ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ… ಇದು ಭಾರತೀಯ ಕ್ರೀಡಾ ಸಾಧಕರಿಗೆ ನೀಡುತ್ತಿರುವ ಪ್ರತಿಷ್ಠಿತ ಪ್ರಶಸ್ತಿ. 1991ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಂದ ಹಾಗೇ ಖೇಲ್ ರತ್ನ ಪ್ರಶಸ್ತಿ ಮೊದಲ ಕ್ರೀಡಾಪಟು ಅಂದ್ರೆ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್. ಆ ನಂತರ ಇಲ್ಲಿಯವರೆಗೆ ಸುಮಾರು 38 ಕ್ರೀಡಾ ಸಾಧಕರು ಪ್ರಶಸ್ತಿ ಪಡೆದುಕೊಂಡಿದ್ದಾರೆ. 2008ರಲ್ಲಿ ಮತ್ತು 2014ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿಲ್ಲ.
ಅದೇನೇ ಇರಲಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಭಾರತದ ಅನೇಕ ಕ್ರೀಡಾಪಟುಗಳು ವಿಶ್ವ ಕ್ರೀಡಾ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಅದ್ರಲ್ಲಿ ಕೆಲವರು ಮುಂಚೂಣಿಗೆ ಬಂದ್ರೆ ಮತ್ತೆ ಕೆಲವರು ತೆರೆಮರೆಯಲ್ಲಿರಬೇಕಾಯ್ತು. ಯಾವುದೇ ಸವಲತ್ತುಗಳು ಇಲ್ಲದಿದ್ರೂ ಕೂಡ ತಮ್ಮ ಸ್ವಂತ ಪ್ರತಿಭೆ ಮತ್ತು ಕಠಿಣ ಪರಿಶ್ರಮ ಹಾಗೂ ಕ್ರೀಡೆಯ ಮೇಲಿನ ಅಪಾರವಾದ ಬದ್ಧತೆ, ಪ್ರೀತಿಯಿಂದ ಭಾರತವನ್ನು ಪ್ರತಿನಿಧಿಸಿದ್ದ ಕ್ರೀಡಾಪಟುಗಳ ಕಥೆ-ವ್ಯಥೆಯನ್ನು ಸರ್ಕಾರಗಳು ಕೂಡ ಕಿವಿಗೆ ಹಾಕಿಕೊಳ್ಳಲಿಲ್ಲ.
ಪ್ರಶಸ್ತಿ ಗೆದ್ದು ಬಂದಾಗ ಅವರಿಗೆ ಹೂಗುಚ್ಛ, ಶಾಲು, ಟ್ರೋಫಿ, ಅಲ್ಪ ಮಟ್ಟಿನ ನಗದು ಬಹುಮಾನದ ಜೊತೆ ನಮ್ಮ ರಾಜಕಾರಣಿಗಳು ಒಂದು ಫೋಟೋ ತೆಗೆಸಿಕೊಳ್ಳುತ್ತಿದ್ರೆ ಹೊರತು ಅವರ ಹೆಸರು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಕೆಲವರ ಅದೃಷ್ಟವೋ ಅಥವಾ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಕಾರಣ ಅವರು ಹೆಚ್ಚು ಚಾಲ್ತಿಯಲ್ಲಿರುತ್ತಿದ್ದರು. ಅದನ್ನು ಹೊರತಾಗಿ ಯಾವೊಬ್ಬ ಕ್ರೀಡಾಪಟುವಿಗೂ ನಮ್ಮ ದೇಶದಲ್ಲಿ ಗೌರವನ್ನು ನೀಡಿಲ್ಲ ಎಂಬುದು ವಿಷಾದನಿಯ ಸಂಗತಿಯೇ ಸರಿ. ಅಷ್ಟೇ ಯಾಕೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದೆಷ್ಟೋ ಪದಕ, ಪ್ರಶಸ್ತಿಗಳನ್ನು ಗೆದ್ದಿದ್ದರೂ ಕೂಡ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವವರ ಪಟ್ಟಿಯೇ ದೊಡ್ಡದಿದೆ.
ಗೆದ್ದವರ ಬಾಲ ಹಿಡಿಯುವ ಜಾಯಮಾನ ನಮ್ಮದಾಗಿರುವುದರಿಂದ ಎಷ್ಟೋ ಸಲ ಪ್ರತಿಭಾವಂತ ಕ್ರೀಡಾಪಟುಗಳು ಕೂಡ ಮೂಲೆಗುಂಪು ಆಗಬೇಕಾಗುತ್ತದೆ. ಅದೂ ಅಲ್ಲದೆ ಕ್ರೀಡಾಪಟುಗಳು ತಮ್ಮ 30-35ರ ವಯಸ್ಸಿನ ತನಕ ಮೈದಾನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಬಹುದು. ಆ ವೇಳೆಯಲ್ಲಿ ಅವರೇನಾದ್ರೂ ಕೆಲಸ ಗಿಟ್ಟಿಸಿಕೊಂಡ್ರೆ ಓಕೆ.. ಇಲ್ಲ ಅಂದ್ರೆ ಅವರನ್ನು ಕೇಳುವವರೇ ಇರಲ್ಲ. ಇನ್ನು ಕೆಲವರು ಹೊಂದಾಣಿಕೆಯ ಸೂತ್ರವನ್ನು ಅಳವಡಿಸಿಕೊಂಡು ತಮ್ಮ ತಮ್ಮ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳಾಗಿ, ತರಬೇತುದಾರರಾಗಿ ಕೆಲಸ ಮಾಡುತ್ತಿರುತ್ತಾರೆ. ಅಲ್ಲೂ ಕೂಡ ಸಾಕಷ್ಟು ರಾಜಕೀಯಗಳು ಇರುತ್ತವೆ. ಅದನ್ನೆಲ್ಲಾ ಸಹಿಸಿಕೊಂಡು ತಮ್ಮ ಕ್ರೀಡಾಸ್ಫೂರ್ತಿಯನ್ನು ಮೆರೆಸುವವರು ಇದ್ದಾರೆ. ಇನ್ನು ಕೆಲವರು ಭ್ರಷ್ಟರ ಜೊತೆ ಸೇರಿಕೊಂಡು ಭ್ರಷ್ಟಚಾರ ಮಾಡಿಕೊಂಡು ತಮ್ಮ ಹಳೆಯ ಕಷ್ಟದ ದಿನಗಳನ್ನು ಮರೆತುಬಿಡುತ್ತಾರೆ.
ಭಾರತದಲ್ಲಿ ಕ್ರಿಕೆಟ್ ಆಟವನ್ನು ಹೊರತುಪಡಿಸಿ ಇನ್ನುಳಿದ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವಿಲ್ಲ. ಆದ್ರೂ ಕಳೆದ ಹತ್ತು ಹದಿನೈದು ವರ್ಷಗಳಿಂದ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಗ್ರಾಮೀಣ ಭಾಗದ ಅಥ್ಲೀಟ್ಗಳು ಒಲಿಂಪಿಕ್ಸ್, ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ನೋಡುಗರ ದೃಷ್ಟಿಕೋನವನ್ನು ಬದಲಾಯಿಸಿಬಿಟ್ಟಿದ್ದಾರೆ. ಹೀಗಾಗಿ ಬ್ಯಾಡ್ಮಿಂಟನ್, ಹಾಕಿ, ಟೆನಿಸ್, ಕಬಡ್ಡಿ, ಶೂಟಿಂಗ್, ಕುಸ್ತಿ, ಬಾಕ್ಸಿಂಗ್ ಮೊದಲಾದ ಕ್ರೀಡೆಗಳಲ್ಲಿ ಅತ್ಯುತ್ತಮ ನಿರ್ವಹಣೆ ಮಾಡಿ ಕಾರ್ಪೋರೇಟ್ ಕಂಪೆನಿಗಳ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಆದ್ರೂ ಕ್ರಿಕೆಟ್ಗೆ ಸಿಗುವಷ್ಟು ಮಾನ್ಯತೆ ಬೇರೆ ಕ್ರೀಡೆಗಳಿಗೆ ಭಾರತದಲ್ಲಿ ಸಿಗುತ್ತಿಲ್ಲ ಅನ್ನೋ ಆರೋಪ ನಿನ್ನೆ ಮೊನ್ನೆಯದಲ್ಲ.
ಅಷ್ಟಕ್ಕೂ ಭಾರತದಲ್ಲಿ ಕ್ರಿಕೆಟ್ ಅಷ್ಟೊಂದು ಪ್ರಭಾವ ಬೀರಲು ಮುಖ್ಯ ಕಾರಣ ಬಿಸಿಸಿಐ. ಸ್ವಾಯತ್ತತೆಯನ್ನು ಹೊಂದಿರುವ ಬಿಸಿಸಿಐ ಆರ್ಥಿಕವಾಗಿ ಸರ್ಕಾರವನ್ನು ಅಲವಲಂಬನೆ ಮಾಡಿಕೊಂಡಿಲ್ಲ. ಅದೇ ರೀತಿ ಬಿಸಿಸಿಐನ ದೂರದೃಷ್ಟಿಯ ಅಲೋಚನೆ. ಬಿಸಿಸಿಐ ಚಾವಡಿಯೊಳಗೆ ಎಷ್ಟೇ ಅಸಮಾಧಾನ, ಒಳಜಗಳ, ಭ್ರಷ್ಟಚಾರವಿದ್ರೂ ಕೂಡ ಕ್ರಿಕೆಟ್ ಆಟವನ್ನು ಉತ್ತುಂಗಕ್ಕೇರಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ಬೇರೆ ಕ್ರೀಡೆಗಳಲ್ಲಿ ಹಾಗಲ್ಲ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನೇ ಅವಲಂಬಿಸಿರಬೇಕಾಗುತ್ತದೆ. ಅಲ್ಲದೆ ರಾಜಕಾರಣಿಗಳು ತಮ್ಮ ಗೌರವಕ್ಕೊಸ್ಕರ ಕ್ರೀಡಾ ಸಂಸ್ಥೆಗಳ ಅಧ್ಯಕ್ಷ, ಗೌರವಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದ್ರೆ ತಮ್ಮ ಕ್ರೀಡಾ ಸಂಸ್ಥೆಗಳ ಉದ್ದಾರಕ್ಕಾಗಿ ಯಾವ ಯೋಜನೆಗಳನ್ನು ಕಾರ್ಯರೂಪ ತರುತ್ತಿಲ್ಲ.
ಇದೀಗ ಬಿಸಿಸಿಐನಲ್ಲಿ ಮಾಜಿ ಕ್ರಿಕೆಟಿಗರೇ ಆಡಳಿತಗಾರರಾಗಿದ್ದಾರೆ. ಹಾಗೇ ಕೆಲವೊಂದು ಕ್ರೀಡಾ ಸಂಸ್ಥೆಗಳಲ್ಲೂ ಪ್ರಭಾವಿ ಕ್ರೀಡಾಪಟುಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಇನ್ನೊಂದು ದುರಂತ ಅಂದ್ರೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಕ್ರೀಡಾ ಮಂತ್ರಿಯಾಗಿದ್ದರು. ಕ್ರೀಡಾಮಂತ್ರಿಯಾಗಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ಆದ್ರೆ ಎರಡನೇ ಅವಧಿಯಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ಗೆ ಅವಕಾಶವನ್ನೇ ನೀಡಲಿಲ್ಲ. ಬದಲಾಗಿ ಕಿರೇನ್ ರಿಜುಗೆ ನೀಡಲಾಗಿದೆ. ಇದು ತಪ್ಪು ಅಂತ ಹೇಳ್ತಿಲ್ಲ. ಆದ್ರೆ ಒಬ್ಬ ಕ್ರೀಡಾ ಸಾಧಕ ಸಂಸದನಾಗಿ ಐದು ವರ್ಷ ಕ್ರೀಡಾಮಂತ್ರಿಯಾಗಿ ಸೇವೆ ಸಲ್ಲಿಸಿದ್ರೂ ಆತನಿಗೆ ಅವಕಾಶ ನೀಡದಿರುವುದು ದುರಂತವೇ ಸರಿ.
ಇನ್ನು ಪ್ರಮುಖ ವಿಚಾರ ಅಂದ್ರೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುವಾಗ ಯಾವೊಬ್ಬ ಕ್ರೀಡಾಪಟುವಿನ ಹೆಸರಿನಲ್ಲಿ ನೀಡಲಾಗುತ್ತಿಲ್ಲ. ಹಾಕಿ ಮಾಂತ್ರಿಕ ಧ್ಯಾನ್ ಚಾಂದ್ ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದ್ರೆ ಅವರ ಹೆಸರಿನಲ್ಲಿ ದೇಶದ ಪ್ರತಿಷ್ಠಿತ ಕ್ರೀಡಾಪ್ರಶಸ್ತಿಯನ್ನು ನೀಡಲಾಗುತ್ತಿಲ್ಲ. ಇಲ್ಲಿ ಇನ್ನೊಂದು ಪ್ರಶ್ನೆ ಮೂಡುತ್ತಿದೆ. ರಾಜೀವ್ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದರು. ಅವರ ಹೆಸರಿನಲ್ಲೂ ದೇಶದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆದ್ರೆ ಕ್ರೀಡಾ ಕ್ಷೇತ್ರಕ್ಕೆ ಅವರ ಹೆಸರಿನಲ್ಲೇ ಯಾಕೆ ಅದು ಕೂಡ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ನೀಡಬೇಕು. ರಾಜೀವ್ ಗಾಂಧಿ ಹೆಸರಿನ ಬದಲು ಧ್ಯಾನ್ಚಾಂದ್ ಅಥವಾ ಮಿಲ್ಕಾ ಸಿಂಗ್, ಪಿ.ಟಿ. ಉಷಾ ಸೇರಿದಂತೆ ಅನೇಕ ಅಪ್ರತಿಮ ಸಾಧನೆ ಮಾಡಿದ ಸಾಧಕರ ಹೆಸರಿನಲ್ಲೂ ಕೊಡಬಹುದಿತ್ತು ಅಲ್ವಾ ?
ಅಷ್ಟೇ ಯಾಕೆ, ನಮ್ಮ ದೇಶದಲ್ಲಿ ನೂರಾರು ಕ್ರೀಡಾಂಗಣಗಳಿವೆ. ಆ ಹೆಸರಿನಲ್ಲೂ ರಾಜಕೀಯ ಎದ್ದು ಕಾಣುತ್ತಿದೆ. ದೇಶದ ಬಹುತೇಕ ಕ್ರೀಡಾಂಗಣಗಳ ಹೆಸರು ಕೂಡ ರಾಜಕಾರಣಿಗಳದ್ದಾಗಿರುತ್ತದೆ. ಅದೂ ಕೂಡ ನೆಹರು ಮನೆತನ ಹೆಸರಿನ ಕ್ರೀಡಾಂಗಣಗಲೇ ಜಾಸ್ತಿ ಇವೆ. ಹಾಗಂತ ಇದು ಕಾಂಗ್ರೆಸ್ ವಿರೋಧಿ, ನೆಹರು ಮನೆತನದ ವಿರೋಧಿ ಅಂತ ಹೇಳುವುದಿಲ್ಲ. ಯಾಕಂದ್ರೆ ರಾಜಕಾರಣಿಗಳ ಹೆಸರನ್ನಿಡಲು ಸಾಕಷ್ಟು ಸಾಮಾಜಿಕ ಕ್ಷೇತ್ರಗಳಿವೆ. ಅಲ್ಲಿ ಬೇಕಾದ್ರೆ ಅವರ ಹೆಸರುಗಳನ್ನು ಇಡಲಿ, ಆದ್ರೆ ಪ್ರಶಸ್ತಿ ಬಿಡಿ, ಕನಿಷ್ಠ ಕ್ರೀಡಾಂಗಣಗಳಿಗೆ ನಮ್ಮ ದೇಶದ ಕ್ರೀಡಾಪಟುಗಳ ಹೆಸರನ್ನು ಇಟ್ಟರೆ ಅವರ ಸಾಧನೆಗೆ ಗೌರವ ನೀಡಿದಂತಾಗುತ್ತದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಕೊಟ್ಟಂತಾಗುತ್ತದೆ. ಆದ್ರೆ ನಮ್ಮ ದೇಶದಲ್ಲಿ ಇದೆಲ್ಲಾ ಸಾಧ್ಯನಾ ? ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ.. ಎಲ್ಲವೂ ಸಾಧ್ಯ. ಆದ್ರೆ ಮನಸ್ಸು ಬೇಕು. ಇಚ್ಛಾ ಶಕ್ತಿ ಬೇಕು.








