ಬೆಂಗಳೂರು: ಕಳೆದ ವರ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿ ಹುಣಸೂರು ಉಪಚುನಾವಣೆಯಲ್ಲಿ ಸೋತಿದ್ದ ಹಳ್ಳಿಹಕ್ಕಿ ಖ್ಯಾತಿಯ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರನ್ನು ಎಂಎಲ್ಸಿ ಮಾಡಲು ಬಿಜೆಪಿ ಹೈಕಮಾಂಡ್ ಗ್ರೀನ್ಸಿಗ್ನಲ್ ನೀಡಿದೆ.
ಖಾಲಿ ಇರುವ ವಿಧಾನ ಪರಿಷತ್ನ ನಾಮನಿರ್ದೇಶಿತ ಸ್ಥಾನಗಳಿಗೆ ರಾಜ್ಯ ಸರ್ಕಾರ ಐವರ ಹೆಸರನ್ನು ನಾಮನಿರ್ದೇಶನ ಮಾಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಳಿಸಿದ್ದ ಅಭ್ಯರ್ಥಿಗಳ ಶಿಫಾರಸು ಪಟ್ಟಿಯ ಜತೆಗೆ ಕೆಲ ಹೆಸರುಗಳನ್ನು ಸೇರಿಸಿ ಬಿಜೆಪಿ ಹೈಕಮಾಂಡ್ ಅಚ್ಚರಿ ಮೂಡಿಸಿದೆ.
ಈ ಪಟ್ಟಿಯಲ್ಲಿ ಹೆಚ್. ವಿಶ್ವನಾಥ್ ಹೆಸರು ಸೇರಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ವಿಶ್ವನಾಥ್ ಮತ್ತೆ ಸಚಿವರಾಗಬೇಕಾದರೆ ಯಾವುದಾದರೊಂದು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ಉಪಚುನಾವಣೆಯಲ್ಲಿ ಸೋತಿದ್ದರಿಂದ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ವಿಶ್ವನಾಥ್ಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಡುವ ಮೂಲಕ ಹೆಚ್.ವಿಶ್ವನಾಥ್ಗೆ ಶಾಕ್ ಕೊಟ್ಟಿತ್ತು.
ಆದರೆ, ಈ ಬಾರಿ ವಿಶ್ವನಾಥ್ ಅವರನ್ನು ಯಾವ ಕೋಟಾದಿಂದ ನಾಮನಿರ್ದೇಶನ ಮಾಡಬೇಕು ಎಂಬ ಚರ್ಚೆ ಬಂದಾಗ ಸಾಹಿತ್ಯ ಕ್ಷೇತ್ರದ ಕೋಟಾದಡಿ ಎಂಎಲ್ಸಿ ಮಾಡುವ ಮಾತುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಲು ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಹೆಚ್.ವಿಶ್ವನಾಥ್ ಅವರನ್ನು ಎಂಎಲ್ಸಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದ ಎನ್ನಲಾಗಿದೆ.
ಉಳಿದಂತೆ ಸಿ.ಪಿ ಯೋಗೇಶ್ವರ್, ಸಮಾಜಸೇವೆ ಕ್ಷೇತ್ರದಿಂದ ಭಾರತಿಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಗುರುರಾಜ್ ಕರ್ಜಗಿ,
ಸಾಯಿಬಣ್ಣ ತಳವಾರ್, ಶಾಂತಾರಂ ಸಿದ್ದಿಕಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಎಂಎಲ್ಸಿಗಳ ಶಿಫಾರಸು ಪಟ್ಟಿಯನ್ನು ನೀಡಿ ಬಂದಿದ್ದಾರೆ ಎಂಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಜ್ಯಪಾಲರು ಈ ಪಟ್ಟಿಗೆ ಅಂಕಿತ ಹಾಕುತ್ತಿದ್ದಂತೆ ಅಧಿಕೃತವಾಗಿ ನಾಮನಿರ್ದೇಶಿತರ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ.
ನಾಮ ನಿರ್ದೇಶನಕ್ಕೆ ಶಿಫಾರಸುಗೊಂಡವರ ಹೆಸರು, ಕ್ಷೇತ್ರ..
ಹೆಚ್.ವಿಶ್ವನಾಥ್-ಸಾಹಿತ್ಯ ಕ್ಷೇತ್ರ
ಸಿ.ಪಿ ಯೋಗೇಶ್ವರ್- ಸಿನಿಮಾ
ಭಾರತಿ ಶೆಟ್ಟಿ-ಸಮಾಜಸೇವೆ
ಸಾಯಿಬಣ್ಣ ತಳವಾರ್-ಶಿಕ್ಷಣ
ಗುರುರಾಜ್ ಕರ್ಜಗಿ-ಶಿಕ್ಷಣ
ಶಾಂತರಾಂ-ವಿಶಿಷ್ಟ ಸೇವೆ