ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸುವುದರ ಮೂಲಕ ಭಾರತ ತಂಡವು ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಕಪ್ ಗೆಲ್ಲುವುದರ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದರ ಬೆನ್ನಲ್ಲಿಯೇ ಆಲ್ ರೌಂಡರ್ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳಿಂದ ಜಯ ಸಾಧಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದೆ. ಈಗ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಈ ಟೂರ್ನಿಯಲ್ಲಿ ಜಡೇಜಾ ಅಷ್ಟಾಗಿ ಮಿಂಚಲಿಲ್ಲ. ಆದರೂ ಹಿಂದಿನ ಆವೃತ್ತಿಯಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಪರ ಅಮೋಘ ಆಟವಾಡಿದ್ದರು. ಸಾರ್ವಕಾಲಿಕ ಅತ್ಯುತ್ತಮ ಆಲ್ರೌಂಡರ್ ಗಳಲ್ಲಿ ಜಡೇಜಾ ಕೂಡ ಒಬ್ಬರು.
ಸಂಭ್ರಮದ ಕ್ಷಣದಲ್ಲಿ ತೇಲಾಡುತ್ತಿರುವ ಸಮಯದಲ್ಲೇ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ 35 ರ ಹರೆಯದ ಜಡೇಜಾ ” ಧನ್ಯವಾದ ತುಂಬಿದ ಹೃದಯದಿಂದ ನಾನು T20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ ಎಂದು ಬರೆದುಕೊಂಡು ಅಭಿಮಾನಿಗಳಿಗೆ ಶಾಕ್ ಮೂಡಿಸಿದ್ದಾರೆ.
ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು. ಇದು ನನ್ನ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನದ ಶಿಖರವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಜಡೇಜಾ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಗಿದೆ.