ನಟ ದರ್ಶನ್ ಗೆ ಜೈಲಿನ ಊಟವೇ ಗತಿ ಎನ್ನುವಂತಾಗಿದೆ. ಎಷ್ಟು ಐಷಾರಾಮಿ ಬದುಕು ಇದ್ದರೇನು? ತಪ್ಪು ಮಾಡಿದರೆ ಜೈಲೂಟವೇ ಗತಿ ಎನ್ನುವಂತಹ ಸ್ಥಿತಿ ದರ್ಶನ್ ಗೆ ಬಂದೋದಗಿದೆ.
ಮನೆ ಊಟ, ಹಾಸಿಗೆ, ಬಟ್ಟೆ ಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಮನೆ ಊಟ ಇಲ್ಲ ಎಂದು 24ನೇ ಎಸಿಎಂಎಂ ಕೋರ್ಟ್ ಇಂದು (ಜು.25) ಆದೇಶ ನೀಡಿದೆ. ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ ಎಂದು ಕಾರಣ ನೀಡಿ ದರ್ಶನ್ ಅವರು ಮನೆಯ ಊಟ ತರಿಸಲು ಅನುಮತಿ ಕೇಳಿದ್ದರು. ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ಹೀಗಾಗಿ ದರ್ಶನ್ ಗೆ ಇನ್ನೂ ಹಲವು ದಿನ ಜೈಲೂಟವೇ ಗತಿ ಎನ್ನುವಂತಾಗಿದೆ.
ಜೈಲೂಟದಿಂದ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಆದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲವೆಂದು ಆಕ್ಷೇಪಣೆ ಸಲ್ಲಿಸಲಾಗಿತ್ತು. ವಾದ-ವಿವಾದ ಆಲಿಸಿದ ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಆದೇಶ ಪ್ರಕಟಿಸಿದ್ದಾರೆ.
ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಹೀಗಾಗಿ ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಈ ಸೌಲಭ್ಯ ನೀಡಲಾಗುವುದಿಲ್ಲ.