ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ನಡೆದ ಬೆಳವಣಿಗೆಗಳು ಮತ್ತು ತಮ್ಮ ಮಾರ್ಕ್ ಚಿತ್ರದ ಕುರಿತಾದ ವಿವಾದಗಳಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸುದೀಪ್ ಅಭಿಮಾನಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸುದೀಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.
ವಿಜಯಲಕ್ಷ್ಮಿ ಆರೋಪಕ್ಕೆ ಸುದೀಪ್ ಸ್ಪಷ್ಟನೆ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಸುದೀಪ್ ಅಭಿಮಾನಿಗಳೆಂದು ಹೇಳಿಕೊಳ್ಳುವ ಕೆಲವರು ಅವಹೇಳನಕಾರಿ ಸಂದೇಶ ಕಳುಹಿಸುತ್ತಿದ್ದಾರೆ ಮತ್ತು ಇವರು ಸುದೀಪ್ ಅವರ ಕ್ಲಾಸ್ ಫ್ಯಾನ್ಸ್ ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಇಡೀ ಚಿತ್ರರಂಗ ಚೆನ್ನಾಗಿಯೇ ಇದೆ. ನನ್ನ ಅಭಿಮಾನಿಗಳು ಅಥವಾ ಹುಡುಗರು ತಪ್ಪು ದಾರಿಯಲ್ಲಿದ್ದರೆ ಹೇಳಿ, ಅದನ್ನು ಸರಿಪಡಿಸುವ ಜವಾಬ್ದಾರಿ ನನ್ನದು. ಆದರೆ ಕ್ಲಾಸ್ ಫ್ಯಾನ್ಸ್ ಎಂದು ಅವರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎನ್ನುವುದು ಸ್ಪಷ್ಟವಿಲ್ಲ. ಫೇಕ್ ಐಡಿಗಳಲ್ಲಿ ಬರುವ ಕಾಮೆಂಟ್ಗಳನ್ನು ಹಿಡಿದುಕೊಂಡು ಆರೋಪ ಮಾಡುವುದು ಸರಿಯಲ್ಲ. ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೋ ಅವರ ಹೆಸರನ್ನು ನೇರವಾಗಿ ಹೇಳಿದರೆ ಉತ್ತರಿಸಲು ಸುಲಭವಾಗುತ್ತದೆ ಎಂದು ತಿರುಗೇಟು ನೀಡಿದರು.
ನಾನೇನು ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ
ತಮ್ಮ ವ್ಯಕ್ತಿತ್ವ ಮತ್ತು ಚಿತ್ರರಂಗದಲ್ಲಿನ ತಮ್ಮ ನಿಲುವಿನ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಕಿಚ್ಚ, ಪ್ರೀತಿಯಿಂದ ಹೆತ್ತ ತಾಯಿ ಕಪಾಳಕ್ಕೆ ಹೊಡೆದರೆ ಅದನ್ನು ಸಹಿಸಿಕೊಳ್ಳಬಹುದು, ಅದು ಪ್ರೀತಿ. ಆದರೆ ಪಕ್ಕದ ಮನೆಯವರು ಬಂದು ಹೊಡೆದರೂ ಸುಮ್ಮನೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನು ನಾನಲ್ಲ. ನಾನು ಚಿತ್ರರಂಗಕ್ಕೆ ಬಂದಿರುವುದು ಮನರಂಜನೆ ನೀಡಲು ಮತ್ತು ಕೆಲಸ ಮಾಡಲು, ಜಗಳ ಆಡಲು ಅಲ್ಲ. ಆದರೆ ಅನಗತ್ಯವಾಗಿ ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಮಗಳ ಮೇಲಿನ ಟ್ರೋಲ್ಗೆ ಪ್ರಬುದ್ಧ ಉತ್ತರ
ಮಾರ್ಕ್ ಚಿತ್ರವನ್ನು ವೀಕ್ಷಿಸಲು ಬಂದಿದ್ದ ಸುದೀಪ್ ಪುತ್ರಿ ಸಾನ್ವಿ ಅವರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸುದೀಪ್ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಆಕೆ ನನ್ನ ಮಗಳು, ನಾನೇ ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಅವಳು ಕೂಡ ಇವನ್ನೆಲ್ಲ ಎದುರಿಸುವುದನ್ನು ಕಲಿಯಬೇಕು. ಆಕೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಮುಖವಿಲ್ಲದೆ ಕಾಮೆಂಟ್ ಮಾಡುವ ಪ್ರತಿಯೊಬ್ಬರಿಗೂ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಟ್ರೋಲಿಗರಿಗೆ ನಿರ್ಲಕ್ಷ್ಯದ ಉತ್ತರ ನೀಡಿದರು.
ಪೈರಸಿ ವಿರುದ್ಧ ಸಮರ ಮತ್ತು ಯುದ್ಧದ ಹೇಳಿಕೆ
ಮಾರ್ಕ್ ಸಿನಿಮಾ ಬಿಡುಗಡೆಯಾದ 24 ಗಂಟೆಯಲ್ಲೇ ಪೈರಸಿ ಹಾವಳಿ ಎದುರಿಸಿದೆ. ಈ ಬಗ್ಗೆ ಮಾತನಾಡಿದ ಸುದೀಪ್, ನಾನು ಹುಬ್ಬಳ್ಳಿಯ ಪ್ರೀ-ರಿಲೀಸ್ ಇವೆಂಟ್ನಲ್ಲಿ ಯುದ್ಧಕ್ಕೆ ರೆಡಿ ಎಂದು ಹೇಳಿದ್ದೆ. ಆಗ ಕೆಲವರು ಇದನ್ನು ಟೀಕಿಸಿದ್ದರು. ಈಗ ನೋಡಿ, ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಪೈರಸಿ ಕಾಪಿ ಹೊರಬಂದಿದೆ. ಕೇವಲ ಎರಡು ದಿನಗಳಲ್ಲಿ ನನಗೆ 4 ಸಾವಿರ ಪೈರಸಿ ಲಿಂಕ್ಗಳು ಬಂದಿವೆ ಮತ್ತು ಇಲ್ಲಿಯವರೆಗೆ ನಾವು 9 ಸಾವಿರ ಲಿಂಕ್ಗಳನ್ನು ಡಿಲೀಟ್ ಮಾಡಿಸಿದ್ದೇವೆ. ಇದಕ್ಕಾಗಿಯೇ ನಾನು ಅಂದು ನಮ್ಮ ಪಡೆ ಯುದ್ಧಕ್ಕೆ ಸಜ್ಜಾಗಿದೆ ಎಂದು ಹೇಳಿದ್ದೆ. ಪೈರಸಿ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಅಪ್ಪ ಅಮ್ಮ ಇಲ್ಲದ ಅನಾಥ ರಿವ್ಯೂಗಳು
ಮಾಧ್ಯಮಗಳ ಹೆಸರಿನಲ್ಲಿ ನಕಲಿ ಸುದ್ದಿಗಳು ಮತ್ತು ವಿಮರ್ಶೆಗಳು ಹರಿದಾಡುತ್ತಿರುವ ಬಗ್ಗೆಯೂ ಸುದೀಪ್ ವ್ಯಂಗ್ಯವಾಡಿದರು. ಕೇವಲ ಸಿನಿಮಾ ಮಾತ್ರವಲ್ಲ, ಪ್ರಖ್ಯಾತ ಮಾಧ್ಯಮಗಳ ಹೆಸರನ್ನೂ ಪೈರಸಿ ಮಾಡಲಾಗುತ್ತಿದೆ. ಒಂದೇ ಚಿತ್ರಕ್ಕೆ ಎರಡು ಬಗೆಯ ರಿವ್ಯೂಗಳು ಸಿಗುತ್ತಿವೆ. ಒಂದು ಅಧಿಕೃತವಾದರೆ, ಇನ್ನೊಂದು ಅಪ್ಪ-ಅಮ್ಮ ಇಲ್ಲದ ಅನಾಥ ರಿವ್ಯೂ ಎಂದು ಸೋಷಿಯಲ್ ಮೀಡಿಯಾದಲ್ಲಿನ ಫೇಕ್ ಸುದ್ದಿಗಳಿಗೆ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದರು.
ಮಾರ್ಕ್ ಚಿತ್ರದ ಯಶಸ್ಸಿನ ಜೊತೆಗೆ ಅನಗತ್ಯ ವಿವಾದಗಳು ಮತ್ತು ಪೈರಸಿ ಹಾವಳಿಯ ಬಗ್ಗೆ ಸುದೀಪ್ ಅವರು ತಮ್ಮ ನೇರ ನಡೆ ನುಡಿಯ ಮೂಲಕ ಉತ್ತರ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯ, ನಿರ್ಮಾಪಕ ಜಾಕ್ ಮಂಜು, ವಿತರಕ ಕಾರ್ತಿಕ್ ಗೌಡ, ಸಾಹಸ ನಿರ್ದೇಶಕ ರವಿವರ್ಮ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಉಪಸ್ಥಿತರಿದ್ದರು.








