ಉಡುಪಿ: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಅನೇಕ ಸಂಘ ಸಂಸ್ಥೆಗಳು, ಶ್ರೀಮಂತ ವ್ಯಕ್ತಿಗಳು ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದಾರೆ. ಆದ್ರೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಸವಾಗಿರುವ ಶಾರದಕ್ಕ ಎಂಬುವರು ತಾನೇ ಗುಡಿಸಲಲ್ಲಿ ವಾಸವಾಗಿದ್ರೂ, ಬಡವರ ಸಂಕಷ್ಟಕ್ಕೆ ನೆರವಾಗೋ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಹೌದು..! ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಅಲ್ಲೋ ಇಲ್ಲೊ ಸಿಕ್ಕಿದ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದ ಶಾರದಕ್ಕ ಮಲ್ಪೆ ವಡಬಾಂಡೇಶ್ವರ ವಾರ್ಡ್ ನೆರ್ಗಿ ಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆಜಿಯಂತೆ 700 ಕೆ.ಜಿ. ಅಕ್ಕಿ ಹಂಚಿದ್ದಾರೆ.
ಇಷ್ಟೇ ಅಲ್ಲದೇ ತನಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ತನ್ನ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿ, ಬಡವರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಹೀಗೆ ತಾನೇ ಕಷ್ಟದಲ್ಲಿದ್ರೂ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಈಕೆಯ ಸೇವಾ ಮನೋಭಾವ ನಿಜಕ್ಕೂ ಪ್ರಶಂಸನೀಯ.








