ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವೀರಶೈವ-ಲಿಂಗಾಯತರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೀಸಲಾತಿ ಪ್ರಸ್ತಾಪ ಮುಂದೂಡಿದ್ದಕ್ಕೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ.
ಮೀಸಲಾತಿ ಪ್ರಸ್ತಾಪ ವಿಚಾರದಲ್ಲಿ ಆತುರದ ತೀರ್ಮಾನಕ್ಕೆ ಬರಬೇಡಿ ಎಂದು ಬಿಜೆಪಿ ಹೈಕಮಾಂಡ್ ಸಿಎಂ ಬಿಎಸ್ವೈಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಗೆ ಈ ಪ್ರಸ್ತಾಪ ಬರಲೇ ಇಲ್ಲ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿ, ಹಿಂದುಳಿದ ವರ್ಗ 2ಎ ಮೀಸಲಾತಿಗೆ ವೀರಶೈವ-ಲಿಂಗಾಯತ ಸಮಾಜವನ್ನು ಸೇರ್ಪಡೆ ಮಾಡಲು ಕೇಂದ್ರದ ಮನವೊಲಿಸಿ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
106 ಒಳಪಂಗಡಗಳು ಲಿಂಗಾಯತ ಸಮುದಾಯದಲ್ಲಿವೆ. 32 ಒಳಪಂಗಡಗಳು ಒಬಿಸಿ ಪಟ್ಟಿಯಲ್ಲಿ ಸೇರಿವೆ. ಉಳಿದ 74 ಒಳಪಂಗಡಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ವ್ಯಾಪ್ತಿಗೆ ಸೇರಿಸಬೇಕು. ಇದಕ್ಕಾಗಿ ಒಂದು ಆಯೋಗವನ್ನೂ ರಚಿಸಬೇಕು ಎಂದು ಆಗ್ರಹಿಸಿದರು.
ವೀರಶೈವ-ಲಿಂಗಾಯತರಿಗೆ ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ ಸಾಲದು. ಸಮುದಾಯದ ಮುಖಂಡರ ಜತೆ ಚರ್ಚಿಸಿ ಮುಂದುವರೆಯಬೇಕು. ಕೇಂದ್ರದಲ್ಲಿ ಮೀಸಲಾತಿ ಪ್ರಸ್ತಾಪ ಅಂಗೀಕಾರವಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.
ಲಿಂಗಾಯತರಿಗೆ ಮೀಸಲಾಗಿ 25 ವರ್ಷಗಳ ಹಿಂದೆಯೇ ಸರ್ಕಾರಗಳಿಗೆ ಬೇಡಿಕೆ ಸಲ್ಲಿಸಿದ್ದೆವು. ಕಳೆದ ಅಕ್ಟೋಬರ್ 28ರಂದು ಈ ಸಂಬಂಧ ಬೆಳಗಾವಿಯಲ್ಲಿ ಹೋರಾಟ ಮಾಡಿದ್ದೆವು. ಈಗ ನಮ್ಮ ಹೋರಾಟದ ಹಿನ್ನೆಲೆಯಲ್ಲಿ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದನೆ ಮಾಡುತ್ತಿದೆ ಎಂದು ಕೂಡಲಸಂಗಮ ಸ್ವಾಮೀಜಿ ತಿಳಿಸಿದ್ದಾರೆ.
ನಿಗಮಕ್ಕೆ ಬಸವಣ್ಣನ ಹೆಸರಿಡಿ
ಕಳೆದ ವಾರ ರಚನೆಯಾದ ವೀರಶೈವ-ಲಿಂಗಾಯ ಅಭವೃದ್ಧಿ ನಿಗಮಕ್ಕೆ ಬಸವಣ್ಣನ ಹೆಸರಿಡಬೇಕು. ಅಂಬೇಡ್ಕರ್, ದೇವರಾಜ ಅರಸು..ಹೀಗೆ ಬೇರೆ ಬೇರೆ ನಿಗಮಗಳಿವೆ. ಅದೇ ರೀತಿ ಬಸವಣ್ಣನ ಹೆಸರಿಟ್ಟರೆ ಲಿಂಗಾಯತರು-ವೀರಶೈವರೂ ಒಪುತ್ತಾರೆ. ಹೆಸರಿನ ಗೊಂದಲವೂ ಬಗೆಹರಿಯಲಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel