Heavy Rain | ಭದ್ರಾ ಎಡದಂಡೆ ಕಾಲುವೆ ಒಡೆದು ತೋಟ, ಗದ್ದೆಗೆ ನುಗ್ಗಿದ ನೀರು
ಶಿವಮೊಗ್ಗ : ಭಾರಿ ಮಳೆಗೆ ಭದ್ರಾ ಎಡ ದಂಡೆ ಕಾಲುವೆ ತಡೆಗೋಡೆ ಒಡೆದು ಹೋಗಿದ್ದು, ನೂರಾರು ಎಕರೆ ತೋಟ, ಗದ್ದೆಗೆ ನೀರು ನುಗ್ಗಿದ್ದು ಬೆಳೆ ಹಾನಿ ಸಂಭವಿಸಿದೆ.
ಭದ್ರಾವತಿ ತಾಲೂಕು ಹೊಸೂರು ತಾಂಡ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ.
ಭಾರಿ ಮಳೆಗೆ 1955ರಲ್ಲಿ ನಿರ್ಮಿಸಲಾಗಿದ್ದ ಕಾಲುವೆಯ ತಡೆಗೋಡೆ ಒಡೆದು ಹೋಗಿದೆ.
ಇದಕ್ಕೆ ಗೌಣದ ಕೆರೆ, ಗುರುವಿಕಟ್ಟೆ, ಅಸಲಿಕಟ್ಟೆ ಕೋಡಿಬಿದ್ದಿದ್ದೇ ಕಾರಣ ಎನ್ನಲಾಗುತ್ತಿದೆ.

ಕಾಲುವೆ ತಡೆಗೋಡೆ ಒಡೆದು ಹೋಗಿರುವುದರಿಂದ ಹೊಸೂರು ತಾಂಡದ ನೂರಾರು ಎಕರೆ ತೋಟ, ಗದ್ದೆಗೆ ನೀರು ನುಗ್ಗಿದೆ.
ನೀರಿನ ರಭಸಕ್ಕೆ ಭತ್ತದ ಸಸಿಗಳು ಕೊಚ್ಚಿ ಹೋಗಿವೆ. ಅಡಕೆ ತೋಟಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.








