ಬೆಂಗಳೂರು: ದೇವೇಗೌಡ (HD Devegowda) ಮತ್ತು ಕುಮಾರಸ್ವಾಮಿ (HD Kumaraswamy) ರಾಜ್ಯಕ್ಕೆ ಅನ್ಯಾಯವಾಗಿರು ತೆರಿಗೆ ಹಣ ಕೊಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ರಾಜ್ಯದ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ ಎಂಬ ಕುಮಾರಸ್ವಾಮಿ ಮಾತಿಗೆ ಉತ್ತರ ನೀಡಿದ ಸಿಎಂ, ಕುಮಾರಸ್ವಾಮಿ ಇರುವಾಗ ಗ್ಯಾರಂಟಿ ಯೋಜನೆ ಕೊಟ್ಟಿದ್ದಾರಾ? ಕುಮಾರಸ್ವಾಮಿಗೆ ಮಾತಾಡಲು ಯಾವ ನೈತಿಕ ಹಕ್ಕಿದೆ? ದೇವೇಗೌಡ ಆಗಲಿ, ಕುಮಾರಸ್ವಾಮಿ ಆಗಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾತನಾಡುತ್ತಿಲ್ಲ ಎಂದು ಗುಡುಗಿದ್ದಾರೆ.
ನಾವು ಒಂದು ವರ್ಷಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇವೆ. 59 ಸಾವಿರ ರೂ. ನಮಗೆ ವಾಪಸ್ ಬರುತ್ತದೆ. ಒಂದು ರೂಪಾಯಿ ಕೊಟ್ಟರೆ ನಮಗೆ ಬರೋದು 14 ಪೈಸೆ. ಉಳಿದದ್ದು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತದೆ. ಕುಮಾರಸ್ವಾಮಿ ಆ ಹಣವನ್ನು ರಾಜ್ಯಕ್ಕೆ ಕೊಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕಳೆದ ವರ್ಷ ನಬಾರ್ಡ್ನಲ್ಲಿ 5,600 ಕೋಟಿ ರೂ. ರೈತರಿಗೆ ಸಾಲ ಕೊಟ್ಟಿದ್ದರು. ಈ ವರ್ಷ 2,340 ಕೋಟಿ ರೂ. ಕೊಟ್ಡಿದ್ದಾರೆ. ಇದು ಅನ್ಯಾಯ ಅಲ್ಲವಾ? ಕುಮಾರಸ್ವಾಮಿ ಎಂದು ಪ್ರಶ್ನಿಸಿದ್ದಾರೆ.
15ನೇ ಹಣಕಾಸು ಆಯೋಗ 11,595 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಕೊಡಲಿಲ್ಲ. ಇದೆಲ್ಲವನ್ನು ಕೇಳುವುದಿಲ್ಲ. ಬರೆಯುವುದಿಲ್ಲ, ತೋರಿಸುವುದಿಲ್ಲ. ಕುಮಾರಸ್ವಾಮಿ ಹೇಳಿದ ಹಾಗೆ ಕೇಳಬೇಡಿ ಎಂದು ಕೂಡ ಮಾಧ್ಯಮಗಳನ್ನು ತಿವಿದಿದ್ದಾರೆ.








