ಬೆಂಗಳೂರು: ನಾನು ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ಮುಖಂಡರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ, ಪಕ್ಷ ನನಗೆ ಅನಿವಾರ್ಯ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ (D K Suresh) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ (Channapatna) ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆದಿದ್ದು, ಸುದೀರ್ಘವಾಗಿ ಚರ್ಚೆ ಆಗಿದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ನನ್ನ ಮೇಲೂ ಒತ್ತಡ ಇದೆ, ನಾನು ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ.
ಅಧಿಕಾರ, ಚುನಾವಣೆ ದೃಷ್ಟಿಯಿಂದ ನಾನಿಲ್ಲ. ಮುಖಂಡರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ, ಪಕ್ಷ ನನಗೆ ಅನಿವಾರ್ಯ ಎಂದು ಹೇಳಿದ್ದಾರೆ. ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಗೌರವಕ್ಕೆ ನಾನು ಸದಾ ಋಣಿಯಾಗಿದ್ದೇನೆ. ನಾನು ಕೂಡ ಕಾರ್ಯಕರ್ತರಿಗೆ ಭರವಸೆ ನೀಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ ಎಂದಿದ್ದೇನೆ. ಒಂದು ವೇಳೆ ಪಕ್ಷ ನನ್ನನ್ನ ಆಯ್ಕೆ ಮಾಡಿದರೆ ನಾನು ನನ್ನ ಅಭಿಪ್ರಾಯ ತಿಳಿಸುತ್ತೇನೆ. ನಮ್ಮ ಮುಖಂಡರ ಕಾರ್ಯಕರ್ತರು ಚುನಾವಣೆಗೆ ಸಿದ್ಧವಾಗಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರ ಐದು ವರ್ಷ ಪೂರೈಸಲ್ಲ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಕೂಡ ಕೇಂದ್ರ ಮಂತ್ರಿಯಾಗಿ ಇರುವುದಿಲ್ಲ. ಒಂದು ವರ್ಷ ಆರು ತಿಂಗಳ ಒಳಗೆ ಅವನು ಮನೆಗೆ ಹೋಗುತ್ತಾನೆ. ಅವನು ಯಾವ ಕಾರಣಕ್ಕೆ ಹಾಗೇ ಹೇಳಿದ? ಅವನು ಯಾವ ಆಧಾರದ ಮೇಲೆ ಹೇಳಿದ? ನಮ್ಮ ಸರ್ಕಾರ ಇರಲ್ಲ ಅಂದ ಮೇಲೆ ಅವನೂ ಇರಲ್ಲ ಎಂದು ಗುಡುಗಿದ್ದಾರೆ.