ಓಶೋಮಾರ್ಗ: ಲೈಂಗಿಕ ಬಯಕೆ ಎನ್ನುವ ಭ್ರಮೆಯನ್ನು ಮೀರದ ಹೊರತು ಪರಿಶುದ್ಧ ಬುದ್ಧತ್ವ ಸಿದ್ಧಿಸುವುದಿಲ್ಲ:
ಕೃಪೆ – ಹಿಂದವಿ ಸ್ವರಾಜ್
ಅತಿಯಾದ ಲೈಂಗಿಕತೆಯ ವಾಂಛೆ ಮನುಷ್ಯನನ್ನು ಮೂರ್ಖನನ್ನಾಗಿಸುತ್ತದೆ. ಸಂಭೋಗದ ಸಮಯದಲ್ಲಿ ಗಂಡು ತಾನೊಬ್ಬ ಯಜಮಾನ ಎಂದು ಭಾವಿಸಿರುತ್ತಾನೆ; ಆದರೆ ವಾಸ್ತವದಲ್ಲಿ ಅವನು ಗುಲಾಮನಾಗಿರುತ್ತಾನೆ ಅನ್ನುವುದು ಅವನಿಗೆ ಅರಿವಿರುವುದಿಲ್ಲ. ತಾನು ಬಿದ್ದಿರುವ ಕೂಪವನ್ನೇ ಆತ ಮಹಾಸಮುದ್ರವೆಂದು ಭಾವಿಸಿರುತ್ತಾನೆ, ಅವನನ್ನು ಈ ಗಟಾರದಿಂದ ಮೊದಲು ಹೊರತೆಗೆಯಬೇಕು. ಅವನ ಗುಲಾಮಗಿರಿಯ ಮನಸ್ಥಿತಿಯಿಂದ ಹೊರತರಬೇಕು. ಮೈಥುನದ ಸುಖ ಲೋಲುಪ್ತನಾಗಿರುವ ಮನುಷ್ಯನಿಗೆ ತನ್ನ ಆಂತರಿಕ ಶಕ್ತಿ ಮತ್ತು ಬಾಹ್ಯ ಕರ್ತವ್ಯ ಎರಡೂ ಮರೆತುಹೋಗಿರುತ್ತದೆ. ಅವನ ಮನಸ್ಥಿತಿಯನ್ನು ಬದಲಾಯಿಸುವುದು ಸುಲಭವಲ್ಲ. ಅವನಲ್ಲಿ ಆಧ್ಯಾತ್ಮ ಸಾಧನೆ ಸುಲಭವಲ್ಲ; ಅದರಲ್ಲೂ ದೈಹಿಕ ಸುಖಕ್ಕೆ ಹಾತೊರೆಯುವ ಮನುಷ್ಯನನ್ನು ಸಾಧನೆಯೆಡೆಗೆ ಪ್ರೇರೇಪಿಸುವುದು ಅಸಾಧ್ಯವಾದ ಮಾತು. ಲೈಂಗಿಕತೆಯ ವಾಂಛೆ ಮಾದಕ ವ್ಯಸನವಿದ್ದಂತೆ. ಹೀಗಾಗಿಯೇ ಪ್ರತಿಯೊಂದು ಧರ್ಮಗಳು ಲೈಂಗಿಕತೆಯನ್ನು ಅತ್ಯಂತ ಬಿಗಿಯಾದ ಮುಷ್ಟಿಯಲ್ಲಿ ಬಂಧಿಸಿರುವುದು. ಹೀಗಾದಾಗಲೂ ಮನುಷ್ಯನ ಮನಸು ಪರಿವರ್ತನೆಯಾಗುತ್ತದೆ ಅನ್ನುವುದನ್ನು ಒಪ್ಪಲಾಗುವುದಿಲ್ಲ. ಮುಕ್ತ ಮೈಥುನ, ಸಂಭೋಗದಿಂದ ಸಮಾಧಿ ಸ್ಥಿತಿ ಮತ್ತು ತನ್ಮೂಲಕ ಮನಪರಿವರ್ತನೆ ಏಕ ಮಾತ್ರ ಮಾರ್ಗ ಎಂದು ಓಶೋ ಸಮರ್ಥಿಸುತ್ತಿದ್ದರು.
ಪ್ರಕೃತಿಯ ಜೀವಶಾಸ್ತ್ರ ಮನುಷ್ಯ ಎಂದಾದರೆ ಅದರ ಭೌತಶಾಸ್ತ್ರವೇ ಪ್ರೇಮ ಮತ್ತು ಕಾಮ, ಅದರ ರಸಾಯನಶಾಸ್ತ್ರವೇ ಭ್ರಮೆ. ಸುಖದ ಭ್ರಮೆ ಒಂದು ಸಮ್ಮೋಹನವಿದ್ದಂತೆ. ಸುಖ ಪ್ರಾಪ್ತಿಯಾದರೂ ಆ ಭ್ರಮೆ ಕಳೆಯುವುದಿಲ್ಲ. ಮೈಥುನದ ಭ್ರಮೆಯೂ ಅಂತದ್ದೇ ಅದರಿಂದ ಹೊರಬರುವುದು ಸುಲಭಸಾಧ್ಯವಲ್ಲ. ಪ್ರೀತಿ ಮತ್ತು ಸಂಭೋಗದ ಸುಖ ಅನ್ನುವ ಭ್ರಮೆಗಳಿಂದ ಬಿಡುಗಡೆ ಸಲೀಸಲ್ಲ. ಪ್ರೇಮಿಯೊಬ್ಬ ಮತ್ತು ವಿಟನೊಬ್ಬನನ್ನು ವಾಸ್ತವಕ್ಕೆ ಕರೆತರುವುದು ಕಷ್ಟ. ಹಾಗಾಗಿ ಅವನನ್ನು ಕರ್ಮಟತನಗಳಿಂದ, ಮಡಿವಂತಿಕೆಗಳಿಂದ, ನಿರ್ಬಂಧಗಳಿಂದ ಬಿಗಿಯಾಗಿಸುವುದಕ್ಕಿಂತ ಅವನದ್ದೇ ದಾರಿಯಲ್ಲಿ ಸಾಗಿ ಅವನ ಮೌಢ್ಯವನ್ನು ಅರ್ಥ ಮಾಡಿಸಬೇಕಿರುವುದು ಸರಿಯಾದ ಮಾರ್ಗ ಎನ್ನುವುದು ಓಶೋರ ವಾದವಾಗಿತ್ತು.
ಮನುಷ್ಯನ ದೇಹವು ವಿಚಿತ್ರ ಬಯಕೆಗಳಿಂದ ನರಳುತ್ತದೆ. ಅದಕ್ಕೆ ಸುಖದ ಉಚ್ಛ್ರಾಯ ಸ್ಥಿತಿ ಬೇಕು. ಆ ಸ್ಥಿತಿಯಲ್ಲಿ ತೇಲಬೇಕು, ಅಮಲಿನಲ್ಲಿ ಮುಳಗಬೇಕು, ನಶೆಯಲ್ಲಿ ಕರಗಬೇಕು. ಮೈಥುನದ ಕಟ್ಟಕಡೆಯ ಸ್ಥಿತಿ ಪರಾಕಾಷ್ಠತೆಯನ್ನು ಅನುಭವಿಸಿದ ನಂತರ ದೇಹ ತಣಿಯುತ್ತದೆ, ಮನಸು ತೃಪ್ತವಾಗುತ್ತದೆ, ಹಂಬಲ ಇಳಿಯುತ್ತದೆ, ಆದರೆ ಭ್ರಮೆ ಮಾತ್ರ ಮತ್ತೊಂದು ಸುಖದ ನಿರೀಕ್ಷೆಯಲ್ಲಿರುತ್ತದೆ. ಇದೇ ಲೈಂಗಿಕತೆಯ ವ್ಯಸನ. ಇದೊಂದು ಗೀಳು ಮುಗಿಯುವಂತದ್ದಲ್ಲ. ಪ್ರವಚನ, ಫಿಲಾಸಫಿ, ಭಾಷಣ ಕೊರೆಯುವುದರಿಂದ ವಾಸ್ತವವನ್ನು ಅರ್ಥಮಾಡಿಸಲು ಸಾಧ್ಯವಿಲ್ಲ. ದುರದೃಷ್ಟವಶಾತ್ ಯಾವ ವೈದ್ಯಶಾಸ್ತ್ರದಲ್ಲೂ ಈ ಗೀಳಿಗೆ ಔಷಧವಿಲ್ಲ. ಅದಕ್ಕಿರುವ ಏಕೈಕ ಚಿಕಿತ್ಸೆಯೆಂದರೇ ಬಯಕೆಯನ್ನು ಪೂರೈಸುವ ಸ್ಥಿತಿಯಲ್ಲಿಯೇ ವಾಸ್ತವದ ಸತ್ಯವನ್ನು ಅರ್ಥಮಾಡಿಸಬೇಕು. ಇದಕ್ಕಾಗಿಯೇ ನಾನು ಸಂಭೋಗದಿಂದ ಸಮಾಧಿ ಸ್ಥಿತಿ ಎಂದು ಸಮರ್ಥಿಸುವುದು ಎನ್ನುತ್ತಿದ್ದರು ಓಶೋ.
ಆಸೆ ದುಃಖಕ್ಕೆ ಮೂಲ ಕಾರಣ ಎಂದು ಹೇಳಿದ ಬುದ್ಧ, ಹಾಗೆ ಬುದ್ಧ ಹೇಳಿದ್ದು ಈಡೇರಬಹುದಾದ ಬಯಕೆಯ ಸ್ವಭಾವದ ಕುರಿತಾಗಿ ಅಲ್ಲ. ಬಯಕೆಯಿಲ್ಲದಿರುವಿಕೆಯಿಂದ ಮಾತ್ರ ಈಡೇರಿಕೆಯಾಗುತ್ತದೆ. ಇದೊಂದು ಪ್ರಮುಖ ವಿರೋಧಾಭಾಸ; ನೀವು ಅಪೇಕ್ಷೆಯನ್ನು ಕೈಬಿಟ್ಟರೆ, ನೀವು ಪೂರ್ಣಗೊಳ್ಳುತ್ತೀರಿ. ನೀವು ಹೆಚ್ಚು ಆಸೆಪಡುತ್ತೀರಿ ಅಂದರೇ ನೀವು ಹೆಚ್ಚು ಆಸೆಗೆ ಸಿಲುಕುತ್ತಿದ್ದೀರಿ ಎಂದೇ ಅರ್ಥ. ಹಾಗಾದಾಗ ನಿಮ್ಮ ಈಡೇರಿಕೆಯ ಸಾಧ್ಯತೆಯಿಂದ ನೀವು ದೂರ ಹೋಗುತ್ತೀರಿ ಎಂದರ್ಥ. ಒಂದು ಆಸೆ ಅನೇಕ ಇತರೆ ಆಸೆಗಳನ್ನು ಸೃಷ್ಟಿಸುತ್ತದೆ. ನಂತರ ಇನ್ನೂ ಅನೇಕ ಆಸೆಗಳು. ಮನುಷ್ಯನ ಆಸೆಗಳ ಮಿತಿ ಅಮಿತ. ಒಂದು ಮೂಲ ಆಸೆ ಮರವಿದ್ದಂತೆ ಎಂದು ಕಲ್ಪಿಸಿಕೊಂಡರೆ, ರೆಂಬೆ, ಕೊಂಬೆ, ಹಿರಿ-ಕಿರಿಯ ಶಾಖೆಗಳು, ಎಲೆಗಳು, ಬಳ್ಳಿಗಳು, ಹೀಗೆ ಆ ಮಹಾವೃಕ್ಷದ ಪ್ರತೀ ಅಂಗವೂ ಒಂದೊಂದು ಉಪಆಸೆಗಳಿದ್ದಂತೆ. ಹೀಗೆ ಆಸೆಗಳನ್ನು ಪೂರೈಸುವ ಕ್ರಿಯೆಯಲ್ಲಿ ನಿಮಗೆ ತಿಳಿಯದ ಹಾಗೆ ಸಿಕ್ಕಿಬೀಳುತ್ತೀರಿ. ಅದರಿಂದ ಹೊರಬರಲು ಸಾಧ್ಯವಿಲ್ಲದಷ್ಟು ಆಳವಾಗಿ ಸಿಲುಕಿಕೊಳ್ಳುತ್ತೀರಿ.
ಇಲ್ಲಿ ಅಸಲಿ ಸಮಸ್ಯೆಯೆಂದರೆ ನಿಮ್ಮ ಆಸೆಯನ್ನು ಪೂರೈಸಲು ನೀವು ಪ್ರಯತ್ನಿಸದಿದ್ದರೆ, ನೀವು ಈಡೇರದೆ ಉಳಿಯುತ್ತೀರಿ. ನೀವು ಪ್ರಯತ್ನಿಸಿದರೆ, ನಿಮ್ಮ ಆಸೆಯ ಗುರಿಯನ್ನು ನೀವು ಪಡೆದರೂ ಸಹ, ನೀವು ಪೂರ್ಣ ಈಡೇರದೆ ಉಳಿಯುತ್ತೀರಿ-ಆಗಲೂ ಏನೂ ಬದಲಾಗುವುದಿಲ್ಲ. ಇದೇ ಆಸೆಗಳುಳ್ಳ ಜೀವನದ ಕಹಿ ಸತ್ಯ. ಸಂಭೋಗ ಸಹ ಅಂತದ್ದೇ ಒಂದು ಪರಿಪೂರ್ಣವಾಗದ ಆಸೆ. ನೀವು ಯಾವುದನ್ನಾದರೂ ಸಂಪೂರ್ಣವಾಗಿ ಸ್ವೀಕರಿಸಿದ ಕ್ಷಣ, ಆ ಸ್ವೀಕಾರ ಕ್ರಾಂತಿಯೆನಿಸುತ್ತದೆ, ಆಗದು ಆಮೂಲಾಗ್ರ ಬದಲಾವಣೆಯನ್ನು ತರುತ್ತದೆ. ಇದು ನಿಮ್ಮ ಶಕ್ತಿ-ಅದನ್ನು ಸ್ವೀಕರಿಸಿ. ಇದು ನಿಮ್ಮನ್ನು ಬಲಶಾಲಿಯನ್ನಾಗಿಸುತ್ತದೆ. ಅದನ್ನು ತಿರಸ್ಕರಿಸಿ, ಅದೇ ನಿಮ್ಮನ್ನು ದುರ್ಬಲಗೊಳಿಸುತ್ತದೆ. ನಿಮ್ಮ ಲೈಂಗಿಕತೆಯ ಇಚ್ಛೆ ಅಥವಾ ಭ್ರಮೆಯೊಂದಿಗೆ ಹೋರಾಡಲು ನಿಮಗೆ ಹೆಚ್ಚಿನ ಸಮಯ ಮತ್ತು ಶಕ್ತಿ ಬೇಕು.
ದೇಹವು ಗಟ್ಟಿಯಾದಾಗ ದೇವರನ್ನು ಕಾಣಬೇಕು ಅನ್ನುವ ಹಂಬಲ ಇರುವುದಿಲ್ಲ; ದೇಹ ಗಳಿತಾಗಲೇ ಪರಮಾರ್ಥಿಕ ಆಸೆಗಳು ಹುಟ್ಟುವುದು. ಆ ನಿಟ್ಟಿನಲ್ಲಿ ವೃದ್ಧಾಪ್ಯ ನಿಮ್ಮ ಕೊನೆಯ ಅವಕಾಶ: ಸಾವು ಬರುವ ಮೊದಲು ಹೆಚ್ಚು ಧ್ಯಾನಸ್ಥರಾಗುವ ಮೂಲಕ ಕೆಲವು ಸುಪ್ತ ಬಯಕೆಗಳನ್ನು ಈಡೇರಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಾರೆ. ಅದರ ಬದಲು ದೇಹ ಮತ್ತು ಮನಸುಗಳು ಗಟ್ಟಿಯಾಗಿದ್ದಾಗಲೇ ಧ್ಯಾನದ ಆಸಕ್ತಿ ಬೆಳೆಸಿಕೊಳ್ಳಿ, ಸಾಧನೆಯ ಮಾರ್ಗವನ್ನು ನೀವು ಖಂಡಿತಾ ಕಂಡುಕೊಳ್ಳುತ್ತೀರಿ. ಅರಿವಿನ ಕಣ್ಣು ತೆರೆಯಲು, ಹೆಚ್ಚು ಜಾಗೃತಾವಸ್ಥೆ ತಲುಪಲು ಧ್ಯಾನವೊಂದೇ ಮಾರ್ಗ. ಇದಕ್ಕಿರುವ ತೊಡಕು ಭೋಗಾಕಾಂಕ್ಷೆ. ಅದು ಲೈಂಗಿಕಥೆಯ ಸ್ವರೂಪದಲ್ಲಿರಬಹುದು ಅಥವಾ ಇತರೆ ರೂಪದಲ್ಲಿರುಬಹುದು. ಲೈಂಗಿಕತೆಯ ಅತಿಯಾದ ಆಸಕ್ತಿ ನಿಮ್ಮನ್ನು ಪ್ರಜ್ಞಾಹೀನರನ್ನಾಗಿ ಮಾಡುತ್ತದೆ. ಎಲ್ಲಾ ಆಸೆಗಳಿಂದ ಮುಕ್ತರಾದಾಗಾ ಮಾತ್ರ ಶುದ್ಧ ಹಂಬಲ ಹುಟ್ಟುತ್ತದೆ. ಆ ಪರಿಶುದ್ಧ ಹಂಬಲವೇ ಪರಮಾತ್ಮ, ಆ ಶುದ್ಧ ಹಂಬಲವೇ ದೇವರು. ನಂತರ ಯಾವುದೇ ವಸ್ತುವಿಲ್ಲದೆ, ಯಾವುದೇ ವಿಳಾಸವಿಲ್ಲದೆ, ಯಾವುದೇ ನಿರ್ದೇಶನವಿಲ್ಲದೆ, ಯಾವುದೇ ಗಮ್ಯಸ್ಥಾನವಿಲ್ಲದೆ ಶುದ್ಧ ಸೃಜನಶೀಲತೆ ಇರುತ್ತದೆ – ಕೇವಲ ಶುದ್ಧ ಶಕ್ತಿ, ಅದೇ ಬುದ್ಧತ್ವ.
-ವಿಶ್ವಾಸ್ ಭಾರದ್ವಾಜ್








