ಮಂಗಳೂರು: ಎಷ್ಟೇ ಎಚ್ಚರಿಕೆ ವಹಿಸಿದರೂ ಸೈಬರ್ ವಂಚನೆಗಳು ಮಾತ್ರ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಸೈಬರ್ ವಂಚಕರು ಒಂದಿಲ್ಲೊಂದು ಕುತಂತ್ರದಿಂದ ಜನರನ್ನು ಮೋಸಗೊಳಿಸುವ ಹಾದಿ ಹಿಡಿಯುತ್ತಿದ್ದಾರೆ.
ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಅವರ ಹೆಸರಿನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾಟ್ಸಪ್ಗೆ ನಕಲಿ ಎಪಿಕೆ ಮಾದರಿಯ ಫೈಲ್ ಕಳುಹಿಸಿ ಪೂರ್ತಿ ಮೊಬೈಲ್ನ್ನೆ ಹ್ಯಾಕ್ ಮಾಡಿ ಅಕೌಂಟ್ಗಳಲ್ಲಿ ಇರುವ ಹಣ ದೋಚಿದ್ದಾರೆ. ಮಂಗಳೂರಿನ ಯದುನಂದನ್ ಆಚಾರ್ಯ ಎಂಬವರಿಗೂ ಸೈಬರ್ ಖದೀಮರು ವಂಚಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ನಿಮ್ಮ ವಾಹನದ ದಂಡ ಪಾವತಿ ಬಾಕಿ ಇದೆ ಎಂಬ ಮೆಸೇಜ್ ಕಳುಹಿಸಿದ್ದಾರೆ. ದಂಡ ಪಾವತಿಗೆ ವಾಹನ್ ಪರಿವಾಹನ್ ಎಂಬ ಸಾರಿಗೆ ಇಲಾಖೆಯ ಆ್ಯಪ್ನ ಎಪಿಕೆ ಫೈಲ್ ಸಹ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇನ್ಸ್ಟಾಲ್ ಮಾಡಿ ದಂಡ ಪಾವತಿಸುವಂತೆಯೂ ಮೇಸೆಜ್ನಲ್ಲಿ ಹೇಳಲಾಗಿದೆ.
ಹೀಗಾಗಿ ಯದುನಂದನ್ ಇನ್ಸ್ಟಾಲ್ ಮಾಡಿದ್ದಾರೆ. ಇನ್ಸ್ಟಾಲ್ ಮಾಡುತ್ತಿದ್ದಂತೆ ಅವರ ಮೊಬೈಲ್ ಸಂಪೂರ್ಣವಾಗಿ ಸೈಬರ್ ವಂಚಕರ ನಿಯಂತ್ರಣಕ್ಕೆ ಹೋಗಿದೆ. ಕೂಡಲೇ ಅವರ ಪ್ಲಿಪ್ಕಾರ್ಟ್ ಖಾತೆ ಹ್ಯಾಕ್ ಮಾಡಿ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿಂದ 1.31 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಪೋನ್, 1 ಇಯರ್ಪಾಡ್ ಮತ್ತು ಗಿಫ್ಟ್ ವೋಚರ್ಗಳನ್ನು ಖರೀದಿಸಿದ್ದಾರೆ. ಕೂಡಲೇ ಯದುನಂದನ್ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಯಿಂದ ಐದು ಐಫೋನ್-15, ಎರಡು ಆಂಡ್ರಾಯ್ಡ ಫೋನ್, ಎರಡು ಇಯರ್ಪಾಡ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಸೇರಿದಂತೆ 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.








