ದುಬೈ: ಐಪಿಎಲ್ ಟಿ-20ಂ ಎರಡನೇ ದಿನವಾದ ಇಂದು ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಪಂಜಾಬ್ ಹಾಗೂ ಯುವ ಆಟಗಾರ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ.
ಕೆಲವೇ ಕ್ಷಣಗಳಲ್ಲಿ ಉಭಯ ತಂಡಗಳ ನಡುವೆ ಹಣಾಹಣಿ ಆರಂಭವಾಗಲಿದ್ದು, ಎರಡೂ ತಂಡಗಳ ಯುವ ನಾಯಕರಿಗೆ ಇಂದಿನ ಪಂದ್ಯ ಸವಾಲಾಗಿ ಪರಿಣಮಿಸಿದೆ. ಬ್ಯಾಟಿಂಗ್ ಹಾಗೂ ನಾಯಕತ್ವ ವಿಚಾರದಲ್ಲಿ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ ನಡೆಯುವ ಬಿಗ್ಫೈಟ್ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರಮುಖ ಪಾತ್ರವಹಿಸಲಿದೆ.

ಜೊತೆಗೆ ಈ ಎರಡೂ ತಂಡಗಳಲ್ಲಿ ಯುವ ಆಟಗಾರರು ಹಾಗೂ ಯುವ ನಾಯಕರೇ ಇರುವುದು ವಿಶೇಷವಾಗಿದೆ. ಅಲ್ಲದೆ ಉಭಯ ತಂಡಗಳಲ್ಲಿ ವಿದೇಶಿ ಆಟಗಾರರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಇಂದು ರನ್ಗಳ ಹೊಳೆಯೇ ಹರಿಯಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳಲ್ಲಿದೆ.
ಇನ್ನೊಂದು ವಿಶೇಷವೆಂದರೆ ಎರಡೂ ತಂಡಗಳ ಕೋಚ್ಗಳಿಗೂ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪಂಜಾಬ್ ತಂಡವನ್ನು ಅನಿಲ್ ಕುಂಬ್ಳೆ ಮುನ್ನಡೆಸುತ್ತಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೋಚಿಂಗ್ ಸಾರಥ್ಯ ವಹಿಸಿದ್ದಾರೆ. ಇಬ್ಬರು ದಿಗ್ಗಜ ಮಾಜಿ ಆಟಗಾರರ ಕೋಚಿಂಗ್ ಪಡೆದ ಯುವ ಆಟಗಾರರು ಇಂದು ರನ್ ಹೊಳೆ ಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸ್ಫೋಟಕ ಬ್ಯಾಟ್ಸ್ಮನ್ ವೆಸ್ಟ್ ಇಂಡೀಸ್ನ ಕ್ರಿಸ್ಗೇಲ್, ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್, ಬೌಲರ್ ಮಹಮ್ಮದ್ ಶಮಿಯೊಂದಿಗೆ ಕೆ.ಎಲ್ ರಾಹುಲ್ ಜಯದ ಅಭಿಯಾನ ಆರಂಭಿಸಲು ತುದಿಗಾಲ ಮೇಲೆ ನಿಂತಿದ್ದರೆ, ಡೆಲ್ಲಿ ತಂಡದಲ್ಲಿ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್, ಭರವಸೆಯ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ, ಮುಂಬೈ ಹುಡುಗ ಪೃಥ್ವಿ ಶಾ ಹಾಗೂ ದಲ್ಲಿಯ ರಿಷಬ್ ಪಂತ್ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಕಾದು ಕುಳಿತಿದ್ದಾರೆ. ಹೀಗಾಗಿ ಎರಡೂ ತಂಡಗಳಿಗೆ ಇಂದಿನ ಅರಂಭಿಕ ಪಂದ್ಯ ಸವಾಲಾಗಿ ಪರಿಣಮಿಸಿದೆ.








