2011 ವಿಶ್ವಕಪ್.. ಸೆಮಿಫೈನಲ್ ಮುನ್ನ ರಾತ್ರಿ ಹರ್ಭಜನ್ -ಅಖ್ತರ್ ನಡುವೆ ನಡೆದಿತ್ತು ಟಿಕೆಟ್ ಜಟಾಪಟಿ..!
ಟೀಮ್ ಇಂಡಿಯಾದ ಟರ್ಬನೇಟರ್ ಹರ್ಭಜನ್ ಸಿಂಗ್ ಹೊಸ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾರೆ. 2011ರ ವಿಶ್ವಕಪ್ ಗೆಲುವಿನ ಸವಿ ಸವಿ ನೆನಪಿನ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಪಾಕಿಸ್ತಾನದ ಶೋಯಿಬ್ ಅಖ್ತರ್ ನಡುವೆ ನಡೆದ ಟಿಕೆಟ್ ಜಟಾಪಟಿಯ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ.
ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯ. ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತ 29 ರನ್ ಗಳಿಂದ ಪಾಕಿಸ್ತಾನವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಎರಡನೇ ಬಾರಿ ವಿಶ್ವಕಪ್ ಗೆದ್ದಿತ್ತು.
ಇದು ನನ್ನ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ದಿನ. ಇದು ನಮ್ಮ ಗೆಲುವಲ್ಲ. ಭಾರತದ ಗೆಲುವು.. ನಮ್ಮ ಕನಸು ನನಸಾದ ಕ್ಷಣ.. ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಅಂತ ಹರ್ಭಜನ್ ಸಿಂಗ್ ಹೇಳುತ್ತಾರೆ.
ಅಂದ ಹಾಗೇ ಇದೇ ವೇಳೆ ಹರ್ಭಜನ್ ಸಿಂಗ್ ಸೆಮಿಫೈನಲ್ ಪಂದ್ಯದ ಹಿಂದಿನ ದಿನ ಶೋಯಿಬ್ ಅಖ್ತರ್ ಜೊತೆ ನಡೆದ ಹಾಸ್ಯ ಮಿಶ್ರೀತ ಜಟಾಪಟಿಯನ್ನು ನೆನಪು ಮಾಡಿಕೊಂಡಿದ್ದಾರೆ.
ಸೆಮಿಫೈನಲ್ ಪಂದ್ಯದ ಹಿಂದಿನ ನನಗೆ ಪಾಕ್ನ ವೇಗಿ ಶೋಯಿಬ್ ಅಖ್ತರ್ ಕರೆ ಮಾಡಿದ್ದರು. ಅಲ್ಲದೆ ನನಗೆ ನಾಲ್ಕು ಟಿಕೆಟ್ ಗಳು ಬೇಕು. ಕುಟುಂಬಸ್ಥರು ಮತ್ತು ಗೆಳೆಯರು ಬರುತ್ತಿದ್ದಾರೆ ಅಂತ ಹೇಳಿದ್ದರು. ಆಗ ನಾನು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಜೊತೆ ಮಾತನಾಡಿ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದೆ. ಹಾಗೇ ಟಿಕೆಟ್ ಗಳನ್ನು ಅಖ್ತರ್ ಕೈಗೆ ನೀಡಿದಾಗ ಫೈನಲ್ ಪಂದ್ಯಕ್ಕೂ ನಾಲ್ಕು ಟಿಕೆಟ್ ಬೇಕು ಅಂತ ಕೇಳಿದ್ದರು. ಫೈನಲ್ ಗೆ ನಾವೇ ಹೋಗುತ್ತಿದ್ದೇವೆ ಎಂದು ಅಖ್ತರ್ ಹೇಳಿದ್ದರು. ಆಗ ನಾನು ನೀವು ಮುಂಬೈಗೆ ಹೊಗುವುದಾದ್ರೆ ನಾವು ಎಲ್ಲಿಗೆ ಹೋಗಬೇಕು. ಫೈನಲ್ ಪ್ರವೇಶಿಸುವುದು ನಾವೇ.. ಬೇಕಿದ್ರೆ ನೀವು ಪ್ರೇಕ್ಷಕರಾಗಿ ಮುಂಬೈಗೆ ಬನ್ನಿ.. ನಿಮಗೆ ಇನ್ನೂ ನಾಲ್ಕು ಟಿಕೆಟ್ ಗಳ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿದ್ದೆ ಎಂದು ಹರ್ಭಜನ್ ಸಿಂಗ್ ಆ ದಿನದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.








