ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಆಸ್ತಿ – ಮಹಮ್ಮದ್ ಕೈಫ್
ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಆಸ್ತಿ. ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ಗಿಂತ ಉತ್ತಮ ಆಟಗಾರ ಸಿಗಲ್ಲ. ಆತ ಜಾಸ್ತಿ ಮಾತನಾಡಲ್ಲ. ಆದ್ರೆ ತನ್ನ ಜವಾಬ್ದಾರಿ ಏನು ಎಂಬುದು ಅವನಿಗೆ ತಿಳಿದಿದೆ. ಪರಿಸ್ಥಿತಿಯನ್ನು ಅರಿತುಕೊಂಡು ಆಡುವಂತಹ ಕಲೆ ಆತನಲ್ಲಿದೆ ಎಂದು ಮಹಮ್ಮದ್ ಕೈಫ್ ಹೇಳಿದ್ದಾರೆ.
ಮಹಮ್ಮದ್ ಕೈಫ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಸಾಮಥ್ರ್ಯ, ಪ್ರತಿಭೆ ಮತ್ತು ಅಯ್ಯರ್ ಬ್ಯಾಟಿಂಗ್ ವೈಖರಿ, ನಾಯಕತ್ವದ ಗುಣಗಳ ಬಗ್ಗೆ ಮಹಮ್ಮದ್ ಕೈಫ್ ತನ್ನ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.
ನಾನು ಶ್ರೇಯಸ್ ಅಯ್ಯರ್ ಅವರ ಅಭಿಮಾನಿ. ಅಯ್ಯರ್ ದೇಸಿ ಕ್ರಿಕೆಟ್ನಲ್ಲಿ ಸಾಕಷ್ಟು ರನ್ ಗಳಿಸಿದ್ದ ಆಟಗಾರ. ದೇಸಿ ಕ್ರಿಕೆಟ್ ನಲ್ಲಿ ಹಲವು ವರ್ಷಗಳ ಕಾಲ ಆಡಿದ್ದಾರೆ. ಆದ್ರೆ ಟೀಮ್ ಇಂಡಿಯಾದಲ್ಲಿ ಅವರಿಗೆ ಬೇಗನೇ ಅವಕಾಶ ಸಿಗಲಿಲ್ಲ. ಐಪಿಎಲ್ನಲ್ಲೂ ಹಲವು ವರ್ಷಗಳ ಕಾಲ ಆಡಿದ್ದಾರೆ. ಅಲ್ಲೂ ಕೂಡ ರನ್ ದಾಖಲಿಸಿದ್ದಾರೆ. ಆ ಬಳಿಕವೇ ಆತನ ಹೆಸರು ಚಾಲ್ತಿಗೆ ಬಂದಿರೋದು. ಆತ ಸರಿಯಾದ ಸಮಯದಲ್ಲೇ ಬಂದಿದ್ದಾನೆ. ಆತನಲ್ಲಿ ರನ್ ಗಳಿಸುವ ಹಸಿವು ಇತ್ತು. ಅದು ಅಲ್ಲದೆ ಟೀಮ್ ಇಂಡಿಯಾ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಟಗಾರರನ್ನು ಹುಡುಕುತ್ತಿತ್ತು. ಅಂಬಟಿ ರಾಯುಡು, ಕೆ.ಎಲ್. ರಾಹುಲ್, ವಿಜಯ್ ಶಂಕರ್, ರಿಷಬ್ ಪಂತ್ ಹೀಗೆ ಅನೇಕ ಆಟಗಾರರು ಬಂದು ಹೋದ್ರು. ಆದ್ರೆ ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ್ರು. ಇದೀಗ ಸ್ಥಿರ ಪ್ರದರ್ಶನದ ಮೂಲಕ ನಾಲ್ಕನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ ಎಂದು ಮಹಮ್ಮದ್ ಕೈಫ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಮಾನಸಿಕವಾಗಿ ಗಟ್ಟಿಯಾಗಿದ್ದಾನೆ. ಪಂದ್ಯವನ್ನು ಅರಿತುಕೊಳ್ಳುತ್ತಾನೆ ಮತ್ತು ತನ್ನ ಜವಾಬ್ದಾರಿಯ ಬಗ್ಗೆಯೂ ತಿಳಿದುಕೊಳ್ಳುತ್ತಾನೆ. ಆತ ಬೇಗ ಸಿಟ್ಟು ಮಾಡಿಕೊಳ್ಳುವುದಿಲ್ಲ. ಮಾತನಾಡುವುದಕ್ಕಿಂತ ಮುಂಚೆಯೇ ಸಾಕಷ್ಟು ಯೋಚನೆ ಮಾಡುತ್ತಾನೆ. ಆತ ನಾಯಕನಾದ ನಂತರ ತನ್ನ ಆಟದಲ್ಲೂ ಸಾಕಷ್ಟು ಸುಧಾರಣೆ ಮಾಡಿಕೊಂಡಿದ್ದಾನೆ. ಟೀಮ್ ಇಂಡಿಯಾಗೆ ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್ಗಿಂತ ಉತ್ತಮ ಆಟಗಾರ ಸಿಗಲ್ಲ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಅವರು 2018ರ ಐಪಿಎಲ್ ಟೂರ್ನಿಯ ಮಧ್ಯದಲ್ಲಿ ನಾಯಕತ್ವ ವಹಿಸಿಕೊಂಡ್ರು. ಗಂಭೀರ್ ನಾಯಕತ್ವದಿಂದ ಕೆಳಗಿಳಿದ ನಂತರ ಅಯ್ಯರ್ಗೆ ನಾಯಕತ್ವ ಒಲಿದುಬಂತು. ಹಾಗೇ ಡೆಲ್ಲಿ ತಂಡ ಮೂರನೇ ಸ್ಥಾನ ಪಡೆದುಕೊಂಡಿತ್ತು. 14 ಪಂದ್ಯಗಳಲ್ಲಿ 18 ಅಂಕಗಳನ್ನು ಪಡೆದುಕೊಂಡಿತ್ತು. ಹಾಗೇ ಶ್ರೇಯಸ್ ಅಯ್ಯರ್ ಅವರು 463 ರನ್ ಕೂಡ ದಾಖಲಿಸಿದ್ದಾರೆ. ಇದ್ರಲ್ಲಿ ಮೂರು ಅರ್ಧಶತಕಗಳಿವೆ.
ನೀವು ನಂಬತ್ತಿರೋ ಇಲ್ಲವೋ.. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಂತ ನಮಗೆ ಅನ್ನಿಸುತ್ತಿರಲಿಲ್ಲ. ನಾವು ಸಾಕಷ್ಟು ಟೀಮ್ ಮೀಟಿಂಗ್ಗಳನ್ನು ಮಾಡಿದ್ದೇವೆ. ಆದ್ರೆ ನಾಯಕ ಶ್ರೇಯಸ್ ಅಯ್ಯರ್ ಇರುತ್ತಿರಲಿಲ್ಲ. ಯಾಕಂದ್ರೆ ಆತ ಹೆಚ್ಚು ಮಾತನಾಡುವುದನ್ನು ಇಷ್ಟಪಡುತ್ತಿರಲಿಲ್ಲ. ಆತನಿಗೆ ಪಂದ್ಯದ ಬಗ್ಗೆ ಗೊತ್ತಿತ್ತು. ಆತ ಕೆಲವೊಂದು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದ. ಆದ್ರೆ ಆ ಬಗ್ಗೆ ಆಳವಾಗಿ ಆತ ಯೋಚನೆ ಮಾಡುತ್ತಿರಲಿಲ್ಲ. ನಾವು ಆತನಿಗೆ ಏನು ಬೇಕೋ ಅದರ ಬಗ್ಗೆ ಮಾಹಿತಿ ನೀಡ್ತಾ ಇದ್ದೇವು. ಆಟದ ಕಡೆಗೆ ಆತ ಗಮನಹರಿಸುತ್ತಿದ್ದ. ಆತ ಆರಾಮವಾಗಿ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ಎಂದು ಮಹಮ್ಮದ್ ಕೈಫ್ ಹೇಳಿದ್ದಾರೆ.