ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗಿಲ್ವಾ ಎಂಎಲ್ ಸಿ ಭಾಗ್ಯ!?
ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ರಾಜ್ಯದಲ್ಲಿ ಕಮಲ ಅರಳೋದಕ್ಕೆ ಕಾರಣವಾದ ಹೆಚ್.ವಿಶ್ವನಾಥ್ ಅಂಡ್ ಟೀಂಗೆ ಭಾರಿ ನಿರಾಸೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅದರಲ್ಲೂ ಬೈ ಎಲೆಕ್ಷನ್ ನಲ್ಲಿ ಸೋತಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗೆ ರಾಜ್ಯ ಬಿಜೆಪಿ ಭಾರಿ ಹೊಡೆತ ನೀಡಲಿದೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಮಂತ್ರಿಗಿರಿ ಕನಸಿನಲ್ಲಿರುವ ಈ ಇಬ್ಬರು ನಾಯಕರ ಕನಸು ಕನಸಾಗಿಯೇ ಉಳಿಯಲಿದೆ.

ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗಿಲ್ಲ ಎಂಎಲ್ ಸಿ ಭಾಗ್ಯ! ಈ ಮಾತು ನಾವು ಹೇಳುತ್ತಿರೋದಲ್ಲ. ಬದಲಾಗಿ ಬಿಜೆಪಿಯ ಪ್ರಭಾವಿ ಮುಖಂಡರೇ ಹೇಳ್ತಿರೋ ಮಾತು.
ಹೌದು..! ಉಪಕದನದಲ್ಲಿ ಸೋತು ನಿರಾಸೆ ಅನುಭವಿಸಿದ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಎಂಎಲ್ ಸಿಗಳಾಗುವ ಮೂಲಕ ಸಚಿವರಾಗಬಹುದೆಂದುಕೊಂಡಿದ್ದರು. ಅದೇ ವಿಶ್ವಾಸದಲ್ಲಿ ಕೂಡ ಇದ್ದಾರೆ. ಆದ್ರೆ ಬಿಜೆಪಿ ನಾಯಕರು ಇವರ ಕನಸಿಗೆ ನೀರೆರಚುವ ಮಾತುಗಳನ್ನಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಡಿಸಿಎಂ ಅಶ್ವಥ್ ನಾರಾಯಣ ನೀಡಿದ ಹೇಳಿಕೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಶ್ವಥ್ ನಾರಾಯಣ್, ಉಪಚುನಾವಣೆಯಲ್ಲಿ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿತ್ತು. ಆದ್ರೆ ಅವರು ಸೋಲು ಕಂಡಿದ್ದಾರೆ. ನಾವು ವಿಧಾನ ಪರಿಷತ್ ನಲ್ಲಿ ಟಿಕೆಟ್ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.
ಡಿಸಿಎಂರ ಇದೇ ಹೇಳಿಕೆ ಈಗ ವಿಶ್ವನಾಥ್ ಅಂಡ್ ಟೀಂ ನಲ್ಲಿ ಮಿಂಚಿನ ಸಂಚಲನವನ್ನು ಸೃಷ್ಠಿ ಮಾಡಿದೆ. ಅಲ್ಲದೆ ರಾಜಕೀಯ ಪಂಡಿತರೂ ಕೂಡ ವಿಶ್ವನಾಥ್, ನಾಗರಾಜ್ ಗೆ ಎಂಎಲ್ ಸಿ ಟಿಕೆಟ್ ಡೌಟ್ ಎನ್ನುತ್ತಿದ್ದಾರೆ.

‘ಹಣೆಯಲ್ಲಿ ಬರೆದಿದ್ದರೇ ಆಗುತ್ತೆ’
ಬಿಜೆಪಿ ನಾಯಕರ ಹೇಳಿಕೆಗಳು ಒಂದು ಕಡೆಯಾದ್ರೆ.. ಕೆಲ ದಿನಗಳ ಹಿಂದೆ ಎಂಟಿಬಿ ನಾಗರಾಜ್ ಅವರೇ ತಮಗೆ ಎಂಎಲ್ ಸಿ ಟಿಕೆಟ್ ಸಿಗೋದು ಡೌಟ್ ಎನ್ನುವ ರೀತಿ ಮಾತನಾಡಿದ್ದಾರೆ.
ಒಂದು ವಾರದ ಹಿಂದೆ ವಿಧಾನಪರಿಷತ್ ಚುನಾವಣೆ ವಿಚಾರವಾಗಿ ಸಿಎಂರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ಪರಿಷತ್ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಏನು ತಿರ್ಮಾನ ತೆಗೆದುಕೊಳ್ಳುತ್ತಾರೋ ಆ ತೀರ್ಮಾನಕ್ಕೆ ನಮ್ಮ ಒಪ್ಪಿಗೆ ಇದೆ, ತ್ಯಾಗಕ್ಕೆ ಬೆಲೆ ಸಿಗುವ ಸಮಯ ಬಂದಾಗ ಸಿಗುತ್ತದೆ ಅದಕ್ಕೆ ಕಾದು ನೋಡಬೇಕು. ಇನ್ನೂ ಕಾಯುವ ತಾಳ್ಮೆ ಶೇ.100ರಷ್ಟು ಇದೆ. ಜನರಲ್ ಎಲೆಕ್ಷನ್ ಬೇಕಾದರೂ ಬರಲಿ ಅದಕ್ಕೂ ಬೇಕಾದರೂ ಒಂದು ಸಲ ನಿಂತು ಬಿಡೋಣ. ಕೊಟ್ಟ ಮಾತು ಭರವಸೆ ಈಡೇರಿಸಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದಾರೆ. ನಾವು ಸೋತಿದ್ದೇವೆ. ವಿಧಾನ ಪರಿಷತ್ ಗೆ ಹೋಗುವುದು ಹಣೆಬರಹದಲ್ಲಿ ಬರೆದಿದ್ರೆ ಆಗುತ್ತದೆ. ಇಲ್ಲದಿದ್ದರೆ ಆಗಲ್ಲ. ಹಣೆಬರಹದಲ್ಲಿ ಬರೆದಿರಬೇಕು, ದೇವರ ಅನುಗ್ರಹ, ಪಕ್ಷದ ಮುಖಂಡರ ಆಶೀರ್ವಾದ ಇದ್ದಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಏನಾಗುತ್ತದೆ ಅಂತಾ ಮುಂದೆ ನೋಡೋಣ ಎಂದಿದ್ದಾರೆ.
ಒಟ್ಟಾರೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನೇ ನಂಬಿಕೊಂಡಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮಂತ್ರಿಗಳಾಗುತ್ತಾರಾ ಇಲ್ಲವಾ ಎಂಬುವುದಕ್ಕೆ ಕಾಲವೇ ಉತ್ತರಿಸಬೇಕಿದೆ.








