಿರತೆ, ಕಾಡು ನಾಯಿ, ತೋಳ, ಕರಡಿ, ಜಿಂಕೆ, ಕಡವೆ, ಕಾಡುಕುರಿ, ಕಾಡುಹಂದಿ, ಸಾಮಾನ್ಯ ಮಂಗಗಳು, ಮುಸಿಯ, ದೈತ್ಯ ಕೆಂದಳಿಲು, ಮಲಬಾರ್ ಅಳಿಲು, ಚಿಪ್ಪು ಹಂದಿ, ಮುಳ್ಳುಹಂದಿ, ಮುಂಗುಸಿ, ಕಾಡುಕೋಣ ಅಥವಾ ಕಾಟಿ ಮುಂತಾದ ಜೀವಿಗಳ ಸ್ವಾಭಾವಿಕ ನೆಲೆಯಿದು. ಇನ್ನು ಸರೀಸೃಪಗಳಾದ ಕಾಳಿಂಗ ಸರ್ಪ, ನಾಗರಹಾವು, ಕನ್ನಡಿಹಾವು, ಕೇರೆ ಹಾವು, ಹಸಿರು ಹಾವು, ಮಣ್ಣುಮುಕ್ಕ, ಮುಂತಾದ ಉರಗಗಳ ಜೊತೆ ಮೊಸಳೆ, ಬೃಹತ್ ಗಾತ್ರದ ಉಡ ಮುಂತಾದ ಜೀವ ವೈವಿಧ್ಯತೆ ಇಲ್ಲಿದೆ.
ಮಂಗಟ್ಟೆ ಅಥವಾ ಹಾರ್ನ್ ಬಿಲ್, ಪ್ಯಾರಡೈಸ್ ಫ್ಲೈ ಕ್ಯಾಚರ್, ರಾಕೆಟ್ ಟೇಲ್ಡ್ ಡ್ರೋಂಗೋ( racket tailed drongo), ಲೋರಿನಿ(loriini), ಬಾವಲಿಗಳು( leaf nosed bats) ಎನ್ನುವ ಅತ್ಯಂತ ಅಪೂರ್ವ, ವಿರಳ ಮತ್ತು ವಿನಾಶದಂಚಿನ ಪಕ್ಷಿ ಸಂಕುಲಗಳು ಇಲ್ಲಿ ಮಾತ್ರ ಕಾಣ ಸಿಗುತ್ತವೆ. ಇದಲ್ಲದೇ ಹದ್ದು, ಗಿಳಿ, ನವಿಲು, ಮರಕುಟಿಕ, ಮಿಂಚುಳ್ಳಿ, ಬೆಳ್ಳಕ್ಕಿ, ಮೈನಾ, ಬಕ, ಬಾತು, ನೀಲಕಂಠ ಪಕ್ಷಿ ಸೇರಿದಂತೆ ಒಂದು ಸಮೃದ್ಧ ಹಸಿರುಮಳೆ ಕಾಡಿನಪರಿಸರವನ್ನು ಸಿರಿವಂತಗೊಳಿಸಬಲ್ಲ ಖಗ ಸಾಮ್ರಾಜ್ಯವೇ ಇಲ್ಲಿದೆ.
ಶರಾವತಿ ಕೊಳ್ಳದ ಅರಣ್ಯದಲ್ಲಿ ಅತ್ಯಂತ ಅಮೂಲ್ಯವಾದ ಗಿಡಮೂಲಿಕೆ ಭಂಡಾರವೇ ಇದೆ. ಮಲೆನಾಡಿನ ಪ್ರಾಚೀನ ಪರಂಪರಾಗತ ನಾಟಿ ವೈದ್ಯ ಪದ್ಧತಿಗೆ ಆಧಾರವಾಗಿರುವುದೇ ಶರಾವತಿಯ ಮಡಿಲಲ್ಲಿರುವ ಮೂಲಿಕಾವನ. ಜೋಗದ ಗುಡ್ಡ ಹಾಗೂ ಕಣಿವೆ ಒಂದರಲ್ಲೇ ವೈವಿಧ್ಯಮಯ ಹಾಗೂ ಅಪರೂಪವಾದ ಗಿಡಮೂಲಿಕೆಗಳು, ಸೀತಾಳೆ ಜಾತಿಯ ಸಸ್ಯಗಳು, ಕಪ್ಪೆ, ಚಿಟ್ಟೆ ಮತ್ತು ವಿಸ್ಮಯಕಾರಿ ಕೀಟಗಳನ್ನು ಜೀವ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಇಷ್ಟೆಲ್ಲಾ ಭೌತಿಕ ವನ್ಯ ಸಿರಿತನ ಹೊಂದಿರುವ ಶರಾವತಿ ಕೊಳ್ಳದ ಮೇಲೆ ಈ ಅಂತರ್ಗತ ಜಲವಿದ್ಯುತ್ ಯೋಜನೆ ಮತ್ತೊಂದು ದೊಡ್ಡ ಪೆಟ್ಟುಕೊಡುವುದರಲ್ಲಿ ಅನುಮಾನವೇ ಇಲ್ಲ. ಶರಾವತಿ ಬತ್ತಿದರೆ ಅದರ ಬಾರಾ ಗಂಗಾ ಉಪನದಿಗಳು ಬತ್ತುತ್ತವೆ. ಇದರ ನೇರ ಪರಿಣಾಮ ಉಂಟಾಗುವುದು ಕೊಳ್ಳದ ಮಳೆಕಾಡುಗಳ ಮೇಲೆ. ಪಶ್ಚಿಮ ಘಟ್ಟದ ಒಂದು ಬಹುಮುಖ್ಯ ಕೊಂಡಿ ಶರಾವತಿ ಕಣಿವೆ ಅಭಯಾರಣ್ಯ. ಇದು ಅತ್ಯಂತ ಸೂಕ್ಷ್ಮ ಜೈವಿಕ ವೈವಿಧ್ಯತಾಣ. ಇಲ್ಲಿ ಯಾವುದೇ ಬಗೆಯ ವಿದ್ಯುತ್ ಯೋಜನೆಗಳೂ ಮುಂಬರುವ ದಿನದಲ್ಲಿ ಅನಾಹುತಕಾರಿ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ ಜಲವಿದ್ಯುತ್ ಯೋಜನೆಯಿಂದಾಗಿ ಆಗಿರುವ ಶರಾವತಿಯ ಗಾಯವೇ ಮಾಸಿಲ್ಲ ಈಗ ಮತ್ತೊಂದು ಗಾಯ ಮಾಡಲು ಆಳುವ ಸರ್ಕಾರಗಳು ಹೊರಟಿವೆ. ನಮ್ಮ ಮುಂದಿನ ಪೀಳಿಗೆಯ ಬದುಕು ಮಲೆನಾಡಿನ ಉಳಿವು ಶರಾವತಿ ಕೊಳ್ಳದ ಭವಿಷ್ಯದ ಮೇಲೆ ನಿಂತಿದೆ. ಈಗ ಕೊಂಚ ತಲೆಯ ಮೇಲೊಂದು ತಣ್ಣೀರು ಬಟ್ಟೆ ಇಟ್ಟುಕೊಂಡು ತಣ್ಣಗೆ ಯೋಚಿಸಿ ನೋಡಿ ಶರಾವತಿಯ ಭೂಗತ ಜಲವಿದ್ಯುತ್ ಯೋಜನೆ ನಮಗೆ ಬೇಕಾ?
-ವಿಭಾ (ವಿಶ್ವಾಸ್ ಭಾರದ್ವಾಜ್)
*
ನೋಟ್: ಶರಾವತಿ ಕೊಳ್ಳದ ವನ್ಯಜೀವಿಗಳ ಮೇಲೆ ಸರ್ಕಾರಗಳ ನಿರಂತರ ಪ್ರಹಾರದ ಕರ್ಮಕಾಂಡ ಫಾಲೋ ಅಪ್ ಸ್ಟೋರಿ ಸರಣಿ








