ತುಮಕೂರು: ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ಸಾಲ ಹಂಚಿಕೆ ವಿಚಾರವಾಗಿ ತುಮಕೂರು ಜಿಲ್ಲಾ ರಾಜಕಾರಣದಲ್ಲಿ ಭಾರಿ ವಾಕ್ಸಮರ ಶುರುವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ತಾರತಮ್ಯದ ಬಗ್ಗೆ ದೂರು ನೀಡಿದ್ದ ಕುಣಿಗಲ್ ಶಾಸಕ ಕೆ.ಆರ್.ರಂಗನಾಥ್ ವಿರುದ್ಧ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎನ್.ರಾಜಣ್ಣ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಕೇಳೋಕೆ ಇವನ್ಯಾರ್ರೀ? ಎಂದು ಗುಡುಗಿದ್ದಾರೆ.
ಮಧುಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದೇ ದಾಟಿಯಲ್ಲಿ ಕುಣಿಗಲ್ ಶಾಸಕರ ವಿರುದ್ಧ ಹರಿಹಾಯ್ದರು. ಮಧುಗಿರಿ ನನ್ನ ಕ್ಷೇತ್ರ, ಇಲ್ಲಿನ ರೈತರಿಗೆ ನಾನು ಸಾಲ ಕೊಟ್ಟರೆ ಪ್ರಶ್ನಿಸಲು ಇವರು ಯಾರು? ಎಂಬ ಖಾರವಾದ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಏನಾಗಿತ್ತು?
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ್ದ ಕುಣಿಗಲ್ ಶಾಸಕ ರಂಗನಾಥ್, ತುಮಕೂರು ಡಿಸಿಸಿ ಬ್ಯಾಂಕ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಮಧುಗಿರಿ ಕ್ಷೇತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಆದರೆ, ಕುಣಿಗಲ್ ತಾಲೂಕಿಗೆ ಕೇವಲ 1 ಕೋಟಿ ರೂಪಾಯಿ ನೀಡುವ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಸಹಕಾರ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ಸದನದಲ್ಲಿ ಒತ್ತಾಯಿಸಿದ್ದರು.
ರೊಚ್ಚಿಗೆದ್ದ ರಾಜಣ್ಣ, ಅಹಿಂದ ಅಸ್ತ್ರ ಪ್ರಯೋಗ
ಕುಣಿಗಲ್ ಶಾಸಕರ ಈ ಆರೋಪಕ್ಕೆ ಮಧುಗಿರಿಯಲ್ಲಿ ಕೆಂಡಾಮಂಡಲವಾದ ಕೆ.ಎನ್.ರಾಜಣ್ಣ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಹಂಚಿರೋದು ಇವನ ದುಡ್ಡಲ್ಲ, ಇದು ಸರ್ಕಾರದ ಹಣವೂ ಅಲ್ಲ. ಇದು ರೈತರಿಂದಲೇ ಸಂಗ್ರಹಿಸಿದ ಠೇವಣಿ ಹಣ. ಠೇವಣಿ ತರೋನು ನಾನು, ಸಾಲ ಕೊಡೋನು ನಾನು. ಇದರಲ್ಲಿ ತಲೆ ಹಾಕಲು ಇವನ್ಯಾರು ಎಂದು ಶಾಸಕ ರಂಗನಾಥ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ನ್ಯಾಯದ ಪಾಠ
ಇದೇ ವೇಳೆ ಜಾತಿ ಸಮೀಕರಣದ ಲೆಕ್ಕಾಚಾರವನ್ನೂ ರಾಜಣ್ಣ ಬಿಚ್ಚಿಟ್ಟಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಶೇಕಡಾ 70ರಷ್ಟು ಒಕ್ಕಲಿಗ ಸಮುದಾಯದವರಿದ್ದಾರೆ. ಅಲ್ಲಿ ಅಹಿಂದ ವರ್ಗದ ರೈತರ ಸಂಖ್ಯೆ ತೀರಾ ಕಡಿಮೆ. ಆದರೆ, ಮಧುಗಿರಿ ಉಪವಿಭಾಗದಲ್ಲಿ ಚಿತ್ರಣ ಹಾಗಿಲ್ಲ. ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು, ದಲಿತರು ಹಾಗೂ ಅಹಿಂದ ರೈತರಿದ್ದಾರೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನನ್ನ ಕ್ಷೇತ್ರದ ಹಿಂದುಳಿದ ಜನರಿಗೆ ನಾನು ಹೆಚ್ಚು ಸಾಲ ನೀಡಿದ್ದೇನೆ. ಮಧುಗಿರಿಯ ಜನರಿಗೆ ಇನ್ನಷ್ಟು ಸಾಲ ಕೊಡುತ್ತೇನೆ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಡಿಸಿಸಿ ಬ್ಯಾಂಕ್ ಸಾಲದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಬಲ ನಾಯಕರ ನಡುವಿನ ಈ ಬಹಿರಂಗ ಕಾದಾಟ, ಜಿಲ್ಲಾ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಸಹಕಾರಿ ರಂಗದ ಭೀಷ್ಮ ಎಂದೇ ಕರೆಯಲ್ಪಡುವ ರಾಜಣ್ಣನವರ ಈ ಆಕ್ರೋಶಕ್ಕೆ ಕುಣಿಗಲ್ ಶಾಸಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.








