ಹಿಜಾಬ್ ತೀರ್ಪನ್ನು ಕಾಯ್ದಿರಿಸಿದ ಹೈಕೋರ್ಟ್ – Saaksha Tv
ಬೆಂಗಳೂರು: ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ವಾದ ವಿವಾದಗಳು ಒಂದು ಹಂತಕ್ಕೆ ತಲುಪಿದ್ದು, ನ್ಯಾಯಾಲಯ ಶುಕ್ರವಾರ ತೀರ್ಪನ್ನು ಕಾಯ್ದಿರಿಸಿದೆ.
ಹೈಕೋರ್ಟ್ ತ್ರೀ ಸದಸ್ಯ ಪೀಠ 11 ದಿನಗಳ ಕಾಲ ವಿಚಾರಣೆ ನಡೆಸಿದ್ದು, ಈಗ ಪ್ರತಿವಾದಿಗಳು ಹಾಗೂ ಮಧ್ಯಪ್ರವೇಶಕರಿಗೆ ಲಿಖಿತದ ಮೂಲಕ ವಾದಗಳನ್ನು ಸಲ್ಲಿಕೆ ಮಾಡಲು ನ್ಯಾಯಾಲಯ ಅವಕಾಶ ನೀಡಿದೆ.
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಶ್ಯಕ ಧಾರ್ಮಿಕ ಆಚರಣೆಯ ಭಾಗವೇ ಮತ್ತು ಈ ವಿಚಾರದಲ್ಲಿ ಸರ್ಕಾರ ಬಯಸಿದರೆ ಮಧ್ಯಪ್ರವೇಶ ಮಾಡಬಹುದೇ ಎನ್ನುವುದು ಕೋರ್ಟ್ ಮುಂದೆ ಇರುವ ಪ್ರಮುಖ ಪ್ರಶ್ನೆಗಳಾಗಿವೆ. ಜೊತೆಗೆ ಹಿಜಾಬ್ ಧರಿಸುವುದನ್ನು ಸಂವಿಧಾನದ 19 (1) (a) ಪರಿಚ್ಛೇದದ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಪರಿಗಣಿಸಬೇಕೇ ಅಥವಾ 19 (2) ರ ಅಡಿ ನಿರ್ಬಂಧಗಳಿಗೆ ಒಳಪಡಿಸಬಹುದೇ ಎಂಬುದನ್ನು ಕೂಡ ನಿರ್ಧರಿಸಬೇಕಿದೆ.

ಶುಕ್ರವಾರ ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಅರ್ಜಿದಾರರ ಪರ ಹಿರಿಯ ವಕೀಲರಾದ ರವಿವರ್ಮ ಕುಮಾರ್, ಯೂಸುಫ್ ಮುಚ್ಚಲ ಮತ್ತು ವಕೀಲ ಮೊಹಮ್ಮದ್ ತಾಹಿರ್ ಅವರ ನಿರಾಕರಣಾ ವಾದಗಳನ್ನು ಆಲಿಸಿತು. ಜತೆಗೆ ಹಿಜಾಬ್ ಬೆಂಬಲಿಸಿದ ಡಾ. ವಿನೋದ್ ಕುಲಕರ್ಣಿ ಅವರ ವಾದವನ್ನು ಕೂಡ ಆಲಿಸಿತು.
“ನಾವು ಒಂದು ತುಂಡು ಬಟ್ಟೆಯಿಂದ ತಲೆಯನ್ನು ಮುಚ್ಚಿಕೊಳ್ಳಲು ಅನುಮತಿ ನೀಡಬೇಕು ಎಂದಷ್ಟೇ ನಾವು ಕೇಳಿದ್ದೆವು. ಅದನ್ನು ಮಾಡುವುದರಿಂದ ಕಾಲೇಜು ನಮ್ಮನ್ನು ತಡೆದಿರುವುದು ಸರಿಯಲ್ಲ. ಮುಖ ಮುಚ್ಚಿಕೊಳ್ಳದೆ ಇದ್ದರೂ ಹಿಜಾಬ್ ಧರಿಸಬೇಕು ಎಂದು ಹಾದಿತ್ ಕೂಡ ಹೇಳಿದೆ. ಇದು ಒಪ್ಪಿತ ಸ್ಥಿತಿ. ಸರ್ಕಾರ ಇದನ್ನು ತನ್ನ ಪ್ರತಿಕ್ರಿಯೆಯಲ್ಲಿ ಒಪ್ಪಿಕೊಂಡಿದೆ” ಎಂದು ಮುಚ್ಚಲ ವಾದಿಸಿದರು.
ಹಿಜಾಬ್ ಒಂದು ಸಾಂಸ್ಕೃತಿಕ ಆಚರಣೆಯಾಗಿ ಹಾಗೂ ಸಂಪ್ರದಾಯವಾಗಿ 1400 ವರ್ಷಗಳ ಇತಿಹಾಸ ಹೊಂದಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವುದು ಮುಸ್ಲಿಂ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಿಷೇಧದ ಕಾರಣದಿಂದ ಸಾರ್ವಜನಿಕ ಗೊಂದಲ ಉಂಟಾಗಿರುವುದನ್ನು ಕಾಣಬಹುದು ಎಂದು ವಕೀಲ ಡಾ. ವಿನೋದ್ ಕುಲಕರ್ಣಿ ಹೇಳಿದರು.
ಮಾಧ್ಯಮಗಳ ವಿರುದ್ಧದ ಅರ್ಜಿ ವಜಾ
ಶಾಲೆ ಮತ್ತು ಕಾಲೇಜುಗಳಿಗೆ ಹಿಜಾಬ್ ಧರಿಸಿ ತೆರಳುವ ಮಕ್ಕಳು ಹಾಗೂ ಶಿಕ್ಷಕಿಯರನ್ನು ಹಿಂಬಾಲಿಸುವುದು ಹಾಗೂ ಮಕ್ಕಳು ಮತ್ತು ಶಿಕ್ಷಕಿಯರು ತಮ್ಮ ಶಾಲೆಗಳ ಸಮೀಪ ಹಿಜಾಬ್ ಮತ್ತು ಬುರ್ಖಾಗಳನ್ನು ತೆಗೆಯುವಾಗ ಅವರ ವಿಡಿಯೋ ಚಿತ್ರೀಕರಣ ಹಾಗೂ ಫೋಟೊಗ್ರಫಿ ಮಾಡುವುದರಿಂದ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಂಬಂಧಿತ ಅಧಿಕಾರಿಗಳಿಗೆ ನೀವು ದೂರು ಸಲ್ಲಿಸಿ. ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿಜೆ ಹೇಳಿದರು.








