ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರಲ್ಲಿ ಒಮ್ಮತ ಮೂಡದ ಹಿನ್ನೆಲೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜ್ಯಕ್ಕೆ ಆಗಮಿಸಿದ್ದಾರೆ. ಅದರಂತೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಗುಲಾಂ ನಬಿ ಭೇಟಿ ನೀಡಿದ್ದು, ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿ ಕುರಿತು ಕೂಡ ವಿವರಣೆ ಪಡೆದಿದ್ದಾರೆ. ಇದಾದ ಬಳಿಕ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ದೆಹಲಿ ಚುನಾವಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬ ಆಗುತ್ತಿದೆ ಎನ್ನಲಾಗಿತ್ತು. ಆದ್ರೆ ರಾಜ್ಯ ನಾಯಕರಲ್ಲೇ ಈ ಬಗ್ಗೆ ಒಮ್ಮತ ಇಲ್ಲದ ಕಾರಣ ದೆಹಲಿ ವರಿಷ್ಠರು ಇಷ್ಟು ದಿನ ಮೌನವಾಗಿದ್ದರು ಎನ್ನಲಾಗಿದೆ. ಈಗ ಅಂತಿಮ ಕಸರತ್ತಿಗೆ ಮುಂದಾಗಿರುವ ಹೈ ಕಮಾಂಡ್ ಗುಲಾಂ ನಬಿ ಆಜಾದ್ ಅವರನ್ನು ರಾಜ್ಯಕ್ಕೆ ಕಳುಹಿಸಿದ್ದು, ಇನ್ನಾದರೂ ಈ ಗೊಂದಲಕ್ಕೆ ತೆರೆ ಬಿದ್ದು, ಶೀಘ್ರದಲ್ಲಿ ಅಧ್ಯಕ್ಷರ ನೇಮಕವಾಗಲಿದೆಯಾ ಕಾದು ನೋಡಬೇಕಿದೆ.








