ಕ್ರಿಕೆಟ್ ನಲ್ಲಿ ಟೀ ಬ್ರೇಕ್ ಅಂತ ಯಾಕೆ ಕರೀತಾರೆ… ಟೀ ಮತ್ತು ಕಾಫಿ ಬ್ರೇಕ್ ಅನ್ನೋಕೆ ಆಗಲ್ವಾ ?
ವೆಂಕಟರಾಘವನ್. ಭಾರತ ಕ್ರಿಕೆಟ್ ತಂಡದ ನಾಯಕ. ಅದ್ರಲ್ಲೂ ಮೊದಲ ಎರಡು ವಿಶ್ವಕಪ್ ಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಕ್ರಿಕೆಟ್ ಬದುಕಿನ ನಂತರ ವೆಂಕಟರಾಘವನ್ ಅವರು ಐಸಿಸಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಆಫ್ ಸ್ಪಿನ್ನರ್ ಬೌಲರ್ ಆಗಿದ್ದ ವೆಂಕಟರಾಘವನ್ ತುಂಬಾನೇ ಸಿಡುಕು ಸ್ವಭಾವದವರು. ಯಾವಾಗಲೂ ಕೋಪದಿಂದಲೇ ಇರುತ್ತಿದ್ದ ವೆಂಕಟರಾಘವನ್ ಅಷ್ಟೇ ಪ್ರೀತಿ ಪಾತ್ರರೂ ಆಗಿದ್ದರು.
ವೆಂಕಟರಾಘವನ್ ಅವರ ಸಿಟ್ಟಿನ ಸ್ವಭಾವವನ್ನು ಕಪಿಲ್ ದೇವ್ ನೆನಪು ಮಾಡಿಕೊಂಡಿದ್ದಾರೆ. ವೆಂಕಟರಾಘವನ್ ಮೇಲೆ ಭಾರತ ಕ್ರಿಕೆಟ್ ತಂಡದ ಆಟಗಾರರು ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದರು. 1978-79ರಲ್ಲಿ ಕಪಿಲ್ ದೇವ್ ವೆಂಕಟರಾಘವನ್ ಅವರನ್ನು ಕಂಡ್ರೆ ತುಂಬಾನೇ ಹೆದರಿಕೊಳ್ಳುತ್ತಿದ್ರಂತೆ.
ಕಪಿಲ್ ದೇವ್ ಬಿಷನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಹಾಗೇ ಸುನೀಲ್ ಗವಾಸ್ಕರ್ ನಾಯಕತ್ವದಡಿಯಲ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಇನ್ನು ವೆಂಕಟರಾಘವನ್ ನಾಯಕತ್ವದಲ್ಲಿ ಕಪಿಲ್ ದೇವ್ ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಇಂಗ್ಲೆಂಡ್ ನಲ್ಲಿ ಟೆಸ್ಟ್ ಪಂದ್ಯದ ಸಂಜೆಯ ಬ್ರೇಕ್ಗೆ ಟೀ ಬ್ರೇಕ್ ಅಂತ ಕರೆಯುತ್ತಾರೆ. ಆದ್ರೆ ವೆಂಕಟರಾಘವನ್ ಅವರು ಈ ಬಗ್ಗೆ ಯಾವಾಗಲೂ ವಾದ ಮಾಡುತ್ತಿದ್ದರು. ಯಾಕೆ ಬರೀ ಟೀ ಬ್ರೇಕ್ ಅಂತ ಕರೆಯಬೇಕು… ಇದು ಕಾಫಿ – ಟೀ ಬ್ರೇಕ್ ಅಂತ ವೆಂಕಟರಾಘವನ್ ವಾದ ಮಾಡುತ್ತಿದ್ದರು ಎಂಬುದನ್ನು ಕಪಿಲ್ ದೇವ್ ಸ್ಮರಿಸಿಕೊಂಡಿದ್ದಾರೆ.
ನಾನು ವೆಂಕಟರಾಘವನ್ ಅವರನ್ನು ನೋಡಿದಾಗ ಬಹಳ ಹೆದರುತ್ತಿದ್ದೆ. ಅವರು ಯಾವಾಗಲೂ ಇಂಗ್ಲೀಷ್ನಲ್ಲೇ ಮಾತನಾಡುತ್ತಿದ್ದರು. ಹಾಗೇ ಅವರ ಸಿಟ್ಟು ನಮಗೆ ಎಲ್ಲಾ ಗೊತ್ತಿತ್ತು. ಅಂಪೈರ್ ಆಗಿದ್ದಾಗಲೂ ಅವರು ಬೌಲರ್ಗಳಿಗೆ ಬೈಯುತ್ತಿದ್ದರು. ನಾನು 1979ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ಅವರು ತಂಡದ ನಾಯಕನಾಗಿದ್ದರು. ಆಗ ನಾನು ಅವರಿಗೆ ಗೊತ್ತಾಗದ ಜಾಗದಲ್ಲಿ ಹೋಗಿ ಕೂರುತ್ತಿದೆ. ಪ್ರಸನ್ನ, ಚಂದ್ರಶೇಖರ್, ಬೇಡಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ನನ್ನನ್ನು ನೋಡಿದಾಗ ನನಗೆ ಅವರು ಬೈಯುತ್ತಿದ್ದರು. ನಾನು ಒಂದು ಮೂಲೆಯಲ್ಲಿ ಹೋಗಿ ಬ್ರೇಕ್ ಫಾಸ್ಟ್ ಮಾಡುತ್ತಿದ್ದೆ. ಯಾಕಂದ್ರೆ ನಾನು ಹೆಚ್ಚು ತಿಂಡಿ ತಿನ್ನುತ್ತಿದ್ದೆ. ಇದಕ್ಕಾಗಿ ಅವರು ನನಗೆ ಅವನು ಯಾವಾಗಲೂ ತಿಂತಾನೇ ಇರುತ್ತಾನೆ ಅಂತ ಹೇಳುತ್ತಿದ್ದರು ಎಂದು ಕಪಿಲ್ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡ್ರು.
ಇದೇ ವೇಳೆ ಕಪಿಲ್ ದೇವ್ ಇನ್ನೊಂದು ಘಟನೆಯನ್ನು ಸ್ಮರಿಸಿಕೊಂಡ್ರು. ಅದು 1983ರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯ. ಬಾರ್ಬಡೋಸ್ ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ನಾನು ಭಾರತ ತಂಡದ ನಾಯಕನಾಗಿದ್ದೆ. ವೆಂಕಟರಾಘವನ್ ಅವರು ಸಹ ಆಟಗಾರನಾಗಿದ್ದರು. ಅದಕ್ಕಿಂತ ಮೊದಲು ನಾನು ಸರ್ ಅನ್ನುತ್ತಿದ್ದೆ. ಬಳಿಕ ವೆಂಕಿ ಅಂತ ಕರೆಯುತ್ತಿದೆ. ಈ ಪಂದ್ಯದಲ್ಲಿ ವೆಂಕಟರಾಘವನ್ ಅವರು ನನ್ನನ್ನು ಗೊಂದಲದಲ್ಲಿ ಸಿಲುಕಿಸಿದ್ರು. ಬೌಲಿಂಗ್ ಬದಲಾವಣೆ ಮಾಡುವಾಗ ಯಾರು ನಾಯಕ ಎಂಬುದೇ ಗೊಂದಲವಾಗಿ ಹೋಗಿತ್ತು ಅಂತಾರೆ ಕಪಿಲ್ ದೇವ್.
ಬಾರ್ಬಡೋಸ್ ಪಿಚ್ ವೇಗದ ಬೌಲರ್ಗಳಿಗೆ ಹೆಚ್ಚಿನ ಅನುಕೂಲ ನೀಡುತ್ತಿತ್ತು. ಹಾಗೇ ನಾನು ಪಂದ್ಯದಲ್ಲಿ ರವಿಶಾಸ್ತ್ರಿಗೆ ಸ್ಪಿನ್ ಬೌಲಿಂಗ್ ಮಾಡಲು ಹೇಳಿದ್ದೆ. ವೆಂಕಿ ಅವರು ಸ್ಲಿಪ್ನಲ್ಲಿದ್ದರು. ಅವರು ಹೇಳ್ತಾ ಇದ್ರು.. ಕಪಿಲ್… ಅದಕ್ಕೆ ಯಸ್ ವೆಂಕಿ ಅಂತ ನಾನು ಹೇಳ್ತಾ ಇದ್ದೆ. ಈ ಸಂದರ್ಭದಲ್ಲಿ ಅವರು ಹೇಳಿದ್ರು.. ನಾನೇನು
ಬೌಲಿಂಗ್ ಮಾಡಲು ಆಗಲ್ಲ ಅಂತ ಹೇಳಿದ್ದೇನಾ ಅಂತ. ಆಗ ನನಗೆ ನಾಯಕ ಯಾರು.. ನಾನೋ ಅಥವಾ ಆತನೋ ಅನ್ನೋ ಗೊಂದಲಕ್ಕೆ ಬಿದ್ದೆ. ಆದ್ರೂ ಯಸ್ ವೆಂಕಿ ನಿಮ್ಮ ಸಮಯ ಬರುತ್ತೆ ಅಂತ ಹೇಳಿದ್ದೆ. ಅವರ ಸ್ವಭಾವ ಮಾತ್ರ ತುಂಬಾನೇ ಪ್ರೀತಿಯಿಂದಲೇ ಇತ್ತು ಎಂದು ಕಪಿಲ್ ದೇವ್ ವೆಂಕಟರಾಘವನ್ ಅವರ ಸ್ವಭಾವದ ಬಗ್ಗೆ ಹೇಳಿದ್ರು.
ವೆಂಕಟರಾಘವನ್ ಅವರು 1983ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ರು. ಅವರು 57 ಟೆಸ್ಟ್ ಪಂದ್ಯಗಳಲ್ಲಿ 156 ವಿಕೆಟ್ ಹಾಗೂ 15 ಏಕದಿನ ಪಂದ್ಯಗಳಲ್ಲಿ ಐದು ವಿಕೆಟ್ ಪಡೆದಿದ್ದರು.








