ಶ್ರೀನಗರ: ಇದು ಮನಮಿಡಿಯುವ, ಕರುಳು ಹಿಂಡುವ ಘಟನೆ. ಹೌದು, ಈ ಘಟನೆ ನಡೆದಿರುವುದು ಜಮ್ಮು ಮತ್ತು ಕಾಶ್ಮೀರದ ಸೊಪೊರೆಯಲ್ಲಿ.
ಬಾರಾಮುಲ್ಲಾ ಜಿಲ್ಲೆಯ ಸೊಪೊರೆಯ ಚೆಕ್ಪೋಸ್ಟ್ನಲ್ಲಿ ಇಂದು ಬೆಳಿಗ್ಗೆ 7.30ರ ಹೊತ್ತಿಗೆ ಕಾವಲು ಕಾಯುತ್ತಿದ್ದ ಸಿಆರ್ಪಿಎಫ್ ತುಕಡಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಹಾಗೂ ಸಿಆರ್ಪಿಎಫ್ ಯೋಧರ ನಡುವೆ ಹಲವು ಘಂಟೆಗಳ ಕಾಲ ಗುಂಡಿನ ಕಾಳಗವೇ ನಡೆದು ಹೋಗಿದೆ.

ಗುಂಡಿನ ಕಾಳಗ ನಡೆಯುತ್ತಿದ್ದ ಮಾರ್ಗದಲ್ಲಿ ಬರುತ್ತಿದ್ದ ಕಾರನ್ನು ತಡೆದ ಸಿಆರ್ಪಿಎಫ್ ಯೋಧರು, ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚಿಸುತ್ತಿದ್ದ ವೇಳೆಗೆ ಉಗ್ರರು ಕಾರಿನತ್ತ ಗುಂಡು ಹಾರಿಸಿದ್ದಾರೆ. ಕಾರಿನೊಳಗೆ ನುಗ್ಗಿ ಬಂದ ಗುಂಡು ವೃದ್ಧನ ದೇಹ ಹೊಕ್ಕಿವೆ. ಕೆಲವೇ ಕ್ಷಣಗಳಲ್ಲಿ ವೃದ್ಧ ಕಾರಿನೊಳಗೆ ಮೃತಪಟ್ಟಿದ್ದಾರೆ.
ಆದರೆ, ಈ ವೃದ್ಧರ ಜತೆಗಿದ್ದ 3 ವರ್ಷದ ಮೊಮ್ಮಗ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಗುಂಡಿನ ಕಾಳಗ ಅಂತ್ಯಗೊಂಡ ಬಳಿಕ ಯೋಧರು ಪರಿಶೀಲನೆ ನಡೆಸಿದಾಗ ಬಾಲಕ ತಾತನ ಶವದ ಮುಂದೆ ಅಳುತ್ತಿದ್ದ. ಈ ದೃಷ್ಯವನ್ನು ನೋಡಿದ ಸೈನಿಕರು ಕೂಡ ಮಮ್ಮಲ ಮರುಗಿದ್ದಾರೆ. ಯೋಧರು ಬಾಲಕನ್ನು ರಕ್ಷಿಸಿ ಕರೆತರುತ್ತಿರುವಾಗ ಅಳಲುತ್ತಲೇ ದೃಷ್ಯ ಎಂತಹ ಕಲ್ಲು ಹೃದಯವನ್ನು ಕರಗುವಂತೆ ಮಾಡುತ್ತದೆ. ಈ ಫೋಟೊ ಮತ್ತು ವಿಡಿಯೋವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಉಗ್ರರನ್ನು ಹಿಮ್ಮೆಟ್ಟಿಸಲಾಗಿದ್ದರೂ, ಗುಂಡಿನ ಕಾಳಗದಲ್ಲಿ ಸಿಆರ್ಪಿಎಫ್ನ ಓರ್ವ ಯೋಧರು ಮೃತಪಟ್ಟಿದ್ದಾರೆ.







