ಮುಂಬೈ : ವಿರಾಟ್ ಕೊಹ್ಲಿಗೆ ನಾಯಕತ್ವದ ಗುಣಗಳಿಲ್ಲ.. ಅವರನ್ನು ಟೀಂ ಇಂಡಿಯಾದ ನಾಯಕನ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಸೀಮಿತ ಓವರ್ ಗಳಿಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡಬೇಕೆಂದು ಅನೇಕರು ಒತ್ತಾಯಿಸಿದ್ದಾರೆ, ಒತ್ತಾಯಿಸುತ್ತಿದ್ದಾರೆ.
ಟೀಂ ಇಂಡಿಯಾ ಬಾಹುಬಲಿ ಒನ್ ಅಂಡ್ ಓನ್ಲಿ ಮಹೇಂದ್ರ ಸಿಂಗ್ ಧೋನಿ 2016ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ನಾಯಕತ್ವ ವಹಿಸಿಕೊಂಡ ನಂತರ ಅವರ ಸ್ಥಾನವನ್ನು ಅಲಂಕರಿಸಿದ ವಿರಾಟ್ ಪ್ರಸ್ತುತ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಅತ್ಯುತ್ತಮ ನಾಯಕರಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಆದರೂ ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೇಳಿ ಬರುತ್ತಲೇ ಇವೆ.
ಈ ವಿಚಾರವಾಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್, ಭಾರತ ತಂಡಕ್ಕೆ ನಾಯಕತ್ವ ಪ್ರತ್ಯೇಕತೆಯ ಅಗತ್ಯವಿಲ್ಲ, ವಿರಾಟ್ ಕೊಹ್ಲಿ ಎಲ್ಲ ಮಾದರಿಯಲ್ಲೂ ಅತ್ಯುತ್ತಮ ನಾಯಕತ್ವ ಪ್ರದರ್ಶನ ತೋರುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಂಜ್ರೇಕರ್, ಭಾರತ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ, ಎಲ್ಲ ಮಾದರಿಯಲ್ಲೂ ಉತ್ತಮವಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಿಭಜನೆಯ ಅಗತ್ಯವಿಲ್ಲ. ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ಮತ್ತು ಕೊಹ್ಲಿಯಂತಹ ನಾಯಕತ್ವವನ್ನು ಪಡೆಯಲು ಭಾರತ ಅದೃಷ್ಠ ಮಾಡಿದೆ. ಇಬ್ಬರು ಎಲ್ಲ ಮಾದರಿಯಲ್ಲಿ ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಧೋನಿ ದಾರಿಯಲ್ಲೇ ನಡೆಯುತ್ತಿರುವ ಕೊಹ್ಲಿ ನಾಯಕತ್ವದ ಪ್ರತ್ಯೇಕತೆ ಅಗತ್ಯವಿಲ್ಲ ಎಂದಿದ್ದಾರೆ.
ಒAದು ವೇಳೆ ಭವಿಷ್ಯದಲ್ಲಿ ನಾಯಕತ್ವ ವಿಭಜನೆ ಮಾಡಬಹುದು. ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮ ನಾಯಕ ಮತ್ತು ಉತ್ತಮ ಟೆಸ್ಟ್ ಆಟಗಾರನನ್ನು ಹೊಂದಿದ್ದು, ಆದರೆ, ಆತ 50 ಓವರ್ ಗಳ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡದಂತ ಸಮಯದಲ್ಲಿ ಬೇಕಾದರೆ ನಾಯಕತ್ವ ವಿಭಜನೆಯ ಬಗ್ಗೆ ಆಲೋಚಿಸಬಹುದು ಎಂದು ಮಂಜ್ರೇಕರ್ ತಿಳಿಸಿದ್ದಾರೆ.








