ಕೊಲ್ಕತ್ತಾದ ಮಹಾರಾಜ- ದಾದಾನಿಗೆ 48ನೇ ಹುಟ್ಟು ಹಬ್ಬದ ಸಂಭ್ರಮ…!
ಸೌರವ್ ಗಂಗೂಲಿ… ಟೀಮ್ ಇಂಡಿಯಾದ ಮಾಜಿ ಆಟಗಾರ.. ಟೀಮ್ ಇಂಡಿಯಾದ ಮಾಜಿ ನಾಯಕ.. ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ… ಮಾಜಿ ವೀಕ್ಷಕ ವಿವರಣೆಕಾರ… ಟೀಮ್ ಇಂಡಿಯಾದ ದಿಕ್ಕು ದೆಸೆಯನ್ನೇ ಬದಲಿಸಿದ ನಾಯಕ.. ಗಾಡ್ ಆಫ್,ಆಫ್ ಸೈಡ್.. ಕೊಲ್ಕತ್ತಾದ ಮಹಾರಾಜ, ಸೌರವ್ ಗಂಗೂಲಿ ಅನ್ನೋ ಹೆಸರಿನ ಮುಂದೆ ಅದೆಷ್ಟೋ ಪದಪುಂಜಗಳು ಸೇರಿಕೊಳ್ತವೆ.
ಹೌದು, ಗಂಗೂಲಿಯ ಸ್ವಭಾವವೇ ಹಾಗೇ… ಕೆಲವರು ಅವರನ್ನು ಅಹಂಕಾರಿ ಅಂತನೂ ಕರೆಯುತ್ತಾರೆ. ಆದ್ರೆ ತಾನು ಅಂದುಕೊಂಡಿರುವುದನ್ನು
ಸಾಧಿಸುವಂತಹ ಛಲ ಹಾಗೂ ಹಠವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಇಲ್ಲದೇ ಇದ್ರೆ 20 ವರ್ಷಗಳ ಹಿಂದೆ ಒಡಕಿನ ಮನೆಯಾಗಿದ್ದ ಭಾರತ ಕ್ರಿಕೆಟ್ ತಂಡ ಇದೀಗ ವಿಶ್ವದ ಬಲಿಷ್ಠ ಟೀಮ್ ಇಂಡಿಯಾವಾಗುತ್ತಿರಲಿಲ್ಲ. ಇವತ್ತು ಧೋನಿ, ವಿರಾಟ್ ಕೊಹ್ಲಿ ನಾಯಕನಾಗಿ ಯಶಸ್ವಿನ ಅಲೆಯಲ್ಲಿ ತೇಲಾಡುತ್ತಿದ್ರೆ ಅದಕ್ಕೆ ಗಂಗೂಲಿಯೇ ಕಾರಣ. ಗಂಗೂಲಿ ಹಾಕಿಕೊಟ್ಟ ಭದ್ರ ಅಡಿಪಾಯದಿಂದಲೇ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸಲು ಕಾರಣವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಅದೆಷ್ಟೋ ನಿಜವೋ ಗೊತ್ತಿಲ್ಲ. 1992ರಲ್ಲಿ ಅಂತ ಕಾಣುತ್ತೆ. ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆ ಪಂದ್ಯದಲ್ಲಿ ಗಂಗೂಲಿ 12ನೇ ಆಟಗಾರ. ಆದ್ರೆ ನೀರಿನ ಬಾಟಲ್ ತೆಗೆದುಕೊಂಡು ಹೋಗಲು ಒಪ್ಪದ ಕಾರಣ ಗಂಗೂಲಿ ಆ ನಂತರ ತಂಡದಿಂದಲೇ ಹೊರಗುಳಿಯಬೇಕಾಯ್ತು ಎಂಬ ಮಾತು ಇದೆ. ಬಳಿಕ 1996ರಲ್ಲಿ ಮತ್ತೆ ಭಾರತ ತಂಡಕ್ಕೆ ಎಂಟ್ರಿಕೊಟ್ಟ ಗಂಗೂಲಿ ಆ ನಂತರ ಹಿಂತಿರುಗಿ ನೋಡಲೇಇಲ್ಲ.
ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಗಂಗೂಲಿಗೆ ಕೋಚ್ ಮದನ್ ಲಾಲ್ ಇನಿಂಗ್ಸ್ ಆರಂಭಿಸುವಂತೆ ಸಲಹೆ ನೀಡಿದ್ದರು. ಬಳಿಕ ಸಚಿನ್ ಜೊತೆ ಸೇರಿ ಭಾರತ ಕ್ರಿಕೆಟ್ ತಂಡದ ರನ್ ಗತಿಯನ್ನು ಏರಿಸುವಲ್ಲಿ ಗಂಗೂಲಿ ಮತ್ತು ಸಚಿನ್ ಪಾತ್ರವೂ ಬಹಳಷ್ಟಿದೆ. ವಿಶ್ವದ ಅಪಾಯಕಾರಿ ಆರಂಭಿಕ ಜೋಡಿ ಅಂತನೇ ಫೇಮಸ್ ಆಗಿರುವ ಸಚಿನ್ ಮತ್ತು ಗಂಗೂಲಿ ಮಾಡಿರುವ ಸಾಧನೆಗಳು ಅಷ್ಟಿಷ್ಟಲ್ಲ.
ಅದು 2000ನೇ ವರ್ಷ. ಸಚಿನ್ ತೆಂಡುಲ್ಕರ್ ನಾಯಕತ್ವ ತನಗೆ ಬೇಡ. ತಂಡದ ಆಟಗಾರನಾಗಿರುತ್ತೇನೆ. ನಾಯಕತ್ವದ ಒತ್ತಡ ತನ್ನ ಆಟದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಅನ್ನೋ ಕಾರಣ ನೀಡಿ ನಾಯಕತ್ವವನ್ನು ತ್ಯಜಿಸುತ್ತಾರೆ. ಮತ್ತೊಂದೆಡೆ ಅಜರುದ್ದೀನ್, ಪ್ರಭಾಕರ್, ಅಜೇಯ್ ಜಡೇಜಾ ಕೆಲವು ಆಟಗಾರರು ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಎದುರಿಸಿದ್ದರು. ಆಗ ಭಾರತ ತಂಡ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು. ಆಗ ತಂಡದ ನಾಯಕತ್ವ ವಹಿಸಿದ್ದು ಇದೇ ಸೌರವ್ ಗಂಗೂಲಿ.
ಸಂಕಷ್ಟದ ಸಮಯದಲ್ಲಿ ತಂಡದ ಸಾರಥ್ಯ ವಹಿಸಿದ್ದ ಗಂಗೂಲಿ ತನ್ನ ದಿಟ್ಟ ನಿರ್ಧಾರದಿಂದಲೇ ಹೊಸ ತಂಡವನ್ನು ಕಟ್ಟಲು ಸಿದ್ಧರಾದ್ರು. ಅಲ್ಲಿಯವರೆಗೆ ಭಾರತ ಕ್ರಿಕೆಟ್ ತಂಡವಾಗಿತ್ತು. ಗಂಗೂಲಿ ಟೀಮ್ ಇಂಡಿಯಾ ಅನ್ನೋ ಹೊಸ ಪರಿಕಲ್ಪನೆಯೊಂದಿಗೆ ಹಿರಿಯ ಹಾಗೂ ಯುವ ಆಟಗಾರರ ಪಡೆಯನ್ನು ಕಟ್ಟಿದ್ದರು. ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆಶೀಷ್ ನೆಹ್ರಾ, ಮಹಮ್ಮದ್ ಕೈಫ್, ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್ ನಂತಹ ಆಟಗಾರರು ಬೇಕೇ ಬೇಕು ಅಂತ ಆಯ್ಕೆಗಾರರ ಬಳಿ ಪಟ್ಟು ಹಿಡಿದಿದ್ದರು. ಆಟಗಾರರ ವಿಶ್ವಾಸಕ್ಕೆ ದಕ್ಕೆಯಾಗದಂತೆ ಅವರ ಪ್ರತಿಭೆಗೆ ಬೆಲೆ ಕೊಟ್ಟ ಗಂಗೂಲಿ, ಸಾಕಷ್ಟು ಅವಕಾಶಗಳನ್ನು ನೀಡಿದ್ದರು. ಪರಿಣಾಮವಾಗಿಯೇ ಟೀಮ್ ಇಂಡಿಯಾ ಗೆಲುವಿನ ಸಂಭ್ರಮವನ್ನು ಆಚರಿಸಲು ಶುರು ಮಾಡಿತ್ತು. ವಿದೇಶಿ ನೆಲದಲ್ಲಿ ಮರೀಚಿಕೆಯಾಗಿದ್ದ ಗೆಲುವನ್ನು ದಕ್ಕಿಸಿಕೊಂಡಿತ್ತು.
ಇನ್ನು 2003ರ ವಿಶ್ವಕಪ್.. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಪ್ರತಿಷ್ಠಿತ ಟೂರ್ನಿಗೆ ವೇಗಿ ಶ್ರೀನಾಥ್ ಬೇಕೇಬೇಕು ಅಂತ ಹಠ ತೊಟ್ಟಿದ್ದರು. ಶ್ರೀನಾಥ್ ಆಗಲ್ಲ ಅಂದಾಗ ಅವರ ಮನವೋಲಿಸಿ ತಂಡಕ್ಕೆ ಸೇರಿಸಿಕೊಂಡ್ರು. ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಕೊರತೆಯಾದಾಗ ರಾಹುಲ್ ದ್ರಾವಿಡ್ಗೆ ಆ ಜವಾಬ್ದಾರಿಯನ್ನು ನೀಡಿದ್ದರು. ತಂಡದ ಹಿತಕ್ಕಾಗಿ ಆರಂಭಿಕ ಸ್ಥಾನವನ್ನು ತ್ಯಜಿಸಿದ್ದರು. ತನ್ನ ಬದಲಿಗೆ ವೀರೇಂದ್ರ ಸೆಹ್ವಾಗ್ಗೆ ಆ ಸ್ಥಾನವನ್ನು ನೀಡಿದ್ದರು. ಪರಿಣಾಮೇ ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿಕೊಟ್ಟಿತ್ತು. ದುರಾದೃಷ್ಟ ಅಂದ್ರೆ ಆಸ್ಟ್ರೇಲಿಯನ್ನರ ಅಟ್ಟಹಾಸಕ್ಕೆ ಗಂಗೂಲಿ ಪಡೆ ಸೋತು ಹೋಯ್ತು.
ಆ ನಂತರವೂ ಗಂಗೂಲಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಹಲವು ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದುಕೊಂಡಿತ್ತು. ಅದ್ರಲ್ಲೂ ನ್ಯಾಟ್ವೆಸ್ಟ್ ಸರಣಿಯ ಫೈನಲ್ ನಲ್ಲಿ ಲಾಡ್ರ್ಸ್ ಮೈದಾನದ ಬಾಲ್ಕನಿಯಲ್ಲಿ ಟೀ ಶರ್ಟ್ ಬಿಚ್ಚಿ ಗೆಲುವಿನ ಸಂಭ್ರಮ ಆಚರಿಸಿದ್ದ ರೀತಿ ಇದೆಯಲ್ಲಾ ಇಂದಿಗೂ ಕಣ್ಣಿಗೆ ಕಟ್ಟುತ್ತಿದೆ. ಆದ್ರೆ ಗ್ರೆಗ್ ಚಾಪೆಲ್ ಟೀಮ್ ಇಂಡಿಯಾದ ಕೋಚ್ ಆದ ನಂತರ
ಗಂಗೂಲಿಯ ಹವಾ ಕಮ್ಮಿಯಾಯ್ತು. ಕಳಪೆ ಪ್ರದರ್ಶನದಿಂದ ತಂಡದಿಂದಲೂ ಹೊರಗುಳಿದ್ರು. ಆದ್ರೆ ಛಲ ಬಿಡದ ದಾದಾ ಮತ್ತೆ ತಂಡವನ್ನು ಸೇರಿಕೊಂಡ್ರು. ರಾಹುಲ್ ನಾಯಕತ್ವದಲ್ಲೂ ಆಡಿದ್ದ ಗಂಗೂಲಿಗೆ 2007ರ ಕೆರೆಬಿಯನ್ ವಿಶ್ವಕಪ್ ಮಾತ್ರ ಕಹಿ ನೆನಪು. 2008ರಲ್ಲಿ ಗಂಗೂಲಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.
ಗಂಗೂಲಿ ಅಂದಾಗ ತಕ್ಷಣ ನೆನಪಾಗೋದು ಅವರ
ಬ್ಯಾಟಿಂಗ್ ಶೈಲಿ. ಅದ್ರಲ್ಲೂ ಆಫ್ ಸೈಡ್ ನಲ್ಲಿ ಹೊಡೆಯುವ ಅವಕ ಆಕರ್ಷಕ ಹೊಡೆತಗಳು. ಎದುರಾಳಿ ತಂಡ ಆಫ್ ಸೈಡ್ ನಲ್ಲಿ 9 ಮಂದಿ ಫೀಲ್ಡರ್ಗಳಿದ್ದರೂ ಚೆಂಡನ್ನು ಸರಾಗವಾಗಿ ಬೌಂಡರಿ ಗೆರೆ ದಾಟಿಸುವ ಕಲೆಯನ್ನು ಗಂಗೂಲಿ ಮೈಗೂಡಿಸಿಕೊಂಡಿದ್ದರು. ಅದು 150 ಕಿಲೋ ಮೀಟರ್ ವೇಗದಲ್ಲಿ ಶೋಯಿಬ್ ಅಖ್ತರ್ ಬೌಲಿಂಗ್ ಮಾಡಲಿ, ಅಥವಾ ಮುತ್ತಯ್ಯ ಮುರಳೀಧರನ್ ಮ್ಯಾಜಿಕ್ ಎಸೆತವೇ ಆಗಿರಲಿ.. ಗಂಗೂಲಿ ಲಯ ಕಂಡುಕೊಂಡ್ರೆ ಮಾತ್ರ ಅವರ ಬ್ಯಾಟಿಂಗ್ ವೈಖರಿಯನ್ನೇ ನೋಡುವುದೇ ಕಣ್ಣಿಗೆ ಹಬ್ಬ. ಅಷ್ಟೇ ಅಲ್ಲ, ಸಿಕ್ಸರ್ ಸಿಡಿಸುವುದರಲ್ಲೂ ಗಂಗೂಲಿ ನಿಸ್ಸೀಮ. ಕಣ್ಣು ಮಿಟುಕಿಸುತ್ತ ಎದುರಾಳಿ ತಂಡವನ್ನು ಧ್ವಂಸ ಮಾಡುವ ಗಂಗೂಲಿಯ ಬ್ಯಾಟಿಂಗ್ ತಾಕತ್ತಿಗೆ ರಾಹುಲ್ ದ್ರಾವಿಡ್ ಅವರು ನೀಡಿದ್ದ ಬಿರುದು ಏನು ಅಂದ್ರೆ ಗಾಡ್ ಆಫ್ ಆಫ್ ಸೈಡ್ ಅಂತ.
ಇದೀಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಕ್ರಿಕೆಟಿಗ, ನಾಯಕನಾಗಿ ಯಶ ಸಾಧಿಸಿರುವ ಗಂಗೂಲಿ ಈಗ ಆಡಳಿತಗಾರನಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಗಂಗೂಲಿ ತನ್ನ 48ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊಲ್ಕತ್ತಾದ ಮಹಾರಾಜ, ಕ್ರಿಕೆಟಿಗರ ನೆಚ್ಚಿನ ದಾದಾಗೆ ಹ್ಯಾಪಿ ಹುಟ್ಟು ಹಬ್ಬ…!







