ಮಂಡ್ಯ ಜನತೆಗೆ ಗಣೇಶ ಹಬ್ಬದ ಗಿಫ್ಟ್ – 4 ವರ್ಷದ ನಂತರ ಮೈ ಶುಗರ್ ಕಾರ್ಖಾನೆ ಪ್ರಾರಂಭ…
ಮಂಡ್ಯ ಜನತೆಗೆ ಗೌರಿ ಗಣೇಶ ಹಬ್ಬಕ್ಕೆ ಸರ್ಕಾರಿ ಭಾರಿ ಗಿಫ್ಟ್ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯು ಆಗಸ್ಟ್ 31 ರಿಂದ ಪ್ರಾಯೋಗಿಕವಾಗಿ ಕಾರ್ಯವನ್ನು ಪುನರಾರಂಭಿಸಲಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಿಳಿಸಿದ್ದಾರೆ.
ಭಾನುವಾರ ನವೀಕರಣಗೊಂಡಿರುವ ಮೈಶುಗರ್ ಕಾರ್ಖಾನೆಯ ವಿವಿಧ ಘಟಕಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಸ್ಥಗಿತಗೊಂಡಿರುವ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸಲಾಗಿದ್ದು, ಇದಕ್ಕೆ ಹೆಚ್ಚು ಸಮಯ ತೆಗೆದುಕೊಂಡಿತು. ಸೆಪ್ಟೆಂಬರ್ 10 ರಂದು ಪ್ರಾಯೋಗಿಕವಾಗಿ ಕಬ್ಬು ಅರಿಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ, ಮೈಶುಗರ್ ಕಾರ್ಖಾನೆ ಪುನಶ್ಚೇತನಗೊಳಿಸಿದ್ದಾರೆ. ಭವಿಷ್ಯದಲ್ಲಿ ಕಾರ್ಖಾನೆ ಸಕ್ಕರೆ ಉತ್ಪಾದನೆ ನಿಲ್ಲುವುದಿಲ್ಲ ಎಂದು ಶಂಕರ ಮುನೇನಕೊಪ್ಪ ಹೇಳಿದರು.
ಮಂಡ್ಯ ತಾಲೂಕಿನ ಮೈಸೂರು ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದ 4 ಲಕ್ಷ ಟನ್ ಕಬ್ಬನ್ನು ಖರೀದಿಸಲು ಮೈಸೂರು ಕಾರ್ಖಾನೆ ಒಪ್ಪಂದ ಮಾಡಿಕೊಂಡಿದೆ. ಸೆಸ್ಕಾಂಗೆ ಬಾಕಿ ಉಳಿದಿದ್ದ 31 ಕೋಟಿ ರೂ. ವಿದ್ಯುತ್ ಬಿಲ್ ಅನ್ನು ಸರ್ಕಾರ ಪಾವತಿಸಿದೆ ಎಂದು ಸಚಿವರು ತಿಳಿಸಿದರು.
ಸಕ್ಕರೆ ನಾಡು ಮಂಡ್ಯ ಜನರಿಗೆ ಇದು ಸಂತಸದ ಸುದ್ದಿ. ಏಷ್ಯಾದಲ್ಲೇ ಎರಡನೇ ಅತೀದೊಡ್ಡ ಸಕ್ಕರೆ ಕಾರ್ಖಾನೆ ಎನ್ನುವ ಹೆಸರು ತಂದು ಕೊಟ್ಟ ಮಂಡ್ಯದ ಮೈಶುಗರ್ ನಾಲ್ಕು ವರ್ಷದ ನಂತರ ಪುನಾರಂಭವಾಗ್ತಿದೆ.








