ಬೆಂಗಳೂರು: ಕೊರೊನಾದಿಂದಾಗಿ ಜನರ ಬದುಕು ಬರ್ಬಾದ್ ಆಗಿದೆ. ಲಾಕ್ ಡೌನ್ ಯಿಂದಾಗಿ ಬಡ ಜನರು ಊಟವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಬಡವರಿಗೆ ಉಚಿತ ಆಹಾರ ವಿತರಿಸಿ ನೆರವಾಗಲು ರಾಜ್ಯ ಸರ್ಕಾರಕ್ಕೆ ಇಚ್ಚಾಶಕ್ತಿ ಇಲ್ಲ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯರು ಆಗಿರುವ ಶಿವರಾಜ್ ಏರ್ಪಡಿಸಿದ್ದ ಉಚಿತ ದವಸ ಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಆದ್ರೆ ನಾವು ನೀಡಿದ್ದ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಗೊಳಿಸಿಲ್ಲ.
ಇಂದಿರಾ ಕ್ಯಾಂಟೀನ್ ನಲ್ಲಿ ಒಂದೆರಡು ದಿನ ಮಾತ್ರ ಉಚಿತವಾಗಿ ಊಟ ಕೊಟ್ಟರು. ಆಗ ಪ್ರತಿ ದಿನ ಏಳರಿಂದ ಒಂಬತ್ತು ಸಾವಿರ ಮಂದಿ ಊಟ ಮಾಡುತ್ತಿದ್ದರು. ಈಗ 10 ರೂಪಾಯಿ ದರ ನಿಗದಿ ಮಾಡಲಾಗಿದೆ. ಜನರ ಬಳಿ ದುಡ್ಡಿಲ್ಲ. ಹಾಗಾಗಿ ಪ್ರತಿ ದಿನ 100 ರಿಂದ 150 ಮಂದಿ ಮಾತ್ರ ಊಟ ಮಾಡುತ್ತಿದ್ದಾರೆ. ಜನರಿಗೆ ಉಚಿತವಾಗಿ ಊಟ ಹಾಕುವುದು ಸರ್ಕಾರದ ಜವಾಬ್ದಾರಿ ಅದನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಸರ್ಕಾರದ ವಾದವನ್ನು ಅಲ್ಲಗೆಳೆದ ಸಿದ್ದರಾಮಯ್ಯ!
ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಳ್ಳತನವಾಗುತ್ತಿದೆ ಎಂಬ ಆರೋಪ ಸುಳ್ಳಾಗಿದೆ. ನಾವು ಯಾವುದೇ ಯೋಜನೆ ಜಾರಿಗೊಳಿಸಿದರೂ ಶೇ.5ರಿಂದ10ರಷ್ಟು ದುರುಪಯೋಗ ಸಾಧ್ಯತೆ ಇದ್ದೇ ಇರುತ್ತೆ. ಸರ್ಕಾರ ನಿರ್ಮಿಸುತ್ತಿರುವ ರಸ್ತೆ, ಸೇತುವೆ, ಶಾಲೆ ನಿರ್ಮಾಣ ಹೀಗೆ ಎಲ್ಲಾ ಯೋಜನೆಗಳು ನೂರಕ್ಕೆ ನೂರು ಪರಿಶುದ್ಧವಾಗಿರುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನೆಗಡಿಯಾಗಿದೆ ಎಂದು ಮೂಗು ಕತ್ತರಿಸಲಾಗುತ್ತದೆಯೇ, ನೆಗಡಿ ವಾಸಿ ಮಾಡಲು ಔಷಧಿ ಕೊಡಬೇಕು. ಯೋಜನೆಯಲ್ಲಿ ದುರುಪಯೋಗವಾಗುತ್ತಿದ್ದರೆ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಯೋಜನೆಯನ್ನೇ ರದ್ದು ಪಡಿಸಬಾರದು ಎಂದು ಹೇಳಿದರು.








