ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರಿಗೆ ಮಾತನಾಡುವ ಚಪಲ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಸ್ವತಃ ಕುಮಾರಸ್ವಾಮಿಯವರೇ ನಿನ್ನೆ ಅತ್ಯಂತ ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮದು ಹಣ ಮಾಡುವ ಚಪಲ, ನನ್ನದು ಜನಪರ ಕಾಳಜಿಯ ಚಪಲ
ಕಾಂಗ್ರೆಸ್ ನಾಯಕರೊಬ್ಬರು ತಮಗೆ ಮಾತನಾಡುವ ಚಪಲವಿದೆ ಎಂದು ಹೇಳಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ಹೌದು, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಪಲವಿರುತ್ತದೆ. ಕೆಲವರಿಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರನ್ನು ಲೂಟಿ ಮಾಡಿ ಹಣ ಗಳಿಸುವ ಚಪಲವಿದ್ದರೆ, ನನಗೆ ಜನರ ಕಷ್ಟಗಳಿಗೆ ಸ್ಪಂದಿಸಿ, ಅವರ ಜೊತೆ ನಿಂತು ಸಹಾಯ ಮಾಡುವ ಚಪಲವಿದೆ. ನನ್ನ ಮತ್ತು ನಿಮ್ಮ ಚಪಲಕ್ಕೆ ಇರುವ ವ್ಯತ್ಯಾಸವೇ ಇಷ್ಟು ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು. ನಾನು ಬಾಯಿ ಚಪಲಕ್ಕೆ ಮಾತನಾಡುವವನಲ್ಲ. ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಜನರಿಗೆ ಸತ್ಯ ತಿಳಿಸುವುದು ನನ್ನ ಮತ್ತು ಜನರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿಯೇ ಹೊರತು ಬೇರೇನಲ್ಲ ಎಂದು ಸ್ಪಷ್ಟಪಡಿಸಿದರು.
ಜಾತಿ ಅಸ್ತ್ರದ ಬಗ್ಗೆ ವ್ಯಂಗ್ಯ
ಸ್ವಜಾತಿಯವರಿಂದಲೇ ಅನ್ಯಾಯವಾಗುತ್ತಿದೆ ಎಂಬ ಉಪಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಷ್ಟ ಬಂದಾಗ ಮಾತ್ರ ಇವರಿಗೆ ಕ್ಯಾಸ್ಟ್ (ಜಾತಿ) ನೆನಪಾಗುತ್ತದೆ. ಬೆಳಗ್ಗೆಯಿಂದ ಸಂಜೆವರೆಗೆ ರಾಜ್ಯವನ್ನು ಲೂಟಿ ಮಾಡಬೇಕು, ಹಣ ಹೊಡೆಯಬೇಕು ಎನ್ನುವವರು ಇವರು. ಇಂಥವರು ತಮ್ಮ ಜಾತಿಗೆ ಏನು ಕೊಡುಗೆ ನೀಡಿದ್ದಾರೆ? ದಿನ ಬೆಳಗಾದರೆ ಯಾರ ಜಮೀನಿಗೆ ಬೇಲಿ ಹಾಕಬೇಕು, ಯಾರ ತಲೆ ಒಡೆಯಬೇಕು, ಹೇಗೆ ಅಕ್ರಮ ಆಸ್ತಿ ಗಳಿಸಬೇಕು ಎಂದು ಯೋಚಿಸುವವರಿಗೆ ಜಾತಿ ಹೆಸರಿನಲ್ಲಿ ಬೆಂಬಲ ಸಿಗಬೇಕೇ ಎಂದು ಪ್ರಶ್ನಿಸಿದರು.
ಮರಿ ಖರ್ಗೆಗೆ ಲೀಸ್ ಪಾಲಿಟಿಕ್ಸ್ ಪಾಠ
ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾದರು. ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಮೊದಲು ಸೋ ಕಾಲ್ಡ್ ನ್ಯಾಷನಲ್ ಪಾರ್ಟಿ ಎಂದು ಕರೆಿಸಿಕೊಳ್ಳುವ ನಿಮ್ಮ ಕಾಂಗ್ರೆಸ್ ಪಕ್ಷ ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಯಾವ ದುಸ್ಥಿತಿಯಲ್ಲಿದೆ ಎಂದು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿರುವ ಬಹುತೇಕ ಮಂತ್ರಿಗಳು ಜೆಡಿಎಸ್ ಪಕ್ಷದಿಂದ ಲೀಸ್ ಮೇಲೆ ಹೋದವರು ಎಂಬ ಕಟು ಸತ್ಯವನ್ನು ನಿಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿ ತಿಳಿದುಕೊಳ್ಳಿ. ಮುಖ್ಯಮಂತ್ರಿಗಳಿಂದ ಹಿಡಿದು ಸಾಲು ಸಾಲು ಮಂತ್ರಿಗಳು ಜೆಡಿಎಸ್ ಮೂಲದವರೇ ಆಗಿದ್ದಾರೆ. ಸದ್ಯಕ್ಕೆ ನಿಮ್ಮ ಪಕ್ಷದಲ್ಲಿ ಒಬ್ಬರ ಲೀಸ್ ಅವಧಿ ಮುಗಿದಿದೆ, ನನ್ನನ್ನು ಲೀಸ್ ಮೇಲೆ ಸಿಎಂ ಮಾಡಿ ಎಂದು ಇನ್ನೊಬ್ಬರು ಟವೆಲ್ ಹಾಕಿದ್ದಾರೆ. ಆದರೆ ಹಾಲಿ ಇರುವವರು ನನ್ನ ಲೀಸ್ ಇನ್ನೂ ಮುಗಿದಿಲ್ಲ, ಕುರ್ಚಿ ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಮೊದಲು ನಿಮ್ಮ ಪಕ್ಷದ ಈ ಆಂತರಿಕ ಕಚ್ಚಾಟದ ಹಣೆಬರಹವನ್ನು ಸರಿಪಡಿಸಿಕೊಳ್ಳಿ, ಆಮೇಲೆ ಜೆಡಿಎಸ್ ಬಗ್ಗೆ ಮಾತನಾಡಿ ಎಂದು ವ್ಯಂಗ್ಯವಾಡಿದರು.
ನನ್ನನ್ನು ಟೀಕಿಸುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆಗೆ ಬನ್ನಿ ಎಂದು ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ ಕುಮಾರಸ್ವಾಮಿ, ಕಳೆದ 40 ವರ್ಷಗಳಿಂದ ನಿಮ್ಮ ತಂದೆ ಹಾಗೂ 8-9 ವರ್ಷಗಳಿಂದ ನೀವು ಅಧಿಕಾರದಲ್ಲಿದ್ದೀರಿ. ಕಲಬುರಗಿಯಲ್ಲಿ ಆದ ಅಭಿವೃದ್ಧಿ ಹಾಗೂ ರಾಮನಗರ, ಕನಕಪುರ, ಮೈಸೂರು ಭಾಗದಲ್ಲಿ ಆದ ಅಭಿವೃದ್ಧಿಯನ್ನು ಹೋಲಿಸಿ ನೋಡಿ. ನಿಮ್ಮ ಸಾಧನೆ ಏನೆಂದು ಪಟ್ಟಿ ಕೊಡಿ ಎಂದು ಆಗ್ರಹಿಸಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ನಾಯಕರಿಗೆ ನಿದ್ದೆ ಬರುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಯ ಕಾರಣಕ್ಕಾಗಿಯೇ ನೀವು ಕೇವಲ 9 ಸ್ಥಾನಗಳಿಗೆ ಸೀಮಿತವಾಗಿದ್ದೀರಿ. ನಮ್ಮ ಕಡೆಯಿಂದಾದ ಸಣ್ಣಪುಟ್ಟ ಲೋಪಗಳ ಲಾಭ ನಿಮಗೆ ಸಿಕ್ಕಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ನಿಮ್ಮ ಪಕ್ಷ 3 ರಿಂದ 4 ಸ್ಥಾನಗಳಿಗೆ ಕುಸಿಯುತ್ತಿತ್ತು. ಹೀಗಿರುವಾಗ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಥವಾ ಕಾಂಗ್ರೆಸ್ ನಾಶವಾಗುತ್ತಿದೆಯೋ ನೀವೇ ಉತ್ತರಿಸಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.








