ಕಾವೇರಿ ನದಿ ಬಗ್ಗೆ ನಿಮಗೆಷ್ಟು ಗೊತ್ತು?
How much do you know about Kaveri River?
ದಕ್ಷಿಣ ಮಂದಾಕಿನಿ, ಕರ್ನಾಟಕದ ಜೀವನದಿ ಕಾವೇರಿ. ಹಿಂದಿನ ಸಂಚಿಕೆಯಲ್ಲಿ ಕಾವೇರಿ ನದಿಗೆ ಕಾವೇರಿ ಹೆಸರು ಹೇಗೆ ಬಂತು ಅಂತ ಹಿಂದಿನ ಸಂಚಿಕೆಯಲ್ಲಿ ತಿಳಕೊಂಡ್ರಿ. ಅದರ ಲಿಂಕ್ ಡಿಸ್ಕ್ರಿಪ್ಶನ್ ನಲ್ಲಿ ಇದೆ ನೋಡಬಹುದು. ಈ ಸಂಚಿಕೆಯಲ್ಲಿ ಕಾವೇರಿ ನದಿ ಹುಟ್ಟುವುದು ಎಲ್ಲಿ? ಯಾವಾಗ? ಯಾವ ರಾಜ್ಯಗಳಲ್ಲಿ ಹರಿಯುತ್ತೆ ತಿಳಿದುಕೊಳ್ಳೋಣ.
ವೀರರ ನಾಡು, ಮಲೆನಾಡಿನ ತಪ್ಪಲು ಪಶ್ಚಿಮ ಘಟ್ಟ ಕೊಡಗು ಜಿಲ್ಲೆಯ ತಲಕಾವೇರಿಯೆಂಬ ಸ್ಥಳದಲ್ಲಿ ಕಾವೇರಿ ನದಿ ಉಗಮವಾಗುತ್ತದೆ. ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಇದು ಅಕ್ಟೋಬರ್ ತಿಂಗಳಿನಲ್ಲಿ ಬರುತ್ತೆ.
ತುಲಾ ಸಂಕ್ರಮಣದ ದಿನ ನಿರ್ಧರಿತ ಲಗ್ನ ಹಾಗೂ ಮುಹೂರ್ತದಲ್ಲಿ ಗಂಗೆ ಮೊದಲು ಮಾಡಿಕೊಂಡು ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆ ಎಂಬ ನಂಬಿಕೆಯಿದೆ. ಹೀಗೆ ಬಂದು ಸೇರುವ ಈ ಪುಣ್ಯ ದಿನದಂದು ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ಕಾವೇರಿ ನದಿ ಉಗಮವಾಗುತ್ತದೆ.
ನಂತರ ಕೊಡಗಿನ ಬೆಟ್ಟಗಳಲ್ಲಿ ಹರಿದು ನಂತರ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತಾಳೆ. ಮುಂದೆ ಮೈಸೂರು, ಮಂಡ್ಯ ಜಿಲ್ಲೆಯನ್ನು ಪ್ರವೇಶಿಸುತ್ತಾಳೆ. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಆಣೆಕಟ್ಟು ಕಟ್ಟಲಾಗಿದೆ. ಈ ಮೂಲಕ ಮಂಡ್ಯ ಜಿಲ್ಲೆಯ ಜನರ ಬದುಕಿಗೆ ಜೀವನಾಡಿಯಾಗಿದ್ದಾಳೆ. ಮೈಸೂರು, ಮಂಡ್ಯ, ರಾಜಧಾನಿ ಬೆಂಗಳೂರು ಜನತೆಗೆ ಜೀವಜಲವಾಗಿದ್ದಾಳೆ.
ಅಲ್ಲದೆ ಮಂಡ್ಯ ಜಿಲ್ಲೆಯ, ಮಳವಳ್ಳಿಯಲ್ಲಿ ಶಿವನಸಮುದ್ರದಲ್ಲಿ 320 ಅಡಿಗಳ ಎತ್ತರದಿಂದ ಧುಮುಕಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತಾಳೆ.
ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯ ಉದ್ದೇಶ ನೀರಾವರಿ. ಕಾವೇರಿ ನದಿ ತಟದಲ್ಲಿ ಬರುವ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಶ್ರೀರಂಗಪಟ್ಟಣ ಒಂದು.
ಕಾವೇರಿ ನದಿಗೆ ಪ್ರಮುಖವಾಗಿ ಹರಂಗಿ, ಹೇಮಾವತಿ, ಕಬಿನಿ, ಭವಾನಿ, ಲಕ್ಷ್ಮಣ ತೀರ್ಥ, ನೊಯಾಲ್ ಮತ್ತು ಅರ್ಕಾವತಿ ಸೇರಿದಂತೆ ಹಲವು ಉಪನದಿಗಳಿವೆ.
ಕಾವೇರಿ ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹರಿಯುತ್ತಾಳೆ. ಕರ್ನಾಟಕದಲ್ಲಿ 34,273 ಚದರ ಕಿಲೋಮೀಟರ್, ತಮಿಳುನಾಡು, 43,868 ಚದರ ಕಿಲೋಮೀಟರ್, ಕೇರಳದಲ್ಲಿ 2,866 ಚದರ ಕಿಲೋಮೀಟರ್ ಮತ್ತು ಪುದುಚೇರಿ, 148 ಚದರ ಕಿಲೋಮೀಟರ್ ಹರಿಯುತ್ತಾಳೆ.
ಹೊಗೇನಕಲ್ ಜಲಪಾತವಾಗಿ ಧುಮುಕಿ ತಮಿಳುನಾಡನ್ನು ಪ್ರವೇಶಿಸಿ ಕಾವೇರಿ ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತಾಳೆ.







