ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ ಪತ್ರಿಕೋದ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಜಾತಶತ್ರು ಎಂದೇ ಹೇಳಬಹುದು. ಪವರ್ಫುಲ್ ಸ್ಥಾನದಲ್ಲಿದ್ದರೂ ತಮ್ಮ ಬಳಿಗೆ ಬಂದವರಲ್ಲಿ ಆ ಅಹಂ ಎಂದೂ ಪ್ರದರ್ಶಿಸಿದವರಲ್ಲ. ಬೆಂಬಲ ಕೋರಿ ಬಂದವರಿಗೆ ಬೆನ್ನೆಲುಬಾಗಿ ನಿಂತವರು. ಸಿಎಂ ಕಪ್ 2026ಕ್ಕೂ ಅದೇ ರೀತಿಯ UNCONDITIONAL ಬೆಂಬಲ ನೀಡುತ್ತಾ, ನಾನಿದ್ದೀನಿ ನೀವು ಮುಂದುವರಿಯಿರಿ ಎಂದು ಬೆನ್ನು ತಟ್ಟಿದ್ದಾರೆ ಮತ್ತು ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಆಡುತ್ತಿರುವುದು ಇನ್ನಷ್ಟು ಸ್ಪೂರ್ತಿಯನ್ನುಂಟು ಮಾಡಿದೆ ಅಂತಹ ಮೇರು ವ್ಯಕ್ತಿತ್ವದ ಪರಿಚಯ ಮಾಡುವ ಸಣ್ಣ ಪ್ರಯತ್ನ ನಮ್ಮದು.
ಕೋಲಾರದ ಕುರುಬರ ಪೇಟೆಯ ಮಧ್ಯಮ ವರ್ಗದ ವೆಂಕಟೇಶಪ್ಪ ಮತ್ತು ಲಕ್ಷ್ಮೀದೇವಿ ಅವರ ಪುತ್ರ ಕೆ.ವಿ. ಪ್ರಭಾಕರ್, ತಮ್ಮ ಪ್ರಾಥಮಿಕ ಮತ್ತು ಪದವಿ ಶಿಕ್ಷಣವನ್ನು ಕೋಲಾರ ಮತ್ತು ಕೆಜಿಎಫ್ನಲ್ಲಿ ಪೂರ್ಣಗೊಳಿಸಿದರು.
ಆನಂತರ ಕೋಲಾರ ಪತ್ರಿಕೆಯ ಹಂಚಿಕೆದಾರರಿಗೆ ಪತ್ರಿಕಾ ರಂಗದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಪ್ರಭಾಕರ್ ಅವರ ವೃತ್ತಿಪರತೆ, ಮಹಾತ್ವಾಕಾಂಕ್ಷೆ, ಕಾರ್ಯಕ್ಷಮತೆ, ಶ್ರಮ ಮತ್ತು ಶ್ರದ್ಧೆಯು ಹಂಚಿಕೆದಾರರಾಗಿದ್ದ ಕೋಲಾರ ಪತ್ರಿಕೆಯಲ್ಲಿಯೇ ವರದಿಗಾರರಾಗಿ ವೃತ್ತಿ ಜೀವನವನ್ನು ಮತ್ತೊಂದು ಮಜಲಿಗೆ ಹೊರಳುವಂತಾಯಿತು. ಜತೆಗೆ ಸುದ್ದಿ ಸಂಚಯ, ಕೋಲಾರ ವಾಣಿ ಪತ್ರಿಕೆಯಲ್ಲೂ ಕೆಲಸ ಮಾಡಿದರು.
ಈ ಪತ್ರಿಕೆಗಳ ಅನುಭವವನ್ನು ಹೊತ್ತು 1999ರಲ್ಲಿ ರಾಜಧಾನಿ ಬೆಂಗಳೂರಿತ್ತ ಮುಖಮಾಡಿದ ಕೆ.ವಿ. ಪ್ರಭಾಕರ್, ವಿಜಯಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳ ಮೂಲಕ ವೃತ್ತಿಯಲ್ಲಿ ಮತ್ತೊಂದು ಹಂತಕ್ಕೇರಿದರು. ವರದಿಗಾರರಾಗಿ, ವಿಶೇಷ ವರದಿಗಾರ ಮತ್ತು ಮುಖ್ಯ ವರದಿಗಾರರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯ, ಅಪರಾಧ, ಸಾಮಾಜಿಕ ಕಳಕಳಿಯ ಹಲವು ವರದಿಗಳ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದರು.
ಪತ್ರಿಕೋದ್ಯಮದಲ್ಲಿನ ಸಾಧನೆ, ವೃತ್ತಿಪರತೆಗಾಗಿ ಕೆ.ವಿ. ಪ್ರಭಾಕರ್ ಅವರಿಗೆ, ಕೆಂಪೇಗೌಡ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪ್ರೆಸ್ಕ್ಲಬ್ ಪ್ರಶಸ್ತಿ, ಕೋಲಾರ ಜಿಲ್ಲಾ ಪತ್ರಕರ್ತರ ಸಂಘ ಕೊಡಮಾಡುವ ಪತ್ರಿಕೋದ್ಯಮದ ಹೆಮ್ಮೆ ಜಿ. ನಾರಾಯಣಸ್ವಾಮಿ ಪ್ರಶಸ್ತಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರ, ಗೌರವಗಳು ಸಂದಿವೆ.
25 ವರ್ಷಗಳ ವೃತ್ತಿಪರತೆ, ಅನುಭವ, ಪ್ರಾಮಾಣಿಕತೆ ಕೆ.ವಿ. ಪ್ರಭಾಕರ್ ಅವರನ್ನು ಶಕ್ತಿ ಕೇಂದ್ರದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿತು. ಅದೂ ಕೂಡ ರಾಜ್ಯದ ಯಶಸ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಗದಲ್ಲಿ ಜನಸೇವೆ ಮಾಡುವಂತಹ ಮಹತ್ವದ ಜವಾಬ್ದಾರಿಯೂ ದೊರೆಯಿತು. 2013ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಂಯೋಜಕರಾಗಿ ಸೇವೆ ಸಲ್ಲಿಸಿದರು. ಆನಂತರ 2018ರಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.
ಈ ಎರಡೂ ಅವಧಿಯಲ್ಲಿ ತಮ್ಮ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆ ಬಿಟ್ಟುಕೊಡದ ಕೆ.ವಿ. ಪ್ರಭಾಕರ್ ಅವರಿಗೆ 2023ರಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಂತೆ ಮಾಧ್ಯಮ ಸಲಹೆಗಾರರಾಗುವ ಜವಾಬ್ದಾರಿ ಒದಗಿ ಬಂದಿತು.
ಮುಖ್ಯಮಂತ್ರಿ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದರೂ, ತಮ್ಮ ಬಳಿಗೆ ಬರುವ ಯಾರನ್ನೂ ದೂರ ಇಟ್ಟ ಅಥವಾ ಅವರ ಕಷ್ಟಗಳನ್ನು ಉದಾಸೀನ ಮಾಡಿದ ಉದಾಹರಣೆಗಳಿಲ್ಲ. ಸರ್ಕಾರದ ಭಾಗವಾಗಿದ್ದರೂ ತಮ್ಮನ್ನು ಪತ್ರಕರ್ತ ಎಂದು ಗುರುತಿಸಿಕೊಳ್ಳುವುದಕ್ಕೆ ಈಗಲೂ ಕೆ.ವಿ. ಪ್ರಭಾಕರ್ ಹೆಮ್ಮೆ ಪಡುತ್ತಾರೆ. ಅದನ್ನೂ ಹಲವು ವೇದಿಕೆಗಳಲ್ಲಿ ಹೇಳಿಯೂ ಇದ್ದಾರೆ.
ಪ್ರಭಾಕರ್ ಅವರು ಅಧಿಕಾರ ರಾಜಕಾರಣದ ಭಾಗವಾಗಿದ್ದರೂ ತಮ್ಮ ಜವಾಬ್ದಾರಿ ಮತ್ತು ಕೆಲಸದ ಆಚೆಗೆ ರಾಜಕಾರಣವನ್ನು ಅಂಟಿಸಿಕೊಂಡಿಲ್ಲ.
ಆದರೆ, ಅಧಿಕಾರ ರಾಜಕಾರಣದಿಂದಲೇ ಪತ್ರಕರ್ತ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಿಗೆ ಆರ್ಥಿಕ ನೆರವು ನೀಡಲು ಅವರಿಗೆ ಸಿಗುತ್ತಿದ್ದ ಮಾಸಾಶನವನ್ನು 3 ಸಾವಿರ ರು.ನಿಂದ ಹಂತಹಂತವಾಗಿ 15 ಸಾವಿರ ರು.ಗೆ ತಲುಪುವಂತೆ ಮಾಡುವಲ್ಲಿ ಕೆ.ವಿ. ಪ್ರಭಾಕರ್ ಅವರ ಕಾಳಜಿ, ಶ್ರಮ ಸಾಕಷ್ಟಿದೆ.
ಮುಖ್ಯಮಂತ್ರಿ ಅವರ ಆರೋಗ್ಯ ಸಂಜೀವಿನಿ ಯೋಜನೆ ಚಾಲನೆ, ಗ್ರಾಮೀಣ ಪತ್ರಕರ್ತರ 3 ದಶಕಗಳ ಬೇಡಿಕೆಯಾದ ಉಚಿತ ಬಸ್ ಪಾಸ್ ನೀಡಿರುವುದು ಪತ್ರಕರ್ತ ಸಮುದಾಯಕ್ಕೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ವಿಧಿಸಲಾಗಿದ್ದ ಕಠಿಣ ಷರತ್ತುಗಳನ್ನು ಸರಳಗೊಳಿಸಿದ್ದರ ಹಿಂದೆ ಕೆ.ವಿ.ಪ್ರಭಾಕರ್ ಇದ್ದಾರೆ.ಪತ್ರಿಕಾ ವಿತರಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮಾಡುವಲ್ಲಿಯೂ ಪ್ರಭಾಕರ್ ಶ್ರಮವಿದೆ.








