ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸದ್ದು ಮಾಡುತ್ತಿದ್ದ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಸದ್ಯದ ಮಟ್ಟಿಗೆ ಅಸಾಧ್ಯ ಮತ್ತು ಅನಗತ್ಯ ಎಂಬ ಸ್ಪಷ್ಟ ಹಾಗೂ ಖಡಕ್ ಸಂದೇಶವನ್ನು ಎಐಸಿಸಿ ರವಾನಿಸಿದೆ. ಕಾಂಗ್ರೆಸ್ ಪಕ್ಷದ ಭವಿಷ್ಯ ಹಾಗೂ ಮುಂಬರುವ ನಿರ್ಣಾಯಕ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ಮಹತ್ವದ ಸಂದೇಶವನ್ನು ಹೊತ್ತು ತಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರಾತಂಕವಾಗಿ ಆಡಳಿತ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಲೆಕ್ಕಾಚಾರ ಮತ್ತು ರಕ್ಷಣಾ ತಂತ್ರ
ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದರಲ್ಲಿ ಕರ್ನಾಟಕವು ಕಾಂಗ್ರೆಸ್ ಪಾಲಿಗೆ ಅತ್ಯಂತ ದೊಡ್ಡ ಮತ್ತು ಪ್ರಮುಖ ರಾಜ್ಯವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲಿ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕುವ ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿರುವ ಕಹಿ ಅನುಭವ ಹೈಕಮಾಂಡ್ ಮುಂದಿದೆ. ಹೀಗಾಗಿ, ಕರ್ನಾಟಕದಲ್ಲಿಯೂ ಅಂತಹದ್ದೇ ದುಸ್ಸಾಹಸಕ್ಕೆ ಕೈಹಾಕಿ ಗೆದ್ದ ರಾಜ್ಯವನ್ನು ಕಳೆದುಕೊಳ್ಳಲು ವರಿಷ್ಠರು ತಯಾರಿಲ್ಲ. ಮುಖ್ಯಮಂತ್ರಿ ಬದಲಾವಣೆಯಿಂದ ಪಕ್ಷಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಲೆಕ್ಕಾಚಾರವನ್ನು ಹೈಕಮಾಂಡ್ ಹಾಕಿದೆ ಎನ್ನಲಾಗಿದೆ.
ಅಹಿಂದ ಮತಬ್ಯಾಂಕ್ ಮತ್ತು ಗ್ಯಾರಂಟಿ ಯೋಜನೆಗಳ ರಕ್ಷಣೆ
ಸಿದ್ದರಾಮಯ್ಯ ಕೇವಲ ಮುಖ್ಯಮಂತ್ರಿಯಲ್ಲ, ಬದಲಿಗೆ ದೇಶಾದ್ಯಂತ ಗುರುತಿಸಿಕೊಂಡಿರುವ ಪ್ರಬಲ ಅಹಿಂದ ನಾಯಕ. ಅವರನ್ನು ಬದಲಾಯಿಸಿದರೆ ಅಹಿಂದ ವರ್ಗವು ಕಾಂಗ್ರೆಸ್ ಪಕ್ಷದಿಂದ ವಿಮುಖವಾಗುವ ಭೀತಿ ದೆಹಲಿ ನಾಯಕರಿಗಿದೆ. ಸಿದ್ದರಾಮಯ್ಯ ಆರ್ಥಿಕ ಶಿಸ್ತಿನ ಅನುಭವವುಳ್ಳ ನಾಯಕರಾಗಿದ್ದು, ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ವಿಶ್ವದ ಗಮನ ಸೆಳೆದಿದ್ದಾರೆ. ನಾಯಕತ್ವ ಬದಲಾವಣೆಯಾದರೆ ರಾಜ್ಯದ ಆರ್ಥಿಕ ಸ್ಥಿರತೆ ಏರುಪೇರಾಗಬಹುದು ಮತ್ತು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಅಸಾಧ್ಯವಾಗಬಹುದು ಎಂಬ ಆತಂಕ ಹೈಕಮಾಂಡ್ ಗಿದೆ. ಇದು ಮುಂಬರುವ ಚುನಾವಣೆಗಳ ಮೇಲೂ ಗಂಭೀರ ಪರಿಣಾಮ ಬೀರಲಿದೆ.
ಮುಂದಿನ ಚುನಾವಣೆಗಳೇ ಗುರಿ
2026ರ ಮೇ ಮತ್ತು ಜೂನ್ ನಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಈ ಸೆಣಸಾಟ ಕಾಂಗ್ರೆಸ್ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಈ ಚುನಾವಣೆಗಳಿಗೆ ಸಂಪನ್ಮೂಲ ಮತ್ತು ನೈತಿಕ ಬೆಂಬಲಕ್ಕೆ ಕರ್ನಾಟಕದ ಸುಭದ್ರ ಸರ್ಕಾರ ಅತ್ಯಗತ್ಯ. ಹೀಗಾಗಿ ಕರ್ನಾಟಕದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಹೈಕಮಾಂಡ್ ಆದ್ಯತೆಯಾಗಿದೆ.
ಡಿಕೆಶಿಗೆ ಸಂದೇಶ ಮತ್ತು ಶಿಸ್ತು ಕ್ರಮದ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಮತ್ತು ಸಂಪುಟ ಪುನಾರಚನೆ ವಿಚಾರವಾಗಿ ಎದ್ದಿದ್ದ ಗೊಂದಲಗಳಿಗೆ ಬ್ರೇಕ್ ಬಿದ್ದಿದೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರೂ, ಅವರಿಗೆ ಸಮಯ ಸಿಗದಿರುವುದು ಹೈಕಮಾಂಡ್ ನಿಲುವನ್ನು ಸ್ಪಷ್ಟಪಡಿಸಿದೆ. ನಿಮ್ಮ ಕೆಲಸ ನೀವು ಮುಂದುವರಿಸಿ, ಯಾವುದೇ ಚಿಂತೆ ಬೇಡ ಎಂದು ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯನವರಿಗೆ ಅಭಯ ನೀಡಿದ್ದಾರೆ.
ಇದೇ ವೇಳೆ, ಪಕ್ಷದಲ್ಲಿ ಬಣ ರಾಜಕೀಯ ಮತ್ತು ಗೊಂದಲ ಸೃಷ್ಟಿಸುವವರ ವಿರುದ್ಧ ಶಿಸ್ತು ಕ್ರಮದ ಚಾಟಿಯನ್ನು ಹೈಕಮಾಂಡ್ ಬೀಸಿದೆ. ಮಂಗಳೂರಿಗೆ ಕೆ.ಸಿ.ವೇಣುಗೋಪಾಲ್ ಆಗಮಿಸಿದ ಸಂದರ್ಭದಲ್ಲಿ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ, ಮಿಥುನ್ ರೈ ಮತ್ತು ಐವಾನ್ ಡಿಸೋಜಾ ಅವರಿಗೆ ಕೆಪಿಸಿಸಿ ಬದಲಾಗಿ ನೇರವಾಗಿ ಎಐಸಿಸಿಯಿಂದಲೇ ನೋಟಿಸ್ ಜಾರಿ ಮಾಡಲಾಗಿದೆ. ಜನವರಿ ಅಥವಾ ಮಾರ್ಚ್ ನಲ್ಲಿ ಬದಲಾವಣೆ ಎಂಬ ಡೆಡ್ ಲೈನ್ ಗಳನ್ನು ಸೃಷ್ಟಿಸಿ ಗೊಂದಲ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ರವಾನಿಸಲಾಗಿದೆ.
ಒಟ್ಟಿನಲ್ಲಿ, ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಕುರ್ಚಿ ಸುಭದ್ರವಾಗಿದ್ದು, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಲೋಕಸಭೆ ಚುನಾವಣೆ ಸೋಲಿನ ಸರಿದೂಗಿಸುವಿಕೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಬೇಕಿದೆ ಎಂಬುದು ದೆಹಲಿ ನಾಯಕರ ಸ್ಪಷ್ಟ ನಿಲುವಾಗಿದೆ.








