ಕನ್ನಡದ ಕಬೀರ ಇಬ್ರಾಹಿಂ ಸುತಾರ ನಿಧನ Saaksha Tv
ಬಾಗಲಕೋಟೆ: ಕನ್ನಡದ ಕಬೀರ ಎಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಇಬ್ರಾಹಿಂ ಸುತಾರ(76) ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ನಿಧನಹೊಂದಿದ್ದಾರೆ. ಇಬ್ರಾಹಿಂ ಸುತಾರ ಎದೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣ ಇಬ್ರಾಹಿಂ ಸುತಾರ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ಅವರು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ, ಶರಣರ ತತ್ವಗಳ ಅಧ್ಯಯನ ಮಾಡಿದವರಗಾಗಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ ಧರ್ಮ ಸಹಿಷ್ಣುತೆ ಪಾಠ ಮಾಡುತ್ತಿದ್ದರು.
ಇಬ್ರಾಹಿಂ ಎನ್. ಸುತಾರ್ ಮೇ 10, 1940 ರಲ್ಲಿ ಜನಿಸಿದರು. ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್, ತಾಯಿ ಅಮೀನಾಬಿ. ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರಿಂದ ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರು. ನಂತರ ನೇಕಾರ ವೃತ್ತಿ ಮೈಗೂಡಿಸಿಕೊಂಡರು. ಅದರ ಜತೆಗೆ ಮಸೀದಿಯಲ್ಲಿ ನಮಾಜು, ಕುರಾನ್ ಅಧ್ಯಯನ ಮಾಡಿದರು. ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದರು. ನಂತರದ ದಿನಗಳಲ್ಲಿ ಪ್ರವಚನಗಳನ್ನು ಮಾಡುತ್ತಾ ಭಾವೈಕ್ಯತೆಯ ಪಾಠವನ್ನು ಸಾರಿದರು. ಕನ್ನಡದ ಕಬೀರ ಎಂದೇ ಇವರು ಖ್ಯಾತರಾಗಿದ್ದು, ಇವರಿಗೆ 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿಯನ್ನು ನೀಡಿದೆ. ಜತೆಗೆ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.








