ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಬದಲವಾಣೆಯ ಕಿತ್ತಾಟ ಜೋರಾಗಿದೆ. ಸ್ವಾಮೀಜಿಗಳು ಕೂಡ ಅಖಾಡಕ್ಕೆ ಇಳಿದು ತಮ್ಮ ಜಾತಿಗೊಂದು ಅವಕಾಶ ಕೊಡಿ ಎಂದು ಜನರು ಛೀಮಾರಿ ಹಾಕುವಂತೆ ಬಹಿರಂಗವಾಗಿಯೇ ಮನವಿ ಮಾಡುತ್ತಿದ್ದಾರೆ. ಈಗ ವಿಷಯ ತಾರಕ್ಕೆ ಹೋಗಿದ್ದು, ಅಹಿಂದ ಸಮುದಾಯ ಕಾಂಗ್ರೆಸ್ ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದೆ.
ಎಚಂದ್ರಶೇಖರ ಸ್ವಾಮೀಜಿ ಮಾತು ಕೇಳಿ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದ್ದೇ ಆದ್ರೆ, ನಾವು ಬೀದಿಗೆ ಇಳಿ ಬೇಕಾಗ್ತದೆ. ಇಡೀ ಅಹಿಂದ ವರ್ಗ ಒಂದಾಗಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಿದೆ. ಯಾವುದೇ ಕಾರಣಕ್ಕೂ ಸ್ವಾಮೀಜಿಗಳ ಮಾತು ಕೇಳಿ ಸಿದ್ದರಾಮಯ್ಯರ ಹುದ್ದೆಯನ್ನು ಕಸಿದುಕೊಳ್ಳಬಾರದು. ಯಾವುದೋ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದ್ರೆ ಹೋರಾಟ ನಿಶ್ಚಿತ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿ ನಡೆಸಿ ನಡೆಸಿದ ಒಕ್ಕೂಟದ ಮುಖಂಡರು, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಒಂದು ವೇಳೆ ಹೈಕಮಾಂಡ್ ತಲೆಯಲ್ಲಿ ಸಿಎಂ ಸ್ಥಾನ ಬದಲಾವಣೆ ಮಾಡುವುದೇ ಇದ್ದರೆ ದಲಿತ ಸಮುದಾಯಕ್ಕೆ ಕೊಡಲಿ. ಮಲ್ಲಿಕಾರ್ಜುನ ಎಂಬ ಖರ್ಗೆ, ಪರಮೇಶ್ವರ್, ಹರಿಪ್ರಸಾದ್ ಇದ್ದಾರೆ. ಅವರಿಗೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಒಕ್ಕೂಟದ ಸಂಚಾಲಕರಾದ ‘ಮಾವಳ್ಳಿ ಶಂಕರ್ ಮಾತನಾಡಿ ಸಮುದಾಯದ ಪರವಾಗಿ ಪಾಲು ಕೊಡಬೇಕು. ಬಸವಾದಿ ಶರಣದ ಮಠಗಳು ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಸಂಗತಿಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಬಿಎಸ್ ಯಡಿಯೂರಪ್ಪ ಪರವಾಗಿ ಈ ಹಿಂದೆ ಸ್ವಾಮೀಜಿಗಳು ಹೋರಾಟದ ಎಚ್ಚರಿಕೆ ನೀಡಿದ್ದರು. ಹಾಗಾದರೆ ಬೇರೆ ಸಮಾಜ ಇಲ್ಲವೇ? ಬೇರೆ ಸಮಾಜ ಮತ ಹಾಕಲು ಮಾತ್ರ ಸೀಮಿತವೇ? ರಾಜ್ಯದ ಶೋಷಿತ ಸಮಾಜದ ಪಾಲನ್ನು ಕೊಡಬೇಕು ಎಂದು ಗುಡುಗಿದ್ದಾರೆ.
ಮಠಾಧೀಶರು ಸರ್ವ ತ್ಯಾಗಿಗಳು, ಅವರಿಗೆ ಜಾತಿ ಧರ್ಮ ಇಲ್ಲ. ಆದರೆ ಇತ್ತೀಚೆಗೆ ಮಠಾಧೀಶರು ಜಾತಿ ಪರವಾಗಿ ಮಾತನಾಡುವುದು ಖಂಡನೀಯ. ಕೆಂಪೇಗೌಡ ಜಯಂತಿಯಲ್ಲಿ ಸ್ವಾಮೀಜಿ ರಾಜಕೀಯ ಹೇಳಿಕೆ ಸರಿಯಲ್ಲ ಎಂದು ವಾದಿಸಿದರು. ರಾಜ್ಯ ಸರ್ಕಾರ ಬಡವರ ಪರ ಉತ್ತಮ ಯೋಗ್ಯ ಕಾರ್ಯ ಮಾಡುತ್ತಿದ್ದು, ಬಿಜೆಪಿ ಸರ್ಕಾರ ಇದನ್ನು ಅಸ್ಥಿರಗೊಳಿಸಲು ಈ ರೀತಿಯ ಗೊಂದಲ ಸೃಷ್ಟಿಸುತ್ತಿದೆ. ಹೀಗಾಗಿ ಇದಕ್ಕೆ ಹೈಕಮಾಂಡ್ ಸೊಪ್ಪು ಹಾಕಬಾರದು. ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಹುದ್ದೆಯಿಂದ ಕೆಳಗೆ ಇಳಿಸಬಾರದು ಎಂದು ಒಕ್ಕೂಟ ಆಗ್ರಹಿಸಿದೆ. ಅಲ್ಲದೇ, ಚಂದ್ರಶೇಖರ ಸ್ವಾಮೀಜಿ ಬಿಜೆಪಿಯ ಪ್ರಭಾವಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾರೆ. ಡಿಕೆ ಸುರೇಶ್ ಪರವಾಗಿ ಚಂದ್ರಶೇಖರ ಸ್ವಾಮೀಜಿ ಕೆಲಸ ಮಾಡಿದ್ದಾರಾ? ಪಕ್ಷ ರಾಜಕಾರಣದಲ್ಲಿ ಸ್ವಾಮೀಜಿಗಳು ತೊಡಗಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.