ಬೆಂಗಳೂರು: ರಾಜ್ಯ ರಾಜಕೀಯದ ಭೀಷ್ಮ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಪಕ್ಷ ಸಂಘಟನೆಗೆ ರಣಕಹಳೆ ಊದಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಿಂದ ರಾಜಕಾರಣದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಲ್ಲದೆ, ಬಿಜೆಪಿಯೊಂದಿಗಿನ ಮೈತ್ರಿ ವಿಚಾರದಲ್ಲಿ ಮಹತ್ವದ ಸ್ಪಷ್ಟನೆಯನ್ನು ನೀಡಿದ್ದಾರೆ.
ಅಹಿಂದ ನಾಯಕತ್ವದ ವಿರುದ್ಧ ದೊಡ್ಡಗೌಡರ ಚಾಟಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಅಹಿಂದ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬೆನ್ನಲ್ಲೇ, ಜೆಡಿಎಸ್ ವರಿಷ್ಠರು ಸಿದ್ದರಾಮಯ್ಯನವರ ರಾಜಕೀಯ ನಡೆಗಳ ವಿರುದ್ಧ ಹರಿಹಾಯ್ದಿದ್ದಾರೆ. ಅಹಿಂದದ ವ್ಯಾಖ್ಯಾನ ಮಾಡುವುದು ಕಷ್ಟ ಎಂದು ವ್ಯಂಗ್ಯವಾಡಿರುವ ಗೌಡರು, ಈ ರಾಜ್ಯದಲ್ಲಿ ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ನಿಜವಾದ ಮೀಸಲಾತಿ ತಂದುಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.
ನಗರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಮುಸ್ಲಿಂ ಮೀಸಲಾತಿಯನ್ನು ಇಡೀ ದೇಶದಲ್ಲೇ ಜಾರಿಗೆ ತಂದ ಕೀರ್ತಿ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ ಇತಿಹಾಸ ಹಾಗೂ ನಾಯಕ ಸಮುದಾಯಕ್ಕೆ ರಿಸರ್ವೇಷನ್ ನೀಡಿದ ಶ್ರೇಯಸ್ಸು ಜೆಡಿಎಸ್ ಮತ್ತು ಜನತಾದಳದ ಆಡಳಿತಕ್ಕೆ ಸಲ್ಲುತ್ತದೆ. ಅಂದು ಜೆ.ಹೆಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಆದರೆ ಇಂದು ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ವಿಪರ್ಯಾಸ ಎಂದು ಗೌಡರು ಟೀಕಿಸಿದ್ದಾರೆ.
ಕ್ಷೇತ್ರ ಹುಡುಕಾಟದ ಬಗ್ಗೆ ವ್ಯಂಗ್ಯವಾಡಿದ ಜೆಡಿಎಸ್ ವರಿಷ್ಠ
ಸಿದ್ದರಾಮಯ್ಯನವರ ಕ್ಷೇತ್ರ ಆಯ್ಕೆಯ ಗೊಂದಲದ ಬಗ್ಗೆ ದೇವೇಗೌಡರು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ನೀವು ನಿಜವಾಗಿಯೂ ಅಹಿಂದ ನಾಯಕರಾಗಿದ್ದರೆ ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಪರ್ಧಿಸಿ ಗೆಲ್ಲುವ ತಾಕತ್ತು ಇರಬೇಕಿತ್ತು. ಬಾದಾಮಿಯಲ್ಲಿ ಸ್ಪರ್ಧಿಸಿದಿರಿ, ನಂತರ ಕೋಲಾರವೋ ಅಥವಾ ಮೈಸೂರೋ ಎಂಬ ಗೊಂದಲದಲ್ಲಿ ಬಿದ್ದಿರಿ. ಅಂತಿಮವಾಗಿ ಸ್ವಂತ ಮಗನ ಕ್ಷೇತ್ರವನ್ನೇ ಖಾಲಿ ಮಾಡಿಸಿ ಅಲ್ಲಿ ನಿಲ್ಲುವ ಪರಿಸ್ಥಿತಿ ಬಂತು. ಇದು ಅಹಿಂದ ನಾಯಕನ ಲಕ್ಷಣವೇ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
ತಾವು ರಾಮನಗರದಂತಹ ಒಕ್ಕಲಿಗ ಬೆಲ್ಟ್ ನಲ್ಲಿ ಕುರುಬ ಸಮುದಾಯದ ನಾಯಕರನ್ನು ಎಂಎಲ್ ಸಿ ಮಾಡಿದ್ದನ್ನು ಸ್ಮರಿಸಿದ ಗೌಡರು, ಸಿದ್ದರಾಮಯ್ಯನವರು ಕೇವಲ ರಾಜಕೀಯ ಲಾಭಕ್ಕಾಗಿ ಅಹಿಂದ ಕಾರ್ಡ್ ಬಳಸುತ್ತಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯರ ಏಳಿಗೆಗೆ ನಾನೇ ಕಾರಣ ಎಂದ ಗೌಡರು
ಸಿದ್ದರಾಮಯ್ಯನವರ ರಾಜಕೀಯ ಬೆಳವಣಿಗೆಗೆ ತಾವು ನೀಡಿದ ಪ್ರೋತ್ಸಾಹವನ್ನು ದೇವೇಗೌಡರು ಇದೇ ವೇಳೆ ಸ್ಮರಿಸಿಕೊಂಡರು. ಸಿದ್ದರಾಮಯ್ಯನವರ ಕಿರಿಯ ಪುತ್ರನ ನಿಧನದ ನಂತರ, ಅವರ ಎರಡನೇ ಪುತ್ರನನ್ನು ರಾಜಕೀಯಕ್ಕೆ ಕರೆತರುವಂತೆ ಸಲಹೆ ನೀಡಿದ್ದೇ ತಾನು ಎಂದು ಹೇಳಿದರು. ಸಿದ್ದರಾಮಯ್ಯ ಎಷ್ಟೇ ಟೀಕೆ ಮಾಡಿದರೂ, ತಾವು ಪಕ್ಷ ಕಟ್ಟುವ ಕಾಯಕವನ್ನು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಕಷ್ಟ: ಮೈತ್ರಿ ಧರ್ಮಕ್ಕೆ ಅಪಸ್ವರ
ಒಂದೆಡೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು, ಇದೇ ವೇಳೆ ಬಿಜೆಪಿಯೊಂದಿಗಿನ ಮೈತ್ರಿ ವಿಚಾರದಲ್ಲಿ ವಾಸ್ತವವನ್ನು ತೆರೆದಿಟ್ಟರು. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳುವುದು ಸಾಧ್ಯ ಮತ್ತು ಅದು ಯಶಸ್ವಿಯಾಗಿದೆ. ಆದರೆ, ಗ್ರಾಮ ಮಟ್ಟದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರ ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಂತ ಕಷ್ಟದ ಕೆಲಸ ಎಂದು ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಕಷ್ಟಸಾಧ್ಯ ಎಂದು ನೇರವಾಗಿ ಹೇಳುವ ಮೂಲಕ, ಮುಂದಿನ ತಾಲೂಕು ಮತ್ತು ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ. ಇದೇ ವೇಳೆ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳ ಪೈಕಿ ಜೆಡಿಎಸ್ ಗೆ ಒಂದು ಸ್ಥಾನ ನೀಡುವ ಬಗ್ಗೆ ಪ್ರಾಥಮಿಕ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.
ದೇವೇಗೌಡರು ತಮ್ಮ ಪತ್ರಿಕಾಗೋಷ್ಠಿಯ ಮೂಲಕ ಏಕಕಾಲದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಹಿಂದ ಅಸ್ತ್ರವನ್ನು ಮೊಂಡು ಮಾಡಲು ಯತ್ನಿಸಿದರೆ, ಮತ್ತೊಂದೆಡೆ ಮೈತ್ರಿ ಧರ್ಮದ ಇತಿಮಿತಿಗಳ ಬಗ್ಗೆಯೂ ಮಿತ್ರಪಕ್ಷ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.








