ಪ್ರಧಾನಿ ಮೋದಿಗೆ ಪತ್ರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಬೆಂಗಳೂರು, ಜೂನ್ 20: ಪ್ರಧಾನಿ ಮೋದಿ ಕಾರ್ಯಕ್ಕೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಹಾಲಿ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಜೊತೆಗೆ ಆರು ಸಲಹೆಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ – ಚೀನಾ ಗಡಿ ವಿಚಾರದಲ್ಲಿ ಏನಾಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ನೀಡಬೇಕು ಎಂದು ಮಾಜಿ ಪ್ರಧಾನಿ ಒತ್ತಾಯಿಸಿದ್ದರು.

ಶುಕ್ರವಾರ ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷಗಳ ಸಭೆ ಕರೆದಿದ್ದರು. ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಎಲ್ಲಾ ನಾಯಕರ ಸಲಹೆ ಸೂಚನೆಗಳನ್ನು ಪ್ರಧಾನಿ ಮೋದಿ ಪರಿಗಣಿಸುತ್ತಿರುವುದಕ್ಕೆ ಅಭಿನಂದನೆ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾದ ಬಳಿಕ ಮೊದಲ ಬಾರಿಗೆ ಪ್ರಧಾನಿಗೆ ಪತ್ರ ಬರೆದು ಅಭಿನಂದನೆ ತಿಳಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು ಪತ್ರದಲ್ಲಿ ಹಲವು ಸಲಹೆಗಳನ್ನ ನೀಡಿದ್ದಾರೆ.

ಗಡಿಯಲ್ಲಿರುವ ಸಂಘರ್ಷದ ಪರಿಸ್ಥಿತಿಯ ಕುರಿತಾಗಿ ಪ್ರತಿಪಕ್ಷಗಳ ನಾಯಕರಿಗೆ ಹಿರಿಯ ಸೇನಾಧಿಕಾರಿಗಳು ಅಥವಾ ಹಿರಿಯ ರಾಯಭಾರಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಬೇಕು . ಪ್ರಸ್ತುತ ಪ್ರತಿಪಕ್ಷ ನಾಯಕರಿಗೆ ಕೇವಲ ಮಾಧ್ಯಮಗಳ ಮಾಹಿತಿ ಮಾತ್ರ ಸಿಗುತ್ತಿದ್ದು, ಇದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಗಡಿ ಸಂಘರ್ಷದ ಕುರಿತಾಗಿ ಪ್ರತಿಪಕ್ಷ ನಾಯಕರಿಗೆ ಪ್ರಸ್ತುತ ಪರಿಸ್ಥಿತಿ ಯ ಮತ್ತು ಮುಂದಿನ ಬೆಳವಣಿಗೆಯ ಮಾಹಿತಿಯನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ
ಗಡಿಯ ಉದ್ವಿಗ್ನತೆ ಕುರಿತಾಗಿ ಮಾಧ್ಯಮಗಳು ಪ್ರಚೋದನಾತ್ಮಕ ಮತ್ತು ಸುಳ್ಳು ಮಾಹಿತಿಗಳನ್ನು ಬಿತ್ತರಿಸುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಾದ ಅಗತ್ಯವಿದೆ. ಹಾಗೆಂದು ಇದರ ಅರ್ಥ ವಿಮರ್ಶೆ ಹಾಗೂ ವಾಸ್ತವ ವರದಿಗಳನ್ನು ನಿಲ್ಲಿಸಬೇಕು ಎಂದರ್ಥವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಸಂಯಮದಿಂದ ವರ್ತಿಸುವ ಅಗತ್ಯವಿದ್ದು, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪರಸ್ಪರ ಸಹಕಾರದ ಅಗತ್ಯವಿದೆ. ಆದರೆ ಸರ್ಕಾರವನ್ನು ಪ್ರಶ್ನೆ ಮಾಡಬಾರದು ಎಂದು ಅಲ್ಲ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಉದ್ದೇಶಕ್ಕಾಗಿ ಸೇನೆಯ ಹೆಸರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಸೈನ್ಯದ ಹೆಸರು ಯಾವತ್ತೂ ದುರ್ಬಳಕೆಯಾಗಕೂಡದು. ಅಲ್ಲದೆ ಚೈನಾ ವಸ್ತುಗಳನ್ನು ಬಹಿಷ್ಕಾರ ಮಾಡುವ ನಿಲುವುಗಳನ್ನು ಸರ್ಕಾರ ಬೆಂಬಲಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.








