ಟೈಗರ್ ಗೆ ದಾದಾ ಶೋಕಾಸ್ ನೋಟಿಸ್
ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಸೋತ ನಂತರ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಕೇವಲ ಒಬ್ಬ ಹಿರಿಯ ಆಟಗಾರನಾಗಿ ಮಾತ್ರ ವಿರಾಟ್ ಕೊಹ್ಲಿ ತಂಡದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ ನಾಯತ್ವದಿಂದ ಕೆಳಗಿಳಿಯುತ್ತಾ ವಿರಾಟ್, ಇಷ್ಟು ದಿನಗಳ ಕಾಲ ನಾಯಕತ್ವ ನೀಡಿದ ಬಿಸಿಸಿಐಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದರು.
ಈಗ ಕೊಹ್ಲಿ ಎಲ್ಲಾ ಫಾರ್ಮ್ಯಾಟ್ಗಳ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ವಿರಾಟ್ ನಾಯಕತ್ವದ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ.
ಆದ್ರೆ ಇದೇ ಕೊಹ್ಲಿ.. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನಮಾಧ್ಯಮಗಳ ಮುಂದೆ ಬಂದು ಬಿಸಿಸಿಐ ಜತೆಗೆ ಗಂಗೂಲಿ ಬಗ್ಗೆ ಸಂವೇದನಾಶೀಲ ಮಾತುಗಳನ್ನಾಡಿದ್ದರು. ಈ ವಿವಾದವು ತುಂಬಾ ಚರ್ಚೆಗೆ ಗ್ರಾಸವಾಗಿತ್ತು.
ನನಗೆ ಮಾಹಿತಿ ನೀಡದೇ ಬಿಸಿಸಿಐ ನನ್ನನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದೆ. ನಾಯಕತ್ವದಿಂದ ಕೆಳಗಿಳಿಯದಂತೆ ಗಂಗೂಲಿ ಕೇಳಲಿಲ್ಲ ಎಂದು ಬೇಸರ ಹೊರಹಾಕಿದ್ದರು. ಇದರೊಂದಿಗೆ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದ ತಾರಕ್ಕೇರಿತ್ತು. ಈ ಮಧ್ಯೆ ಭಾರತದ ಮಾಜಿ ಕ್ರಿಕೆಟಿಗರು ಮಧ್ಯಪ್ರವೇಶಿಸಿ ವಿವಾದ ಶಮನಗೊಳಿಸಿದರು.
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಕೊಹ್ಲಿ ತಮ್ಮ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡು ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದರಂತೆ. ಆದರೆ, ಬಿಸಿಸಿಐ ಮಂಡಳಿಯ ಸದಸ್ಯರೊಬ್ಬರ ಒತ್ತಡಕ್ಕೆ ಮಣಿದು ಗಂಗೂಲಿ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇಂಡಿಯಾ ಹೆಡ್ ನ್ಯೂಸ್ ಪ್ರಕಾರ, ಗಂಗೂಲಿ ಅವರು ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಕರಡು ಪತ್ರವನ್ನು ಸಹಸಿದ್ಧಪಡಿಸಿದ್ದರು, ಆದರೆ ಮಂಡಳಿಯ ಸದಸ್ಯರು ಅಡ್ಡಿಪಡಿಸಿದ ನಂತರ ಗಂಗೂಲಿ ಈ ನಿರ್ಧಾರದಿಂದ ಹಿಂದೆ ಸರಿದಿದ್ದರು.









