ಬೆಂಗಳೂರು: ದೀಪಗಳ ಹಬ್ಬ ದೀಪಾವಳಿ ಹಬ್ಬಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಇವೆ. ದೀಪಾವಳಿ ಹಬ್ಬಕ್ಕೆ ಪಟಾಕಿಗಳೇ ಇಲ್ಲಾ ಅಂದ್ರೆ, ಊಟಕ್ಕೆ ಉಪ್ಪಿನ ಕಾಯಿ ಇಲ್ಲದಂತೆಯೇ ಸರಿ.
ಈಗಾಗಲೇ ಸಾಮಾನ್ಯ ಪಟಾಕಿಗಳ ಮಾರಾಟ ಮತ್ತು ದೀಪಾವಳಿ ಹಬ್ಬದ ದಿನಗಳಲ್ಲಿ ಸಿಡಿಸುವುದನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ. ಹೆಚ್ಚು ಶಬ್ದ ಹಾಗೂ ಮಾಲಿನ್ಯ ಮಾಡುವ ಪಟಾಕಿಗಳ ಬದಲು ಶೇ.30ರಷ್ಟು ಕಡಿಮೆ ಮಾಲಿನ್ಯ ಮಾಡುವ ಹಸಿರು ಪಟಾಕಿಗಳ ಮಾರಾಟ ಹಾಗೂ ಸಿಡಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಳೆಯಿಂದ ನಾಲ್ಕು ದಿನಗಳ ಕಾಲ ಗ್ರೀನ್ ಪಟಾಕಿ ಮಾರಾಟ ಆರಂಭವಾಗಿದ್ದು, ಪೊಲೀಸರು ಹಾಗೂ ಸ್ಥಳೀಯ ಆಡಳಿತಗಳಿಂದ ಗ್ರೀನ್ ಪಟಾಕಿ ಮಾರಾಟಕ್ಕೆ ಲೈಸೆನ್ಸ್ ನೀಡಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಹಸಿರು ಪಟಾಕಿ ಮಾರಾಟಕ್ಕೆ 60 ಮೈದಾನಗಳನ್ನು ಬಿಬಿಎಂಪಿ ಗುರುತಿಸಿದೆ. ಈ 60 ಮೈದಾನಗಳಲ್ಲಿ ಕೇವಲ 458 ಮಂದಿ ಮಾರಾಟಗಾರರಿಗೆ ಮಾತ್ರ ಗ್ರೀನ್ ಪಟಾಕಿ ಮಾರಲು ಲೈಸೆನ್ಸ್ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಹಸಿರು ಪಟಾಕಿ ಮಾತ್ರ ಮಾರಾಟ..!
ಸಿಎಸ್ಐಆರ್ ಮತ್ತು ನೀರಿ ಸಂಸ್ಥೆಯು ದೃಢೀಕರಿಸಿದ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಒಂದೊಮ್ಮೆ ನಿಯಮ ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಯನ್ನಷ್ಟೇ ಸಿಡಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ತಮಿಳುನಾಡಿನ ಶಿವಕಾಶಿಯಿಂದ ಸಾಕಷ್ಟು ಹಸಿರು ಪಟಾಕಿಯನ್ನು ಖರೀದಿಸಿರುವ ಮಾರಾಟಗಾರರು, ಮಳಿಗೆ ತೆರೆಯಲು ವಾರದ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಂದು ದಿನಗಳ ಕಾಲ ಪಟಾಕಿ ಮಾರಾಟಕ್ಕೆ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮಾರಾಟಗಾರರ ಅರ್ಜಿ ಪರಿಶೀಲನೆ ನಡೆಸಿ ಲೈಸೆನ್ಸ್ ನೀಡಲಿದ್ದಾರೆ.
ನ.16ವರೆಗೆ ಅಂದರೆ ಸೋಮವಾರದವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶವಿದ್ದು, ನಾಳೆಯಿಂದ ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದಾಗಿದೆ. ಪಟಾಕಿಗಳನ್ನು ಮಾರಾಟ ಮಾಡಲು ಸುರಕ್ಷಿತವಾಗಿರುವ ಬೆಂಗಳೂರು ನಗರದ 60 ಮೈದಾನಗಳ ಪಟ್ಟಿಯನ್ನು ಬಿಬಿಎಂಪಿ, ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದೆ. ಪೊಲೀಸ್ ಇಲಾಖೆಯು ವರ್ತಕರಿಂದ ಅರ್ಜಿ ಸ್ವೀಕರಿಸಿದ್ದು, ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣಾ ಪತ್ರ ನೀಡಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ.
ದಿಲ್ಲಿಯಲ್ಲಿ ಪಟಾಕಿ ಸಿಡಿಸಿದ ಇಬ್ಬರು ಅರೆಸ್ಟ್..!
ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಕಳೆದ ವಾರ ನ.7ರಿಂದಲೇ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧ ಮಾಡಲಾಗಿದೆ.
ಆದರೆ, ಸರ್ಕಾರದ ಕಠಿಣ ಆದೇಶ ಉಲ್ಲಂಘಿಸಿ ಪಟಾಕಿ ಸಿಡಿಸಿದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಬ್ಬದ ಖುಷಿಯಲ್ಲಿರಬೇಕಾದ ಇಬ್ಬರು ಈಗ ಜೈಲಿನ ಕಂಬಿ ಎಣಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ದೆಹಲಿಯಲ್ಲಿ ಈವರೆಗೆ ಪಟಾಕಿ ಮಾರಾಟ ಮಾಡಿದ ಆರೋಪದಡಿ 37 ಪ್ರಕರಣಗಳನ್ನು ದಾಖಲಿಸಿರುವ ದೆಹಲಿ ಪೊಲೀಸರು, 32 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 2794 ಕೆ.ಜಿ ಪಟಾಕಿಗಳನ್ನು ಜಪ್ತಿ ಮಾಡಲಾಗಿದೆ.
ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ನ.7ರಿಂದ 30ರವರೆಗೆ ದೆಹಲಿಯಲ್ಲಿ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel