ಬೆಂಗಳೂರು: ಬಿಜೆಪಿ (BJP)ಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಅವರು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ನಾನು ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದ್ದಾರೆ.
ಹಲವು ಕಾರಣಾಂತರಗಳಿಂದ ನನ್ನ ತಂದೆ ಕೃಷ್ಣಪ್ಪನವರು ಕಾಂಗ್ರೆಸ್ ತೊರೆದಿದ್ದರು. ಆದರೂ ಬಹಳ ಜನ ನನ್ನನ್ನು ಕಾಂಗ್ರೆಸ್ ಕೃಷ್ಣಪ್ಪನವರ ಮಗಳು ಎಂದೇ ಗುರುತಿಸುತ್ತಿದ್ದರು. ಎಲ್ಲರ ಅಪೇಕ್ಷೆಯಂತೆ ಈ ದಿನ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ. ಹಿಂದುಳಿದ ವರ್ಗಗಳ ಸಮಾಜದವರಿಗೆ ಅವಕಾಶ ಸಿಗುವುದು ಕಷ್ಟ. ಸಿಎಂ, ಡಿಸಿಎಂ ಅವರು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಹೆಚ್ಚು ಅವಕಾಶ ನೀಡಬೇಕು. ಇನ್ನು ಮುಂದೆ ನನ್ನ ಪ್ರಯಾಣ ಕಾಂಗ್ರೆಸ್ ನಲ್ಲಿ ಶುರುವಾಗಲಿದೆ ಎಂದು ಹೇಳಿದ್ದಾರೆ.
ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಮಾತನಾಡಿ, ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟವರು ವೀರಪ್ಪ ಮೊಯ್ಲಿ. ನಾನು ಕಾಂಗ್ರೆಸ್ಗೆ ಬಂದಿದ್ದೇನೆ. ಹಟ್ಟಿಗಳಲ್ಲಿ ವಾಸ ಮಾಡೋ ಸಮುದಾಯಗಳನ್ನ ಎಸ್ಟಿ ಸಮುದಾಯಕ್ಕೆ ಸೇರಿಸಬೇಕು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಪೂರ್ಣಿಮಾ ಹಾಗೂ ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರೊಂದಿಗೆ ಸಾವಿರಾರು ಕಾರ್ಯಕರ್ತರು ಸೇರಿದ್ದಾರೆ ಎಲ್ಲರನ್ನೂ ಬರಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 2013ರಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಲು ನಾನೇ ಕಾರಣ. ಈ ಕುರಿತು ಪೂರ್ಣಿಮಾ ಶ್ರೀನಿವಾಸ್ ನನ್ನ ಮೇಲೆ ಬೇಸರ ಮಾಡಿಕೊಂಡಿಲ್ಲ. ಪಕ್ಷದ್ರೋಹದ ಕೆಲಸ ಮಾಡಿದ ಬೈರತಿ ಬಸವರಾಜ್ಗೆ ಟಿಕೆಟ್ ಕೊಡಿಸುವ ಸಲುವಾಗಿ ಕೃಷ್ಣಪ್ಪಗೆ ಟಿಕೆಟ್ ತಪ್ಪಿತು. ಹೀಗಾಗಿ ಪೂರ್ಣಿಮಾ ಹಿರಿಯೂರಿನಿಂದ ಬಿಜೆಪಿ ಟಿಕೆಟ್ ಪಡೆದು ಶಾಸಕಿ ಆದರು. ಆದರೂ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿತ್ತು. ಈಗ ಮತ್ತೆ ನಮ್ಮ ಪಕ್ಷ ಸೇರಿದ್ದಾರೆ ಎಂದು ಹೇಳಿದ್ದಾರೆ.