ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇತ್ತೀಚೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ನೀಡಿದ ಅನಿರೀಕ್ಷಿತ ಭೇಟಿ ಮತ್ತು ಅಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಈಗ ನ್ಯಾಯಾಲಯದ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಮಿಕರ ಹಿತರಕ್ಷಣೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಡಿ ಕೆ ಶಿವಕುಮಾರ್ ಅವರ ಈ ನಡೆಯನ್ನು ಮುಕ್ತಕಂಠದಿಂದ ಕೊಂಡಾಡಿದೆ.
ಗಿಮಿಕ್ ಎನ್ನುವವರಿಗೆ ಹೈಕೋರ್ಟ್ ತಕ್ಕ ಉತ್ತರ
ಮಂಗಳವಾರ ಬೆಳ್ಳಂಬೆಳಿಗ್ಗೆ ಯಶವಂತಪುರ ಮಾರುಕಟ್ಟೆಗೆ ಭೇಟಿ ನೀಡಿದ್ದ ಡಿ ಕೆ ಶಿವಕುಮಾರ್, ಅಲ್ಲಿನ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಶುಂಠಿಯ ಗುಣಮಟ್ಟ ಮತ್ತು ದರಗಳ ಬಗ್ಗೆ ಮಾಹಿತಿ ಪಡೆದಿದ್ದರು. ಅಷ್ಟೇ ಅಲ್ಲದೆ, ಮಾರುಕಟ್ಟೆಯ ಕಾರ್ಮಿಕ ಮಹಿಳೆಯರ ಜೊತೆ ನೆಲದ ಮೇಲೆ ಕುಳಿತು ಅವರ ಕಷ್ಟಸುಖಗಳನ್ನು ವಿಚಾರಿಸಿದ್ದರು. ಈ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಪೀಠವು, ರಾಜಕೀಯವಾಗಿ ಕೆಲವರು ಇದನ್ನು ಗಿಮಿಕ್ ಎಂದು ಟೀಕಿಸಬಹುದು. ಆದರೆ ವಾಸ್ತವದಲ್ಲಿ ಇದು ಅತ್ಯಂತ ಶ್ಲಾಘನೀಯ ಕೆಲಸ. ಇದೊಂದು ಗ್ರೇಟ್ ಜಾಬ್ ಎಂದು ಅಭಿಪ್ರಾಯಪಟ್ಟಿದೆ.
ಎಪಿಎಂಸಿಗಳ ದುಸ್ಥಿತಿಗೆ ನ್ಯಾಯಾಲಯದ ಕಳವಳ
ಇದೇ ಸಂದರ್ಭದಲ್ಲಿ ರಾಜ್ಯದ ಎಪಿಎಂಸಿ ಮಾರುಕಟ್ಟೆಗಳ ಇಂದಿನ ಪರಿಸ್ಥಿತಿಯ ಬಗ್ಗೆ ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿತು. ಇಂದು ಎಪಿಎಂಸಿ ಮಳಿಗೆಗಳು ಮೂಲ ಹಂಚಿಕೆದಾರರ ಬಳಿ ಉಳಿದಿಲ್ಲ. ಅವುಗಳನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿದೆ ಅಥವಾ ಬೇರೆಯವರ ನಿಯಂತ್ರಣದಲ್ಲಿವೆ. ಹಲವು ಊರುಗಳಲ್ಲಿರುವ ಎಪಿಎಂಸಿಗಳು ಅಕ್ಷರಶಃ ಸತ್ತು ಹೋಗಿವೆ ಎಂದು ಪೀಠವು ಕಟುವಾಗಿ ಟೀಕಿಸಿತು. ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಇರಬೇಕು ಎಂದು ನ್ಯಾಯಾಲಯ ಆಶಿಸಿದೆ.
ಬಂಡವಾಳಶಾಹಿಗಳ ಕಪಿಮುಷ್ಟಿಯಿಂದ ಕಾರ್ಮಿಕರ ಬಿಡುಗಡೆಗೆ ಸೂಚನೆ
ಕಾರ್ಮಿಕರ ಹಿತದೃಷ್ಟಿಯಿಂದ ಕಠಿಣ ಮಾತುಗಳನ್ನಾಡಿದ ನ್ಯಾಯಮೂರ್ತಿಗಳು, ಕಾರ್ಮಿಕರನ್ನು ಬಂಡವಾಳಶಾಹಿಗಳ ಶೋಷಣೆಯಿಂದ ಮುಕ್ತಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಕಾರ್ಮಿಕರು ವಿಷ ಕುಡಿದು ಸಾಯಬಾರದು ಎಂದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ಕನಿಷ್ಠ ವೇತನ ಕಾಯ್ದೆಯನ್ನು ಚಾಚೂ ತಪ್ಪದೆ ಜಾರಿಗೆ ತರಬೇಕು. ಕನಿಷ್ಠ ವೇತನ ನೀಡುವುದರಲ್ಲಿ ಯಾವುದೇ ತಾಂತ್ರಿಕ ನೆಪಗಳನ್ನು ಒಡ್ಡಬಾರದು ಎಂದು ಅರ್ಜಿದಾರರ ಪರ ವಕೀಲರಿಗೆ ಎಚ್ಚರಿಕೆ ನೀಡಿದರು.
ಕಾನೂನು ಗೌರವಿಸಿದರೆ ಅದು ನಿಮ್ಮನ್ನು ರಕ್ಷಿಸುತ್ತದೆ
ಕಾರ್ಮಿಕರ ಹಿತರಕ್ಷಣೆ ಮತ್ತು ಕಾನೂನಿನ ಪಾಲನೆಯ ಬಗ್ಗೆ ಕಿವಿಮಾತು ಹೇಳಿದ ನ್ಯಾಯಪೀಠ, ಕಾನೂನು ಇರುವುದು ಎಲ್ಲರಿಗೂ ರಕ್ಷಣೆ ನೀಡಲು. ನೀವು ಕಾನೂನನ್ನು ಗೌರವಿಸಿದರೆ ಮತ್ತು ಪಾಲಿಸಿದರೆ ಮಾತ್ರ ಕಾನೂನು ಸಂಕಷ್ಟದ ಸಮಯದಲ್ಲಿ ನಿಮ್ಮನ್ನು ರಕ್ಷಿಸುತ್ತದೆ. ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಗೌರವ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಮತ್ತು ಮಾರುಕಟ್ಟೆ ಸಮಿತಿಗಳ ಜವಾಬ್ದಾರಿ ಎಂದು ಹೈಕೋರ್ಟ್ ನೆನಪಿಸಿತು. ಡಿ ಕೆ ಶಿವಕುಮಾರ್ ಅವರ ಭೇಟಿಯು ಇಂತಹ ಸಕಾರಾತ್ಮಕ ಬದಲಾವಣೆಗಳಿಗೆ ನಾಂದಿಯಾಗಲಿ ಎಂದು ನ್ಯಾಯಾಲಯ ಆಶಿಸಿದೆ.







