ನಾನು ಯೋಧ, ಹುಟ್ಟಿದ್ದೇ ಹುತಾತ್ಮನಾಗುವುದಕ್ಕಾಗಿ – ಕಮಾಂಡರ್ ಕ್ಯಾಪ್ಟನ್ ದೀಪಕ್ ಸಾಥೆ
ಕೋಝಿಕೋಡ್, ಅಗಸ್ಟ್ 8: ಶುಕ್ರವಾರ ರಾತ್ರಿ ದುಬೈನಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ, ಶುಕ್ರವಾರ ಕೇರಳದ ಕೋಝಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಜಾರಿ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಅಧಿಕೃತ ಮಾಹಿತಿ ಪ್ರಕಾರ 18 ಪ್ರಯಾಣಿಕರು ಮೃತಪಟ್ಟಿದ್ದಾರೆ. ಒಂದು ವೇಳೆ ವಿಮಾನವು ಬೆಂಕಿಗೆ ಆಹುತಿಯಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರುತ್ತಿತ್ತು ಎಂದು ಅಂದಾಜಿಸಲಾಗಿದೆ.
ಸುಮಾರು 35 ಅಡಿಗಳ ಕಮರಿಗೆ ಬಿದ್ದು ಎರಡು ಭಾಗಗಳಾಗಿ ಮುರಿದರೂ, ವಿಮಾನಕ್ಕೆ ಬೆಂಕಿ ಹಿಡಿಯಲಿಲ್ಲ, ಇದರಿಂದಾಗಿ ನೂರಾರು ಜೀವಗಳು ಉಳಿದಿದೆ. ಇದೀಗ ನೂರಾರು ಪ್ರಯಾಣಿಕರ ಜೀವವನ್ನು ಉಳಿಸಲು ತಮ್ಮ ಪ್ರಾಣ ತ್ಯಾಗ ಮಾಡಿರುವ ಪೈಲಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ದುಬೈ- ಕೋಝಿಕೋಡ್ ವಿಮಾನದ ಕಮಾಂಡರ್ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಮತ್ತು ಅವರ ಪ್ರಥಮ ಅಧಿಕಾರಿ ಅಖಿಲೇಶ್ ಕುಮಾರ್ ಅವರೊಂದಿಗೆ ಅಪಘಾತಕ್ಕೀಡಾದವರಾಗಿದ್ದಾರೆ.
2003 ರಲ್ಲಿ ಭಾರತೀಯ ವಾಯುಪಡೆಯೊಂದಿಗೆ (ಐಎಎಫ್) ವಿಂಗ್ ಕಮಾಂಡರ್ ಆಗಿ ನಿವೃತ್ತರಾದ ಕ್ಯಾಪ್ಟನ್ ಸಾಥೆ, ಅಪಘಾತಕ್ಕೆ ಮುಂಚೆಯೇ ವಿಮಾನದ ಎಂಜಿನ್ ಅನ್ನು ಆಫ್ ಮಾಡಿದ್ದಾರೆ, ಇದರಿಂದಾಗಿ ವಿಮಾನಕ್ಕೆ ಲ್ಯಾಂಡಿಂಗ್ ಮೇಲೆ ಅಪಘಾತಕ್ಕೆ ಒಳಗಾದರೂ ಬೆಂಕಿ ಹಿಡಿದಿಲ್ಲ ಮತ್ತು, ಪ್ರಕ್ರಿಯೆಯಲ್ಲಿ, ಹಲವಾರು ಜೀವಗಳು ಉಳಿದಿವೆ.
ಭಾರಿ ಮಳೆಯಾಗುತ್ತಿದೆ. ಹವಾಮಾನ ನಿಜವಾಗಿಯೂ ಕೆಟ್ಟದಾಗಿದೆ ಎಂದು ಪೈಲಟ್ ಇಳಿಯುವ ಮೊದಲು ಎಚ್ಚರಿಕೆ ನೀಡಿದ್ದರು. ಅವರು ಸುರಕ್ಷಿತ ಲ್ಯಾಂಡಿಂಗ್ಗಾಗಿ ಎರಡು ಬಾರಿ ಪ್ರಯತ್ನಿಸಿದರು ಆದರೆ ನಿಯಂತ್ರಣ ಕಳೆದುಕೊಂಡರು. ಇದು ಅನೇಕರಿಗೆ ಪವಾಡದ ಪಾರಾಗಿದೆ ಎಂದು ಬದುಕುಳಿದವರಲ್ಲಿ ಒಬ್ಬರು ಹೇಳಿದ್ದಾರೆ.

ದೀಪಕ್ ಸಾಥೆ ಅವರ ಸೋದರಸಂಬಂಧಿ ನಿಲೇಶ್ ಸಾಥೆ ಅವರು ದೀಪಕ್ ಸಾಥೆ ಇಲ್ಲ ಎಂದು ನಂಬುವುದು ನನಗೆ ಕಷ್ಟವಾಗಿದೆ ಎಂದು ಹೇಳಿದ್ದು, ತನಗೆ ತಿಳಿದಿರುವ ಮಾಹಿತಿ ಪ್ರಕಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲ್ಯಾಂಡಿಂಗ್ ಗೇರುಗಳು ಕಾರ್ಯನಿರ್ವಹಿಸಲಿಲ್ಲ. ವಿಮಾನವನ್ನು ಬೆಂಕಿ ಹಿಡಿಯದಂತೆ ಮಾಡಲು ಮಾಜಿ ಐಎಎಫ್ ಪೈಲಟ್ ದೀಪಕ್ ಸಾಥೆ ವಿಮಾನವನ್ನು ನಿಲ್ದಾಣದ ಸುತ್ತ ಮೂರು ಬಾರಿ ಸುತ್ತಾಡಿಸಿ ಇಂಧನವನ್ನು ಖಾಲಿ ಮಾಡಿಸಿದರು. ಅಷ್ಟೇ ಅಲ್ಲ ವಿಮಾನ ಅಪಘಾತಕ್ಕೀಡಾಗುವ ಮೊದಲು ಎಂಜಿನ್ ಅನ್ನು ದೀಪಕ್ ಸಾಥೆ ಅಫ್ ಮಾಡಿದರು. ಎರಡು
ಬಾರಿ ಲ್ಯಾಂಡ್ ಆಗಲು ಪ್ರಯತ್ನಿಸಿದ್ದು ಮೂರನೇ ಬಾರಿ ವಿಮಾನ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ. ನೂರಾರು ಜನರ ಜೀವ ಉಳಿಸಿದ ಪೈಲಟ್ ವಿಮಾನ ಅಪಘಾತದಲ್ಲಿ ಹುತಾತ್ಮರಾಗಿದ್ದಾರೆ.

ದೀಪಕ್ ಒಬ್ಬ ಅನುಭವಿ ವೈಮಾನಿಕ ಆಪರೇಟರ್ ಆಗಿದ್ದು, 36 ವರ್ಷಗಳ ಅನುಭವ ಹೊಂದಿದ್ದಾರೆ. ಎನ್ ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪದವೀಧರ, ಕಲಿಕೆಯಲ್ಲಿ ಅಗ್ರಸ್ಥಾನಿಯಾಗಿದ್ದ ಅವರು ‘ಸ್ವೋರ್ಡ್ ಆಫ್ ಆನರ್’ ಪ್ರಶಸ್ತಿ ಪುರಸ್ಕೃತರು. ದೀಪಕ್ 2005 ರಲ್ಲಿ ಏರ್ ಇಂಡಿಯಾದೊಂದಿಗೆ ವಾಣಿಜ್ಯ ಪೈಲಟ್ ಆಗಿ ಸೇರುವ ಮೊದಲು 21 ವರ್ಷಗಳ ಕಾಲ ಭಾರತೀಯ ವಾಯುಪಡೆಗೆ ಸೇವೆ ಸಲ್ಲಿಸಿದ್ದರು.
ಅವರು ಕೇವಲ ಒಂದು ವಾರದ ಮೊದಲು ನನಗೆ ಕರೆ ಮಾಡಿ ಮಾತನಾಡಿದ್ದರು ಎಂದಿರುವ ನಿಲೇಶ್, ದೀಪಕ್ ಯಾವಾಗಲೂ ಖುಷಿಯಾಗಿರುತ್ತಿದ್ದರು. ವಂದೇ ಭಾರತ್’ ಮಿಷನ್ ಬಗ್ಗೆ ನಾನು ಅವರನ್ನು ಕೇಳಿದಾಗ, ಅರಬ್ ದೇಶಗಳಿಂದ ನಮ್ಮ ದೇಶವಾಸಿಗಳನ್ನು ಮರಳಿ ಕರೆತರುವ ಬಗ್ಗೆ ಅವರು ಹೆಮ್ಮೆಪಟ್ಟಿದ್ದರು. ಅವರ ಬಳಿ ನಾನು , ದೀಪಕ್, ಆ ದೇಶಗಳು ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡದಿದ್ದರೆ ನೀವು ಖಾಲಿ ವಿಮಾನವನ್ನು ಹಾರಿಸುತ್ತೀರಾ ಎಂದು ಕೇಳಿದ್ದಾಗ ಅದಕ್ಕೆ ಅವರು ಓಹ್, ಇಲ್ಲ. ನಾವು ಹಣ್ಣುಗಳು, ತರಕಾರಿಗಳು, ಔಷಧಿಗಳನ್ನು ಇತ್ಯಾದಿಗಳನ್ನು ಆ ದೇಶಗಳಿಂದ ತುಂಬಿಸಿಕೊಂಡು ಬರುತ್ತೇನೆ ಮತ್ತು ವಿಮಾನವನ್ನು ಎಂದಿಗೂ ಖಾಲಿಯಾಗಿ ಹಾರಿಸುವುದಿಲ್ಲ ಎಂದು ಉತ್ತರಿಸಿದ್ದರು. ಅದು ಅವರೊಂದಿಗಿನ ನನ್ನ ಕೊನೆಯ ಸಂಭಾಷಣೆಯಾಗಿತ್ತು ಎಂದು ನಿಲೇಶ್ ಹೇಳಿದ್ದಾರೆ.

ತೊಂಬತ್ತರ ದಶಕದ ಆರಂಭದಲ್ಲಿ ಅವರು ವಾಯುಪಡೆಯಲ್ಲಿದ್ದಾಗ ನಡೆದ ವಿಮಾನ ಅಪಘಾತದಲ್ಲಿ ಬದುಕುಳಿದಿದ್ದರು. ಅವರ ತಲೆಬುರುಡೆಗೆ ಅನೇಕ ಗಾಯಗಳಾಗಿದ್ದು, 6 ತಿಂಗಳ ಕಾಲ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮತ್ತೆ ಹಾರಾಟ ನಡೆಸುತ್ತಾರೆಂದು ಯಾರೂ ಭಾವಿಸಿರಲಿಲ್ಲ. ಆದರೆ ಅವರ ಬಲವಾದ ಇಚ್ಛಾಶಕ್ತಿ ಲ ಮತ್ತು ಹಾರಾಟದ ಮೇಲಿನ ಪ್ರೀತಿಯು ಅವರನ್ನು ಮತ್ತೆ ಮೊದಲಿನಂತಾಗಿಸಿತು ಮತ್ತು ಅದು ಒಂದು ಪವಾಡವಾಗಿತ್ತು ಎಂದು ನಿಲೇಶ್ ಸಾಥೆ ಹೇಳಿದ್ದಾರೆ.

ಅವರು ತನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ, ಇಬ್ಬರೂ ಐಐಟಿ ಮುಂಬೈನ ಪದವೀಧರರು. ದೀಪಕ್ ಸಾಥೆ ಬ್ರಿಗೇಡಿಯರ್ ವಸಂತ್ ಸಾಥೆ ಅವರ ಪುತ್ರರಾಗಿದ್ದು, ಪತ್ನಿಯೊಂದಿಗೆ ನಾಗ್ಪುರದಲ್ಲಿ ವಾಸವಾಗಿದ್ದರು. ಅವರ ಸಹೋದರ ಕ್ಯಾಪ್ಟನ್ ವಿಕಾಸ್, ಜಮ್ಮು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಹುತಾತ್ಮರಾದ ಸೈನಿಕರಾಗಿದ್ದಾರೆ
ಒಬ್ಬ ಸೈನಿಕನು ತನ್ನ ದೇಶವಾಸಿಗಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನು ಅಡವಿಡುತ್ತಾನೆ. ಅದೇ ರೀತಿ ದೀಪಕ್ ಸಾಥೆ ತನ್ನ ಸಹಪ್ರಯಾಣಿಕರ ಜೀವವನ್ನು ಉಳಿಸಲು ಹುತಾತ್ಮರಾದರು ಎಂದು ಹೇಳಿರುವ ನಿಲೇಶ್ ಸಾಥೆ ನನಗೆ ಈ ಸಂದರ್ಭದಲ್ಲಿ ಸೈನಿಕನ ಕವಿತೆಯೊಂದು ನೆನಪಾಗುತ್ತಿದೆ ಎಂದು ಆ ಕವಿತೆಯನ್ನು ಹಂಚಿಕೊಂಡಿದ್ದಾರೆ..
ನಾನು ಯುದ್ಧದಲ್ಲಿ ಮೃತಪಟ್ಟರೆ ನನ್ನನ್ನು ಪೆಟ್ಟಿಗೆಯಲ್ಲಿರಿಸಿ
ಮನೆಗೆ ಕಳುಹಿಸಿ…
ನನ್ನೆಲ್ಲ ಪದಕಗಳನ್ನೂ ನನ್ನ ಎದೆಯ ಮೇಲೆ ಇರಿಸಿ..
ನನ್ನಮ್ಮನಿಗೆ ಹೇಳಿ, ನಾನು ಅತ್ಯುತ್ತಮವಾಗಿ ಮಾಡಿದ್ದೇನೆ ಎಂದು…
ನನ್ನ ತಂದೆಗೆ ಹೇಳಿ ತಲೆಬಾಗಬೇಡಿ ಎಂದು..
ಅವರಿಗೆ ಇನ್ನು ಮುಂದೆ ನನ್ನಿಂದ ಯಾವುದೇ ತಲೆಬಿಸಿಗಳು ಇರುವುದಿಲ್ಲ..
ಚೆನ್ನಾಗಿ ಓದುವುದಕ್ಕೆ ನನ್ನ ಸಹೋದರನಿಗೆ ಹೇಳಿ…
ಇನ್ನು ಮುಂದೆ ನನ್ನ ಬೈಕ್ ನ ಕೀ ಅವನಿಗೆ ಶಾಶ್ವತ ಎಂದು…
ನನ್ನ ತಂಗಿಗೆ ದುಃಖಿಸಿಕೊಳ್ಳಬೇಡವೆಂದು ಹೇಳಿ
ಅವಳ ಅಣ್ಣ ದೀರ್ಘ ನಿದ್ರೆಯಲ್ಲಿ ಇದ್ದಾನೆ ಎಂದು…
ನನ್ನ ಪ್ರೀತಿಗೆ ಹೇಳಿ, ಅಳಬೇಡ ಎಂದು…
ಏಕೆಂದರೆ ನಾನು ಯೋಧ, ಹುಟ್ಟಿದ್ದೇ ಹುತಾತ್ಮನಾಗುವುದಕ್ಕಾಗಿ!
ನಿಲೇಶ್ ಸಾಥೆ








