ಗಣೇಶನ ಭೂಲೋಕದ ಯಾತ್ರೆಗೂ ಮೊದಲಿನ ಕೈಲಾಸದ ದೃಶ್ಯ; ಕದ್ದು ಹೊರಟ ಗಣಪ ಕೊನೆಗೂ ಮಾಸ್ಕ್ ತೊಟ್ಟೇ ಬಂದ ಎಂಬಲ್ಲಿಗೆ
ಭಾದ್ರಪದ ಶುಕ್ಲ ಚೌತಿ ತಿಥಿ ಬರಲು ಇನ್ನೂ ಮುಕ್ಕಾಲು ಗಂಟೆ ಬಾಕಿಯಿತ್ತೇನೋ, ಬೆಳಗಿನ ಸವಿ ನಿದ್ದೆಯಲ್ಲಿದ್ದ ಪಾರ್ವತಿಗೆ ಅರೆ ಬರೆ ಎಚ್ಚರ ಅರೆ ಬರೆ ಮಂಪರು. ಹಿಂದಿನ ದಿನವಷ್ಟೇ ಅವಳ ಬರ್ತ್ ಡೇ ಪ್ರಯುಕ್ತ ಇಡೀ ದಿನ ಓಡಾಡಿದ ಸುಸ್ತು. ಅವಳನ್ನು ಇನ್ವೈಟ್ ಮಾಡಿದ್ದ ಮನೆಗಳು ಒಂದಾ ಎರಡಾ. ಎಲ್ಲರೂ ಬೇಕಾದವರೇ, ಒಂದು ಮನೆಗೆ ಹೋಗಿ ಇನ್ನೊಂದು ಮನೆಗೆ ಚಕ್ಕರ್ ಹಾಕುವಂತೇ ಇಲ್ಲ. ಎಲ್ಲಾ ಕಡೆ ಹೋಗಲೇಬೇಕು. ರಾಶಿ ರಾಶಿ ಬಾಗಿನ ಸ್ವೀಕರಿಸಲೇಬೇಕು. ಅವಳ ಮುಂಗೈಯಂತೂ ಸುಹಾಸಿನಿ ಕಂಕಣಗಳಿಂದ ತುಂಬಿ ಹೋಗಿತ್ತು. ಜೊತೆಗೆ ವಿಪರೀತ ತರಹೇವಾರಿ ಭಕ್ಷ್ಯಗಳ ಮೃಷ್ಟಾನ್ನ ಭೋಜನ. ಎಲ್ಲಾ ಕಡೆ ಚೂರು ಚೂರೇ ತಿಂದರೂ, ನೆತ್ತಿಗೆ ತೇಗು ಹತ್ತುವಷ್ಟು ಹೊಟ್ಟೆ ಭರ್ತಿ. ಕೈಲಾಸಕ್ಕೆ ಬಂದವಳೇ ತನ್ನ ಫೇರೋಶಿಯಸ್ ಫೋರ್ ಲೆಗ್ ವಾಹನ ಸಿಂಹವನ್ನು ಬೋನಿಗೆ ಹಾಕಲೂ ತ್ರಾಣವಿಲ್ಲದೇ; ಉಟ್ಟಿದ್ದ ರೇಷ್ಮೆ ಸೀರೆಯಲ್ಲೇ ದಿಂಬಿಗೆ ತಲೆ ಕೊಟ್ಟವಳಿಗೆ ಗಟ್ಟಿ ನಿದ್ದೆ.
ಕೈಲಾಸದ ಹಿಂದಿನ ಬಾಗಿಲ ಸದ್ದಿಗೆ ಪಾರ್ವತಿಗೆ ಥಟ್ಟನೇ ಎಚ್ಚರವಾಯ್ತು. ಕಣ್ಣಲ್ಲಿ ಇನ್ನೂ ನಿದ್ದೆಯ ಪಸರು ಹಾಗೆ ಜೋಲು ಎಳೆಯುತ್ತಿತ್ತು. ಆ ಅರೆಗಣ್ಣಿನಲ್ಲೂ ಅವಳು ಗಮನಿಸಿದ್ದಳು ಮಗ್ಗುಲಲ್ಲಿ ಗಣೇಶ ಇಲ್ಲ. ಅತ್ತ ಅಡುಗೆ ಮನೆಯ ಅಟ್ಟದಲ್ಲಿ ಅವನ ವಾಹನ ಮೂಷಿಕ ಮಹಾಶಯನ ಅಬ್ಬರ ಕಿವಿಗಪ್ಪಳಿಸುತ್ತಿದೆ.
“ಎಷ್ಟೇ ಮೆತ್ತಗೆ ಹೊರಟೇ ಅಂದರೂ ಈ ಮೂಷಿಕ ರಾಜ ಡಬ್ಬ ಬಡಿಯುವ ಸದ್ದು ಹೊರಡಿಸಿ, ಕೈಲಾಸದ ಮುಂಬಾಗಿಲಿಗೂ ಹಿಂಬಾಗಿಲ ಕಡೆಗೂ ಚಟುವಟಿಕೆಯಿಂದ ಓಡಾಡ್ತಿದ್ದಾನೆ. ಇವನು ಇವತ್ತು ಕೆಲಸ ಕೆಡಿಸ್ತಾನೆ; ಅಮ್ಮನಿಗೆ ಎಚ್ಚರ ಆದ್ರೆ ಸುಮ್ನೆ ಹಿತೋಪದೇಶ ಕೇಳ್ತಾ ಕೂರಬೇಕಾಗತ್ತೆ. ಈಗಾಗಲೇ ತಡ ಆಗ್ತಿದೆ. ಹಿಂಬಾಗಿಲ ತೆಗೆದು ಹೊರಗೆ ಹೆಜ್ಜೆ ಇಟ್ಟಿದ್ದ ವಿನಾಯಕ ಕೈ ಕೈ ಹಿಸುಕಿಕೊಳ್ತಾನೆ.
ಥಟಕ್ಕೆಂದು ಪಾರ್ವತಿಯ ನಿದ್ದೆ ಹಾರಿಹೋಯ್ತು. ಎದ್ದು ಹಾಸಿಗೆಯಲ್ಲಿ ಚೂಪು ಕಾಲಿಟ್ಟು ತಲೆಯನ್ನು ಅದರ ಮೇಲಿಟ್ಟು ಚಿಂತಿಸುವ ಭಂಗಿಯಲ್ಲಿ ಕುಳಿತು ಯೋಚಿಸತೊಡಗಿದಳು ಗೌರಿ. ಅವಳಿಗೆ ಗೊತ್ತು ಇವತ್ತು ಅವನು ಎಷ್ಟೇ ಹೇಳಿದ್ರೂ ಕೇಳಲ್ಲ. ಇವತ್ತು ಮಗನಿಗೆ ಬೈಯಲೂ ಸಾಧ್ಯವಿಲ್ಲ; ಕಿವಿ ಹಿಂಡಲೂ ಆಗಲ್ಲ: ಇವತ್ತು ಅವನ ಹ್ಯಾಪಿ ಬರ್ತ್ ಡೇ.
ಆ ಮೂಷಿಕನ ಬೆನ್ನ ಮೇಲೆ ಕೂತು ಇವತ್ತು ಊರಿಡೀ ಸುತ್ತುತಾನೆ. ಸಿಕ್ಕ ಸಿಕ್ಕಲ್ಲೆ ಹೊಟ್ಟೆ ಬಿರಿಯುವ ಹಾಗೆ ತಿಂತಾನೆ. ಅಲ್ಲಲ್ಲ! ಇವನೇ ಹುಡುಕಿಕೊಂಡು ಮನೆ ಮನೆಗೂ ಹೋಗಿ ತಾನೇ ಬಡಿಸಿಕೊಂಡು ತಿನ್ನುತ್ತಾನೆ. ವರ್ಷ ಪೂರ್ತಿ ಮಾಡಿಸಿದ ಫುಡ್ ಕಂಟ್ರೋಲ್ ಒಂದೇ ದಿನಕ್ಕೆ ಪಡ್ಚ; ಸತ್ಯನಾಶ. ತನ್ನ ಪ್ರೀತಿಯ ಮಗ ತನ್ನಂತೇ ಫುಡ್ಡಿ, ಭಯಾನಕ ತಿಂಡಿಪೋತ. ಅವನಿಗೆ ತರಹೇವಾರಿ ಭಕ್ಷ್ಯಗಳು ಬೇಕು. ವರೈಟಿ ವರೈಟಿ ತಿಂಡಿ ತಿನಿಸುಗಳು ಬೇಕು. ಮೋದಕ, ಕರಿಗಡುಬು, ಸಿಹಿಕಡುಬು, ಕಾರದ ಕಡುಬು, ಕಾಯಿ ಕಡುಬು, ಉದ್ದಿನ ಹಬೆಗಡುಬು, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಲಾಡು, ಅನೇಕ ತರಹದ ಉಂಡೆಗಳು, ಹಳದಿಯನ್ನ, ಪಾಯಸ ಪರಮಾನ್ನ, ಪಲ್ಯ, ಕೋಸಂಬರಿ, ಚಟ್ನಿ, ಸಾಸಿವೆ, ಗೊಜ್ಜು ಮುಂತಾದ ವ್ಯಂಜನಗಳು.. ಅಬ್ಬಬ್ಬಬ್ಬ ಗಣೇಶನ ಊಟ ಭರ್ಜರಿಯೂ ಹೌದು, ಪಾಂಗಿತವೂ ಹೌದು, ಪುಷ್ಕಳವೂ ಹೌದು.
ಅವನಿಗೆ ಎಷ್ಟೇ ತಿಂದರೂ ತೃಪ್ತಿಯಾಗಲ್ಲ. ಕರಿದಿದ್ದು-ಹುರಿದಿದ್ದು, ಕುದಿಸಿದ್ದು-ತಣಿಸಿದ್ದು, ತಟ್ಟಿ ಬೇಯಿಸಿದ್ದು, ನಾದಿ ಸುಟ್ಟಿದ್ದು, ಸಿಹಿ, ಹುಳಿ, ಕಾರ, ಮಸಾಲೆ, ಎಲ್ಲಾ ತರಹದ ಸಮರುಚಿಯ, ಸಮರಸದ, ಸಮಪಾಕದ ಭೋಜನ ಬೇಕು. ಬರುವಾಗ ಪಾರ್ಸಲ್ ಸಹ ತಗೊಂಡು ದಾರಿಯಲ್ಲಿ ತಿನ್ನುತ್ತಲೇ ಕೈಲಾಸಕ್ಕೆ ವಾಪಾಸಾಗ್ತಾನೆ.
ಇದ್ಯಾವುದನ್ನೂ ತಿನ್ನದ, ಸದಾ ಫಾಸ್ಟಿಂಗ್, ಮೆಡಿಟೇಷನ್, ಡಯಟ್ ಫುಡ್ ಅಂತ ಬದುಕುವ ಪತಿ ಶಿವ, ಮೊದಮೊದಲು ಗಣೇಶ ಹೀಗೆ ತಿನ್ನೋ ಭರಾಟೆ ನೋಡಿ ಸಹಿಸೊಳ್ಳಲಾರದೇ ಗೊಣಗಾಡುತ್ತಿದ್ದ. ಆದರೆ ಈಗೀಗ ಅವನೂ ಸುಮ್ಮನಾಗಿಬಿಟ್ಟಿದ್ದಾನೆ. ಮಗನ ಹುಟ್ಟಿದ ದಿನವಾದ್ರೂ ಅವನಿಗಿಷ್ಟ ಬಂದ ಹಾಗೆ ತಿಂದುಕೊಂಡು ಚೆನ್ನಾಗಿರಲಿ. ವಾಪಾಸ್ ಕೈಲಾಸಕ್ಕೆ ಬಂದ ಮೇಲೆ ಯೋಗ, ವ್ಯಾಯಾಮ, ಜಾಗಿಂಗ್ ಮಾಡಿಸಿದರಾಯ್ತು ಅಂತಾನೆ ಶಿವ.
ಆದರೆ ಈ ಮಗಮಹಾರಾಯ ಹೋದವನು ಒಂದೇ ದಿನಕ್ಕೆ ಎಲ್ಲಿ ತಿರುಗಿ ಬರ್ತಾನೆ? ‘ಹೋದವನು ಹೋದಲ್ಲಿಯೇ ಶಿವಾಯನಮಃ’. ಅವನ ಅಪಾರ ಅಭಿಮಾನಿಗಳು ಸ್ನೇಹಿತರು, ಹಿಂಬಾಲಕರು, ಭಕ್ತರು ಅಂತಿದ್ದಾರಲ್ಲ ಅಲ್ಲಿ ಭೂಮಿ ಮೇಲೆ. ಅವರೇ ‘ನೀನ್ ಹೋಗಪ್ಪಾ ಸಾಕು’ ಅಂತ ದಬ್ಬುವ ತನಕ ಅವನಿಗೆ ಕೈಲಾಸದ ಯೋಚನೆಯೂ ಇರಲ್ಲ. ಶುರುಶುರುವಿನಲ್ಲಿ ಒಂದು ದಿನಕ್ಕೆಂದು ಹೋದವನು ಮೂರು ದಿನಗಳ ನಂತರವಾದ್ರೂ ವಾಪಾಸ್ ಬರ್ತಿದ್ದ. ಬರ್ತಾ ಬರ್ತಾ ಅದು 5 ದಿನ, 7 ದಿನ, 9 ದಿನ ಅಂತ ಹೆಚ್ಚಾಗ್ತಾ ಹೋಯ್ತು. ಈಗ 15 ದಿನಕ್ಕೆ ಬಂದು ನಿಂತಿದೆ.
ಹಾಸಿಗೆಯ ಎಡಗಡೆ ಮಲಗಿದ ಪತಿ ಶಿವ ನಿದ್ದೆಗಣ್ಣಲ್ಲಿ ಗಹಗಹಿಸಿ ನಕ್ಕಿದ್ದು ಕೇಳಿಸಿ ಶಿವನತ್ತ ನೋಡಿದಳು ಪಾರ್ವತಿ. ಶಿವ ನಿದ್ದೆಗಣ್ಣಲ್ಲಿ ನಕ್ಕಿದ್ದಲ್ಲ. ಎಚ್ಚರವಾಗಿಯೇ ಕಣ್ಣು ಬಿಟ್ಟು ಹೆಂಡತಿಯನ್ನೇ ತದೇಕಚಿತ್ತದಿಂದ ನೋಡುತ್ತಾ ನಗುತ್ತಿದ್ದ. ‘ಯಾಕ್ ನಗ್ತಿದ್ದೀಯಾ?’ ಕೇಳಿದಳು ಪಾರ್ವತಿ.
‘ನಿನ್ ಪ್ರೀತಿಯ ಸುಪುತ್ರನಿಗೆ ಹಾಡು, ಡ್ಯಾನ್ಸು, ಡ್ರಾಮಾ, ಆರ್ಕೆಸ್ಟ್ರಾ ಅಂತೆಂದ್ರೆ ಬಹಳ ಇಷ್ಟವಂತಲ್ಲ. ಅವನು ಡೊಳ್ಳು ಹೊಟ್ಟೆಗೆ ಆ ಹಾವು ಕಟ್ಕೊಂಡು, ಆ ಸೊಂಡಿಲಿ ಮೇಲೆ ನಿಂತು ಡ್ಯಾನ್ಸ್ ಮಾಡೋದನ್ನು ಕಲ್ಪಿಸಿಕೊಂಡೆ ಅಷ್ಟೆ’ ನಗುವನ್ನು ಮುಂದುವರೆಸಿಕೊಂಡೇ ಹೇಳಿದ ಶಿವ.
ಪಾರ್ವತಿಗೆ ರೇಗಿ ಹೋಯ್ತು. ‘ನಿಂಗೆ ನನ್ ಮಗನ್ನ ಆಡಿಕೊಳ್ದೇ ಇದ್ರೆ ತಿಂದಿದ್ದು ಅರಗಲ್ಲವಲ್ಲ. ನನ್ ಗಣಿ ಹಂಗೆಲ್ಲಾ ಬೀದಿ ಬೀದಿಲಿ ಕುಣಿಯಲ್ಲ. ಅವನು ಯಾರ್ ಮಗಾ ಹೇಳು? ಕೈಲಾಸವಾಸಿಯ ಪುತ್ರ. ಅವನಿಗೆ ಅಲ್ಲಿ ಸ್ಪೆಷಲ್ ಚೇರ್ ಹಾಕಿ ಕೂರಿಸಿ ಹಾಡಿ ಡ್ಯಾನ್ಸ್ ಮಾಡಿ ಖುಷಿ ಪಡಿಸ್ತಾರೆ ಗೊತ್ತಾ?’ ಅಂದವಳೇ ಸ್ವಲ್ಪ ಬಾಡಿದ ಮುಖದಿಂದ ‘ಈ ವರ್ಷ ಅಂತೂ ಹಾಡು, ಡ್ಯಾನ್ಸು, ನಾಟಕ, ಆರ್ಕೆಸ್ಟ್ರಾ ಎಲ್ಲಾ ಬಂದ್ ಆಗಿದ್ಯಂತೆ. ಅದೇನೋ ಕರೋನಾನೋ ಪರೋನಾನೂ ಬಂದಿದ್ಯಂತಲ್ಲ ಭೂಮಿಗೆ’
‘
ಚೀನಾದವರು ಕೊಟ್ಟಿದ್ದಂತೆ, ಕೋವಿಡ್-19, ಕರೋನಾ ವೈರಸ್ ಅಂತ ಪ್ಯಾಂಡೆಮಿಕ್ ಡಿಸೀಸ್’ ಸರಿಪಡಿಸಿದ ಶಿವ.
‘ಹಾಂ ಹಾಂ ಅದೇ, ಅದೇ.. ನಿಂಗೆಲ್ಲಾ ಗೊತ್ತಿರತ್ತಲ್ಲ. ಎಷ್ಟೇ ಆದ್ರೂ ನಿಂದೇ ಆಟ ಇದೆಲ್ಲಾ ಅಲ್ವಾ’ ಪತಿಯನ್ನು ಕುಟುಕಿದಳು ಗೌರಿ.
‘ಅಂತೂ ನಿನ್ ಮಗನಿಗೆ ತಮಾಷೆ ಮಾಡಿ ನಕ್ಕಿದ್ದಕ್ಕೇ ಸೇಡು ತೀರಿಸಿಕೊಂಡೆ, ಸರಿ ನಾನ್ ಮಲಗ್ತೀನಿ. ನಿನ್ ಮಗ ಇನ್ನೂ ಹೊರಟಿಲ್ಲ ಅನ್ಸತ್ತೆ, ಯಾವಾಗ ವಾಪಾಸ್ ಬರ್ತಾನೋ ಕೇಳು. ಹಾಗೆ ಬರಬೇಕಾದ್ರೆ ತೆಪ್ಪಗೆ ಬರೋಕೆ ಹೇಳು. ದಾರೀಲಿ ಆ ಚಂದ್ರನ ಜೊತೆ ಜಗಳ ಕಾಯ್ತ ನಿಲ್ಲೋದು ಬೇಡ. ಶಿವನ ಮಗ ಜಗಳಗಂಟ ಅಂತ ನನ್ ಮರ್ಯಾದೆ ತೆಗಿತಾರೆ ಜನ’
ಮಗ್ಗುಲು ಬದಲಾಯಿಸಿ ಹೊರಳಿ ಮತ್ತೆ ನಿದ್ದೆ ಮಾಡಲು ಯತ್ನಿಸಿದ ಶಿವ.
ಗಂಡನ ಉಪದೇಶ ಕೇಳಿ ಕೊಂಚ ಅಸಹನೆಯಿಂದಲೇ ಮೂತಿ ತಿರುಗಿಸಿದ ಪಾರ್ವತಿ ಹಿತ್ತಿಲ ಬಾಗಿಲ ಕಡೆ ನಡೆದಳು. ಗಣೇಶ ಯಾವಾಗಲೂ ಕೈಲಾಸ ಬಿಟ್ಟು ಭೂಮಿಗೆ ಬರೋದೆ ಹಿತ್ತಿಲ ಬಾಗಿಲ ಮೂಲಕ. ಅದು ಅವಳಿಗೆ ಗೊತ್ತು. ಅವಳೆಣಿಕೆ ಸುಳ್ಳಾಗಲಿಲ್ಲ. ಬಾಗಿಲ ಪಕ್ಕಾನೇ ನಿಂತು ಹಣುಕಿ ಹಣುಕಿ ನೋಡ್ತಿದ್ದ ಲಂಭೋದರ, ಅಮ್ಮನೇ ಎದುರು ಬಂದು ನಿಂತಿದ್ದು ನೋಡಿ ಪ್ಯಾಲಿ ನಗೆ ನಕ್ಕ. ಇನ್ನು ಅಮ್ಮ ಉಪದೇಶ ಶುರು ಮಾಡ್ತಾಳೆ. ಈ ಮೂಷಿಕ ರಾಜ ಸರಿಯಾಗಿ ಸಿಕ್ಕಿಸಿದ ಅಂದುಕೊಂಡ. ಅತ್ತ ಪಾರ್ವತಿಯೂ ಇವನಿಗೆ ಈ ಸಲವಾದ್ರೂ ಬುದ್ದಿ ಹೇಳೋದು ಬೇಡ. ಎಷ್ಟಾದ್ರೂ ದಿನ ಇರಲಿ. ಹೇಗಿದ್ರೂ ಭೂಮಿ ಮೇಲೆ ವೈರಸ್ ಹಾವಳಿ ಇರೋದ್ರಿಂದ ಇವನನ್ನು ಅವರು ಖಂಡಿತಾ ಬೇಗ ವಾಪಾಸ್ ಕಳಿಸ್ತಾರೆ. ಸುಮ್ಮನೆ ಮುದ್ದು ಮಾಡಿ ಬೈ ಹೇಳಿದ್ರಾಯ್ತು ಎಂದುಕೊಂಡಳು.
ಆಗ ಬಂದ ಮೂಷಿಕ ರಾಜ. ಬಾಗಿಲಲ್ಲೆ ಪಾರ್ವತಿಯನ್ನು ಕಂಡು ಜೊತೆಗೆ ಸಣ್ಣಗೆ ಸಿಟ್ಟಿನಲ್ಲಿದ್ದ ಗಣೇಶನ್ನ ನೋಡಿ ಮೂಷಿಕರಾಜನಿಗೆ ಇವತ್ತು ಗ್ರಹಚಾರ ಕೆಡ್ತು ಅನ್ನಿಸಿತು. ಪಾರ್ವತಿ, ಪುತ್ರ ಗಣೇಶನನ್ನು ಮೃದುವಾಗಿ ಅಪ್ಪಿಕೊಂಡು ಅವನ ಹಣೆಗೊಂದು ಸಿಹಿಮುತ್ತು ಕೊಟ್ಟಳು. ‘ಹ್ಯಾಪಿ ಜರ್ನಿ ಮಗನೇ, ಸೇಫ್ ಆಗಿ ಹೋಗಿ ಬಾ. ಹಾಂ ತುಂಬಾ ದಿನ ಇರಬೇಡಾ ಅಲ್ಲೇನೋ ವೈರಸ್ ಇದ್ಯಂತೆ. ಮಾಸ್ಕ್ ಹಾಕ್ಕೊಂಡು ಹೋಗು. ಈ ಮೂಷಿಕರಾಜನಿಗೂ ಒಂದು ಮಾಸ್ಕ್ ಹಾಕಿಸು. ಟೇಕ್ ಕೇರ್ ಪುಟ್ಟಾ’ ಎಂದಳು.
ತಾಯಿಯಿಂದ ಇಂದು ವಿಶೇಷ ಹಿತೋಪದೇಶವಿಲ್ಲ ಎಂದು ತಿಳಿಯುತ್ತಿದ್ದಂತೆ ಗಣೇಶನ ಮೊರದಗಲ ಕಿವಿಗಳು ಸಂತಸದಿಂದ ನಲಿದಾಡಿದವು. ಅಮ್ಮನಿಗೆ ಬಾಯ್ ಎಂದು ಕೈ ಆಡಿಸಿದವನೇ ಮೂಷಿಕರಾಜನ ಬೆನ್ನ ಮೇಲೆ ಕುಪ್ಪಳಿಸಿ ಕುಳಿತು ಭೂಲೋಕದ ಕಡೆಗೆ ಹೊರಟೇಬಿಟ್ಟ. ದೂರದಿಂದಲೇ ಗಸಗಸೆ ಪಾಯಿಸ,
ಮೋದಕ, ಕರಿಗಡುಬಿನ ಘಮ ಅವನ ಮೂಗಿಗೆ ಬಡಿದು ಬಾಯಲ್ಲಿ ನೀರೂರಿಸಿದ ಕಾರಣ ಅವನ ವೇಗ ಹೆಚ್ಚಾಯಿತು.
(ಗಣೇಶ ಚತುರ್ಥಿಯ ಪ್ರಕೃತಿ ಮುದ್ದಿನ ಗಣಪನ ಕುರಿತಾದ ಕಾಲ್ಪನಿಕ ಕಥಾನಕ)
-ವಿಶ್ವಾಸ್ ಭಾರದ್ವಾಜ್ (ವಿಭಾ)








