ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಮುಗಿದ್ದು, ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಈಗಾಗಲೇ ಎಕ್ಸಿಟ್ ಪೋಲ್ ಗಳು ಬಿಡುಗಡೆಯಾಗಿದ್ದು, ಸದ್ಯ ಬಹುತೇಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದಿದೆ. ಹೀಗಾಗಿ ಸಿದ್ದು, ಡಿಕೆಶಿ ಖುರ್ಚಿಯ ಮೇಲೆ ಕಣ್ಣಿಟ್ಟಿದ್ದು ನಾನಾ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.
ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (D.K Shivakumar) ತಮ್ಮದೇ ಆದ ಲೆಕ್ಕಾಚಾರಕ್ಕೆ ಮುಂದಾದಂತೆ ಕಾಣುತ್ತಿದೆ. ಸಿದ್ದರಾಮಯ್ಯಗೆ ಶಾಸಕರ ಬೆಂಂಬಲದ ವಿಶ್ವಾಸವಿದ್ದರೆ, ಡಿಕೆಶಿ ಹೈಕಮಾಂಡ್ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯಗೆ ನೂತನ ಶಾಸಕರ ಬೆಂಬಲದ ವಿಶ್ವಾಸವಿದ್ದು, ಹೀಗಾಗಿ ಅವರು 2013ರ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದಾರೆ.
ಕೆಪಿಸಿಸಿ (KPCC) ಅಧ್ಯಕ್ಷರನ್ನು ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್ ನಲ್ಲಿದೆ. ಹೀಗಾಗಿ ಡಿಕೆಶಿ ಈ ನಿರೀಕ್ಷೆಯಲ್ಲಿದ್ದಾರೆ. ಎಕ್ಸಿಟ್ ಪೋಲ್ (Exit Poll) ಆಧರಿಸಿ ಸಿಎಂ ಕುರ್ಚಿ ಕದನದಲ್ಲಿ ತಮ್ಮದೇ ಆದ ಲೆಕ್ಕಾಚಾರದಲ್ಲಿ ಉಭಯ ನಾಯಕರು ಇದ್ದಾರೆ ಎನ್ನಲಾಗಿದೆ. ಲೆಕ್ಕಾಚಾರ ಹಾಗೂ ನಂಬಿಕೆಯಲ್ಲಿ ಕೈ ಪಾಳಯ ಇದ್ದು ಎಕ್ಸಿಟ್ ಪೋಲ್ ನಿಂದಾಗಿ ಸಿಎಂ ಕುರ್ಚಿ ಕನಸು ಜೋರಾಗಿದೆ ಅಂತ ಹೇಳಲಾಗುತ್ತಿದೆ. ಈ ಮಧ್ಯೆ ಪರಮೇಶ್ವರ್ (G Parameshwar) ಕೂಡ ಸಿಎಂ ಗಾದಿ ಮೇಲೆ ಟವೆಲ್ ಹಾಕಲು ನೋಡಿದ್ದಾರೆ. ಇನ್ನೂ ಇನ್ನೊಂದು ದಲಿತ ಲೆಕ್ಕಾಚರದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ತೇಲಿ ಬರುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಸಿಎಂ ಪಟ್ಟಕ್ಕೆ ಅರ್ಹರಿದ್ದಾರೆ. ಇಬ್ಬರಿಗೂ ಅವಕಾಶ ಸಿಗಬೇಕು ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಕೂಡ ತಮ್ಮ ಎಲ್ಲ ಅಭ್ಯರ್ಥಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಆಸೆ, ಆಮಿಷಗಳಿಗೆ ಬಲಿಯಾಗದಂತೆ ಸೂಚಿಸಲಾಗಿದೆ. ಪಕ್ಷೇತರ ಅಭ್ಯರ್ಥಿ (Independent Candidates) ಗಳ ಮೇಲೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಾಯಕರು ಕಣ್ಣಿಟ್ಟಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನಲೆ ಪಕ್ಷೇತರಾಗಿ ಆಯ್ಕೆಯಾಗುವ ನಾಯಕರ ಸಂಪರ್ಕಕ್ಕೆ ಉಭಯ ಪಕ್ಷದ ನಾಯಕರ ಪ್ರಯತ್ನ ನಡೆಸುತ್ತಿದ್ದಾರೆ.








