ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆ ನೀಡಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ನಿರ್ಧಾರ ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಇದು ತಮ್ಮ ರಾಜಕೀಯ ಜೀವನದಲ್ಲೇ ಕಂಡ ಅತ್ಯಂತ ಕೆಟ್ಟ ಆಡಳಿತ ಎಂದು ಜರಿದರು.
ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಜನತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್ಡಿಎ ಮೈತ್ರಿಕೂಟದ ಬಗ್ಗೆ ಅಚಲ ವಿಶ್ವಾಸ ವ್ಯಕ್ತಪಡಿಸಿದ ಗೌಡರು, ಕುಮಾರಸ್ವಾಮಿ ಅವರ ಪಾತ್ರ ಮತ್ತು ಎನ್ಡಿಎ ಬಲವರ್ಧನೆಯ ಕುರಿತು ಮಹತ್ವದ ಮಾತುಗಳನ್ನು ಆಡಿದರು.
ಮೋದಿ-ಶಾ ತೀರ್ಮಾನವೇ ಅಂತಿಮ
ತಮ್ಮ ಪುತ್ರ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು ನನ್ನ ಕೈಯಲ್ಲಿಲ್ಲ. ಆ ಅಧಿಕಾರ ಮತ್ತು ತೀರ್ಮಾನ ಸಂಪೂರ್ಣವಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಸೇರಿದ್ದು. ಜೆಡಿಎಸ್ ಪಕ್ಷವು ಎನ್ಡಿಎ ಮೈತ್ರಿಕೂಟಕ್ಕೆ ನೀಡುತ್ತಿರುವ ಶಕ್ತಿ ಮತ್ತು ಬೆಂಬಲವನ್ನು ಅರಿತು, ಅದನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬ ರಾಜಕೀಯ ಜಾಣ್ಮೆ ಹಾಗೂ ಪ್ರಬುದ್ಧತೆ ಮೋದಿ ಮತ್ತು ಶಾ ಅವರಿಗೆ ಇದೆ. ಎನ್ಡಿಎ ಒಕ್ಕೂಟವನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸ ನನಗಿದೆ ಎಂದು ದೇವೇಗೌಡರು ತಿಳಿಸಿದರು.
ತೊಂಬತ್ತಮೂರರ ಇಳಿವಯಸ್ಸಿನಲ್ಲೂ ಅದೇ ಗತ್ತು
ಭಾವನಾತ್ಮಕವಾಗಿ ಮಾತನಾಡಿದ ಮಾಜಿ ಪ್ರಧಾನಿಗಳು, ನನಗೆ ಈಗ 93 ವರ್ಷ ವಯಸ್ಸಾಗಿದೆ. ವೈಯಕ್ತಿಕವಾಗಿ ನಾನು ಮತ್ತೆ ಮಂತ್ರಿಯಾಗುವ, ಮುಖ್ಯಮಂತ್ರಿಯಾಗುವ ಅಥವಾ ಪ್ರಧಾನಿಯಾಗುವ ಯಾವುದೇ ಇಚ್ಛೆಯನ್ನು ಹೊಂದಿಲ್ಲ. ಆದರೆ, ಈ ಶರೀರದಿಂದ ಆತ್ಮ ಹೊರಹೋಗುವ ಮುನ್ನ ರಾಜ್ಯದಲ್ಲಿ ಒಂದು ಸುಭದ್ರ ಹಾಗೂ ಯೋಗ್ಯ ಆಡಳಿತ ನೀಡುವ ಸರ್ಕಾರವನ್ನು ನೋಡುವ ಹಂಬಲವಿದೆ. ಅಂತಹ ಬದಲಾವಣೆಯನ್ನು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾತ್ರ ತರಲು ಸಾಧ್ಯ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಗುಡುಗು
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ದೇವೇಗೌಡರು, ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಕಳಪೆ ಹಾಗೂ ಕೆಟ್ಟ ಆಡಳಿತ ನೀಡುತ್ತಿರುವ ಸರ್ಕಾರವನ್ನು ನಾನು ನೋಡಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಅವರು, ಜನರಿಗೆ ಉಚಿತ ಕೊಡುಗೆಗಳನ್ನು ನೀಡುವುದಕ್ಕಿಂತ ಮುಖ್ಯವಾಗಿ, ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಅಖಂಡ ಕರ್ನಾಟಕದ ಮಂತ್ರ
ರಾಜ್ಯವನ್ನು ಮೈಸೂರು ಕರ್ನಾಟಕ, ಕಿತ್ತೂರು ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕ ಎಂದು ಪ್ರಾದೇಶಿಕವಾಗಿ ಒಡೆಯುವ ಅಥವಾ ವಿಂಗಡಿಸುವ ಅಗತ್ಯವಿಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಒಟ್ಟಾಗಿ ಇರೋಣ ಮತ್ತು ಸಮೃದ್ಧ ಕರ್ನಾಟಕವನ್ನು ಕಟ್ಟೋಣ ಎಂದು ಕರೆ ನೀಡಿದರು. ಇದೇ ವೇಳೆ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ಗೆ ಏರಿಸಲು ನ್ಯಾಯಾಧೀಕರಣ ಅವಕಾಶ ನೀಡಿದ್ದು, ಅದರ ಅನುಷ್ಠಾನಕ್ಕಾಗಿ ತಾವು ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.
ಯುವ ಜನಾಂಗಕ್ಕೆ ನೇಗಿಲ ಗೆರೆಗಳು
ಸಮಾವೇಶದಲ್ಲಿ ತಮ್ಮ ಆತ್ಮಚರಿತ್ರೆಯಾದ ನೇಗಿಲ ಗೆರೆಗಳು ಪುಸ್ತಕವನ್ನು ಪ್ರದರ್ಶಿಸಿದ ದೊಡ್ಡಗೌಡರು, ಅದರಲ್ಲಿ ಉಲ್ಲೇಖಿಸಲಾದ ಹಳೆಯ ರಾಜಕೀಯ ಘಟನೆಗಳನ್ನು ಮೆಲುಕು ಹಾಕಿದರು. ಇಂದಿನ ಯುವ ಶಾಸಕರು ಮತ್ತು ರಾಜಕೀಯ ಮುಖಂಡರು ಈ ಪುಸ್ತಕವನ್ನು ಓದಿ, ಹಳೆಯ ಹೋರಾಟ ಮತ್ತು ರಾಜಕೀಯ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.








