ತೊಂಬತ್ತರ ದಶಕದ ಆರಂಭ, ನನ್ನೂರು ಕೋಲಾರದಲ್ಲಿ ಭೀಕರ ಕೋಮು ಗಲಬೆ! ಅನಿರ್ಧಿಷ್ಟಾವದಿ ಕರ್ಪ್ಯೂ! ಕ್ಷುಲ್ಲಕ ಕಾರಣಕ್ಕೆ ಭುಗಿಲೆದ್ದ ಬೆಂಕಿ!? ಹಾಗೆ ನೋಡಿದರೆ ಅದು ಕೋಮು ಗಲಭೆಗೆ ಕಾರಣವೇ ಆಗಬಾರದಿತ್ತು. ಮುಸ್ಲಿಂ ನಂತೆ ಕಾಣುತಿದ್ದ ಒಬ್ಬ ಹಿಂದೂ ಹುಡುಗನನ್ನು, ಕೋಮು ಪ್ರಚೋದನೆಗೆ ಒಳಗಾದ ಮತ್ತೊಬ್ಬ ಹಿಂದೂ ಹುಡುಗ ಇರಿದು ಕೊಂದ್ದು ಓಡಿಹೋಗಿದ್ದ. “ಹಿಂದೂವನ್ನು ಮುಸಲ್ಮಾನರು ಕೊಂದರು” ಎಂದು ಸ್ಥಳೀಯ ಮತಾಂಧ ಪತ್ರಿಕೆಗಳು ಸುಳ್ಳು ಸುದ್ದಿ ಬರೆದು ಪ್ರಚೋದಿಸಿದವು. ಇದ್ದಕ್ಕಿದ್ದಂತೆ ಕೋಲಾರ ಹತ್ತಿ ಉರಿಯತೊಡಗಿತು. ಮೂರು ದಿನದಲ್ಲಿ ಏಳು ಹೆಣ ಬಿದ್ದವು! ಸದ್ಯ ಆಗ ಈಗಿನಂತೆ ದೃಶ್ಯ ಮಾದ್ಯಮಗಳಿರಲಿಲ್ಲ.ಮತಾಂಧ ಪತ್ರಿಕೆಗಳು ಸತತವಾಗಿ ಇಟ್ಟ ಬೆಂಕಿಗೇ ಏಳು ಹೆಣ ಉರುಳಿದ್ದವು. ‘ಲಂಕೇಶ್ ಪತ್ರಿಕೆ’ಯ ವರದಿಗಾರನಾಗಿ ಎಲ್ಲಾ ‘ರಿಸ್ಕ್’ ಗಳನ್ನು ತೆಗೆದುಕೊಂಡು ಸತ್ತವರ ಮನೆಗಳಿಗೆ ಹೋದೆ,
ನನಗೆ ಲೆಕ್ಕ ಮತ್ತು ಸತ್ಯ ಎರಡೂ ಸಿಕ್ಕವು. ಏಳು ಜನರಲ್ಲಿ ಆರು ಜನ ಸತ್ತವರು ಮುಸ್ಲಿಮರು, ‘ಒಬ್ಬ ಹಿಂದು ಮತ್ತೊಬ್ಬ ಹಿಂದುವನ್ನು ಕೊಂದ’ ಎನ್ನುವುದನ್ನು ಬಿಟ್ಟರೆ ಮುಸ್ಲಿಮರು ಒಬ್ಬರನ್ನೂ ಕೊಂದಿರಲಿಲ್ಲ. ಆದರೆ ಅಂದು ಸ್ಥಳೀಯ ಕೋಮುದ್ವೇಶದ ಪತ್ರಿಕೆಗಳು “ಅಸಂಖ್ಯಾತ ಮಂದಿ ಹಿಂದುಗಳನ್ನು ಮುಸ್ಲಿಂರು ಮಾರಣಹೋಮ ಮಾಡಿದರು” ಎಂಬರ್ಥದಲ್ಲಿ ಬರೆದ ಸುಳ್ಳುಗಳು ಇನ್ನೂ ನನ್ನ ಕಣ್ಣಲ್ಲಿವೆ! ಈ ಸುಳ್ಳುಗಳಿಂದಾಗಿ ಆರು ಮಂದಿ ಮುಗ್ದರು ಪ್ರಾಣ ತೆತ್ತಿದ್ದರು. ನಾನು ಸತ್ತವರ ಹೆಸರುಗಳ ಪಟ್ಟಿ ಹಾಕಿ ವಿವರಗಳೊಂದಿಗೆ ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದೆ. ಜನ ಕುತೂಹಲದಿಂದ ಮುಗಿಬಿದ್ದು ಓದಿದರು, ಆಗಿನ ಯುವ ಜಿಲ್ಲಾಧಿಕಾರಿ ಡಿ.ವಿ.ಪ್ರಸಾದ್ ಹಾಗೂ ಯುವ ಎಸ್.ಪಿ. ಆಗಿದ್ದ ಕಿಶೋರ್ ಚಂದ್ರ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಜನರಿಗೆ ಸತ್ಯದರ್ಶನ ಮಾಡಿದ ಮೇಲೆ ಜನಕ್ಕೆ ವಾಸ್ತವ ಗೊತ್ತಾಯಿತು. ನಿಧಾನಕ್ಕೆ ಕೋಮು ಗಲಭೆ ಹತೋಟಿಗೆ ಬಂತು. ಈ ವರದಿ ಪೋಲಿಸರ ತನಿಖೆಗೂ ಸಹಾಯಕವಾಯಿತು.
ಇದೇ ರೀತಿಯ ಮಾಲೂರು ಗಲಭೆ, ಕ್ಯಾಲನೂರು, ಮುಳಬಾಗಿಲೇ ಮುಂತಾದ ಕಡೆ ನಡೆದ ಗಲಭೆಗಳ ಕುರಿತು ‘ಪತ್ರಿಕೆ’ಯಲ್ಲಿ ನೈಜ ವಿವರ ಬಂದ ಮೇಲೆ ಈ ನಿಷ್ಠುರ ವರದಿಗಳು ಜನಕ್ಕೆ ವಾಸ್ತವದ ಪರಿಚಯ ಮಾಡುವುದರೊಂದಿಗೆ ಪೋಲೀಸರ ತನಿಖೆಗೆ, ನ್ಯಾಯಾಂಗ ತನಿಖೆಗಳಿಗೂ ಸಹಾಯಕವಾಗುತಿದ್ದವು. ಕೋಮು ಗಲಬೆಗಳ ಪ್ರದೇಶಗಳು ಸಹಜ ಪರಿಸ್ಥಿತಿಗೆ ಬರಲು ಕಾರಣವಾಗುತ್ತಿದ್ದವು! ಇದೇ ರೀತಿ ಕಡಿದಾಳ್ ಶಾಮಣ್ಣ, ರೇಷ್ಮೆ, ತ್ಯಾಗರಾಜು, ಬಸವರಾಜು, ಬಾನು ಮುಷ್ತಾಕ್, ಸ್ಬಾಮಿ ಆನಂದ್, ಪಿ.ವಿ.ಮೋಹನ್, ಲಿಂಗಣ್ಣ ಸತ್ಯಂಪೇಟೆ, ವಿವೇಕಾನಂದ ತಾಂಡೇಲ ಥರದವರು ಪತ್ರಿಕೆಯಲ್ಲಿ ಬರೆದ ಕೋಮು ಗಲಬೆಗಳ ವಿಶ್ಲೇಷಣಾತ್ಮಕ ವರದಿಗಳು, ಆ ಸಂಧರ್ಭದ ಲಂಕೇಶರ ಟಿಪ್ಪಣೆಗಳು, ತೇಜಸ್ವಿ, ಚಂಪಾರವರ ಜಾತ್ಯಾತೀತತೆಗೆ ಸಂಭಂದಿಸಿದ ಬರಹಗಳು ಇಂದಿನ ಪತ್ರಕರ್ತರಿಗೆ ಪಾಠಗಳಾಗಬೇಕಿತ್ತು. ಅಂದಿನ ನಮ್ಮ ವರದಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಹರ್ಲಂಕರ್, ಗರುಡಾಚಾರ್, ಕಸ್ತೂರಿ ರಂಗನ್, ಕೋದಂಡರಾಮಯ್ಯ, ರೇವಣಸಿದ್ದಯ್ಯ, ಮರಿಸ್ವಾಮಿಯವರಂತಹ ಸೂಕ್ಷ್ಮಜ್ಙ ಪೋಲಿಸ್ ಅಧಿಕಾರಿಗಳಿದ್ದರು.
ಎನ್.ಟಿ.ಆರ್ ಸರ್ಕಾರದ ಪದಚ್ಯುತಿಯ ಸಂಧರ್ಭದಲ್ಲಿ ಆಂಧ್ರದ ರಾಜಕಾರಣ ಕೋಮು ದಳ್ಳುರಿಗೆ ತಿರುಗಿ ಹೈದರಾಬಾದ್ ಕೋಮು ಗಲಬೆಗಳಿಂದ ದಗದಗನೆ ಉರಿಯುತಿದ್ದ ಪ್ರಕ್ಷುಬ್ಧ ಪ್ರದೇಶದಲ್ಲಿ ಜೀವ ಪಣಕ್ಕಿಟ್ಟು ಓಡಾಡಿ, ನಾನು ಮತ್ತು ಸಿರೂರ್ ಹನುಮಂತ ರೆಡ್ಡಿ(ಈಗ ಅಮೆರಿಕದಲ್ಲಿದ್ದಾರೆ) ಮಾಡಿದ ವರದಿಗಳನ್ನು ಅಂದಿನ ಇಂಗ್ಲೀಷ್ ಮಾದ್ಯಮಗಳು ಯಥಾವತ್ತಾಗಿ ಕಾಪಿ ಮಾಡುತಿದ್ದವು.
ಇದನ್ನೆಲ್ಲ ಯಾಕೆ ಬರೆಯುತಿದ್ದೇನೆಂದರೆ, ಮಾದ್ಯಮವೊಂದಕ್ಕೆ ಸಾಮಾಜಿಕ ಜವಾಬ್ದಾರಿ ಇದ್ದು, ಅದು ವಸ್ತುನಿಷ್ಠವಾಗಿ,ಜಾತ್ಯಾತೀತವಾಗಿ, ಮತಾತೀತವಾಗಿ, ನಿಷ್ಠುರ ಸತ್ಯಗಳನ್ನು ಬರೆದರೆ ಸರ್ಕಾರಕ್ಕೆ ಮತ್ತು ಪೋಲಿಸರಿಗೆ ಸತ್ಯದರ್ಶನವಾಗಿ ಸಮಾಜದಲ್ಲಿ ನೆಲೆಸಿರುವ ಅಶಾಂತಿ ಕೊನೆಗೊಂಡು ಶಾಂತಿ ಮೂಡಲು ಮಾದ್ಯಮವೇ ಕಾರಣವಾಗಬಲ್ಲದು ಎನ್ನಲಿಕ್ಕೆ. ಅದಕ್ಕೆ, ಇಂತದ್ದನ್ನೆಲ್ಲ ಕಂಡಾಗ ಸತ್ಯ,ನಿಷ್ಟುರತೆಗಳನ್ನು ಇಷ್ಟಪಡುವ ಜನ ತಮಗೆ ಅರಿವಿಲ್ಲದೆಯೇ “ಲಂಕೇಶ್ ಇರಬೇಕಿತ್ತು..” ಎಂದುಸಿರುತ್ತಾರೆ! ಅಂದು ಇದೇ ಡಿಜೆ ಹಳ್ಳಿ, ಟ್ಯಾನರಿ ರಸ್ತೆಯ ಬಗ್ಗೆ ನಮ್ಮ ಟಿ.ಕೆ.ತ್ಯಾಗರಾಜ್ ಬರೆದ ವರದಿ ಇಂದಿಗೂ ಅಕ್ಷರಶಃ ಜೀವಂತವಾಗಿದೆ, ಉಸಿರಾಡುತ್ತಿದೆ!
ಡಿಜೆ ಹಳ್ಳಿ, ಕೆಜೆ ಹಳ್ಳಿ ಸುತ್ತಮುತ್ತಲು ನಡೆದ ಗಲಬೆಗೆ ಒಂದು ವಾರವಾಯಿತು. ಅಲ್ಲಿ ಸುಟ್ಟಬೆಂಕಿ ಬೂದಿಯಾಗಿ, ಶುದ್ದವಾಗಿ, ಇನ್ನೇನು ಹಳೆಯದಾಗಲು ಬರುತ್ತಿದೆ. ಅಲ್ಲಿನ ಸ್ಥಳೀಯ ಬಡ ಜನ ಮತ್ತೇ ತನ್ನ ದೈನಂದಿನ ಅನ್ನ ಗಳಿಕೆಯ ಕಾಯಕದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತೊಡಗಿದ್ದಾರೆ. ಸರ್ಕಾರ ನೊಂದವರಿಗೆ ಸಾಂತ್ವನ ನೀಡುವ ಹಾದಿಯಲ್ಲಿದ್ದಂತೆಯೇ ತಪ್ಪಿತಸ್ತರನ್ನು ಬಂದಿಸಿರುವ ಪೋಲೀಸರು ತನಿಖೆ ಮುಂದುವರೆಸಿದ್ದಾರೆ. ರಾಜಕೀಯ ಪಕ್ಷಗಳು ಸಾಕಷ್ಟು ಕೆಸರೆರಿಚಿಕೊಂಡು ಸುಸ್ತಾಗಿ ತಣ್ಣಗಾಗುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿವೆ. ಆದರೆ ದೃಷ್ಯ ಮಾದ್ಯಮಗಳು ಮಾತ್ರ ಎಡೆಬಿಡದೆ ವಿಷ ಕಕ್ಕುತ್ತಿವೆ! ಇವರ ನೆತ್ತರದಾಹಕ್ಕೆ, ದಹಿಸುವ ಮನಸ್ಸಿಗೆ ಇನ್ನೂ ನೆಮ್ಮದಿ ಸಿಕ್ಕಂತಿಲ್ಲ! ಇವರ ವಿಕೃತ ಕಲ್ಪನೆಗಳಿಗೆ, ಇವರ ಜೀವವಿರೋಧಿ ಆಶಯಗಳಿಗೆ, ಇವರ ಹಿಡನ್ ಅಜೆಂಡಾಗಳಿಗೆ ಬೆಂಕಿಯದೇ ರೆಖ್ಖೆ ಮೂಡಿ! ಆ ದಹದಹಿಸುವ ರೆಖ್ಖೆಗಳಿಂದಲೇ ಮತ್ತೆ ಮತ್ತೆ ದ್ವೇಷ ಬಿತ್ತುವ, ಬೆಂಕಿ ಹರಡುವ ಕೆಲಸ ಅವ್ಯಾಹತವಾಗಿ ನಡೆದೇ ಇದೆ!! ಈ ಕೇಡನ್ನೇ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮುಂದುವರೆಸುತ್ತಾ ಅಕ್ಷರದ ಹಾದರವನ್ನು ವಿಜೃಂಬಿಸುತಿದ್ದಾರೆ.! ಕೇವಲ ಒಂದು ರಾತ್ರಿ ನಡೆದ ಬೆಂಕಿಯ ವಿದ್ಯಮಾನಗಳನ್ನೇ ಮಾದ್ಯಮಗಳು ವಾರಗಟ್ಟಳೆ ಇಷ್ಟೆಲ್ಲಾ ವಿಜೃಂಬಿಸುತ್ತಾ ತೋರಿಸುತಿದ್ದಾರೆಂದರೆ, ಗುಜರಾತಿನ ನಿರಂತರ ಬೆಂಕಿ, ಲೂಟಿ, ದಾಂದಲೆ, ನೆತ್ತರದಾಹದ ನರಮೇದವನ್ನು ಅದೆಷ್ಟು ದಶಕಗಳ ಕಾಲ ತೋರಿಸಬೇಕಿತ್ತು!!
ಸುಟ್ಟ ದೃಷ್ಯಗಳನ್ನೇ ಮತ್ತೆಮತ್ತೆ ವಾಕರಿಕೆ ಬರುವಂತೆ ತೋರಿಸುತ್ತಾ, ಕಪೋಲಕಲ್ಪಿತ ಕತೆಗಳನ್ನೇ ಮತ್ತೆ ಮತ್ತೆ ಒದರುತ್ತಾ, ಯಾರೋ ಅನಕ್ಷರಸ್ಥ ಹೆಣ್ಣು ಮಗಳೊಬ್ಬಳು ತಿಂಗಳು ಮತ್ತು ವರ್ಷಕ್ಕೆ ವ್ಯತ್ಯಾಸವರಿಯದೆ ಬಾಯ್ತಪ್ಪಿಯೋ ಅಥವಾ ಬಾಷೆಯ ತೊಡಕಿನಿಂದಲೋ ಆಡಿದ ಮಾತುಗಳನ್ನು ಗೇಲಿ ಮಾಡುತ್ತಾ, ವಿಕಾರವಾಗಿ ವ್ಯಂಗ್ಯವಾಡುತ್ತಾ ತಮ್ಮ ವಿಕೃತ ಮನಸ್ಥಿತಿಯನ್ನು ಮೆರೆಯುತಿದ್ದಾರೆ.
ನಮ್ಮ ಊರಿನಲ್ಲಿ ಕೊತ್ತಮೀರಿಯನ್ನು ‘ಕೊತ್ತಮೀರಿ’ ಎಂತಲೇ ಕರೆಯುತಿದ್ದದ್ದು, ಊರು ಬಿಟ್ಟು ಬೆಂಗಳೂರಿಗೆ ಬಂದ ನನ್ನಂತವರು ಬೆಂಗಳೂರಿನ ‘ನಾಗರೀಕ’ರಾಗಿ ನಲವತ್ತು ವರ್ಷವಾಯಿತು! ಈಗಲೂ ನಾವು ಕೊತ್ತಮೀರಿಯನ್ನು ‘ಕೊತ್ತಮೀರಿ’ ಎಂತಲೇ ಕರೆಯುವುದು! ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೋದಾಗ ಫ್ರೆಶ್ ಕೊತ್ತಮೀರಿಯನ್ನು ನನಗೆ ಕೊಡುವ ಖಾಸಿಂ ಸಾಬಿ, ಮದ್ಯರಾತ್ರಿ ಒಂದು ಗಂಟೆಗೋ, ಎರಡು ಗಂಟೆಗೋ ಎದ್ದು ಮಾರ್ಕೆಟ್ಟಿಗೆ ಹೋಗಿ ಕೊತ್ತಮೀರಿ ತಂದಿರುತ್ತಾನೆ. ಇದನ್ನೆಲ್ಲಾ ನೋಡಲು, ಗ್ರಹಿಸಲು ಮನುಷ್ಯನಾದವನಿಗೆ ಪಂಚೇಂದ್ರಿಯಗಳು ಸದಾ ಜಾಗೃತವಾಗಿರಬೇಕೆ ಹೊರತು ಪಂಚಾಂಗಗಳಲ್ಲ!
ಅಂದು ಅಲ್ಲಿ ಒಬ್ಬಿಬ್ಬರ ನಡುವೆ ಕೋಮುದ್ವೇಶದಿಂದ ಹೊತ್ತಿದ ಕಿಡಿ ಉರಿದು ಕೆನ್ನಾಲಿಗೆಯಾಗಿ ಮುಕ್ತಾಯವಾದದ್ದು ಅನುದ್ದೇಶದ ದೊಂಬಿ ಗಲಬೆಯಿಂದ ಅಷ್ಟೇ! ‘ದೊಂಬಿ’ ಎಂದರೆ ಮುಗಿಯಿತು, ಅದಕ್ಕೆ ಯಾವುದೇ ಧರ್ಮ, ಜಾತಿ ಎಂತಲೇ ಆಗಬೇಕಿಲ್ಲ. ಆ ಜಾಗದಲ್ಲಿ ವಿದ್ಯಾರ್ಥಿಗಳಿರಬಹುದು, ರೈತ, ಕಾರ್ಮಿಕರಿರಬಹುದು, ಯಾವುದೇ ಜಾತಿವರ್ಣಕ್ಕೆ, ವಿಭಾಗಕ್ಕೆ ಸೇರಿದ ಒಂದೇ ಗುಂಪಿನವರಾಗಿರಬಹುದು. ಕೆಲವೊಮ್ಮೆ ಇದರ ಹಿನ್ನೆಲೆಯಲ್ಲಿ ಯಾವುದೋ ರಾಜಕಾರಣ ಅಥವಾ ಧರ್ಮಕಾರಣವೂ ಇಲ್ಲದಿಲ್ಲ, ಅಂತೆಯೇ ಕೆಲವೊಮ್ಮೆ ಇದನ್ನು ಯಾರೋ ಸ್ವಾರ್ಥಕ್ಕಾಗಿ, ದುರುದ್ದೇಶಪೂರಕವಾಗಿ ಉದ್ರೇಕಿಸಿರಲೂಬಹುದು. ಮಿಕ್ಕಂತೆ ಬಹುತೇಕ ಇಂತ ದೊಂಬಿಗಳು ದುರುದ್ದೇಶಪೂರಕವಾಗಿ ಇರುವುದಿಲ್ಲ, ಆಕಸ್ಮಿಕವಾಗಿ ಆಗಿಹೋಗಿರುತ್ತವೆ. ಇಲ್ಲಿ ‘mob psychology’ ಮತ್ತು ಇಲ್ಲಿ ನೆರೆದಿರುವ ನೊಂದ ಜನರ ‘frustration’ ಕೂಡ ಇದಕ್ಕೆ ಕಾರಣವಾಗಿರಬಹುದು. ದೊಂಬಿಯ ಮನಸ್ಥಿತಿ ಯನ್ನು ಸಾಮಾಜಿಕ ಮನಶಾಸ್ತ್ರಜ್ಞರು ಅನೇಕ ವೈಜ್ಞಾನಿಕ ಕಾರಣಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಅಂತೆಯೇ ಸಾಮಾನ್ಯ ಮನುಷ್ಯನೊಬ್ಬನ ವಿರುದ್ದ ಸರ್ಕಾರಗಳು, ಅಧಿಕಾರಶಾಹಿ, ರಾಜಕಾರಣಿಗಳು, ಉಳ್ಳವರು ಮಾಡುವ ದೌರ್ಜನ್ಯವನ್ನು ಎದುರಿಸಲಾರದೆ, ಸದರಿ ಮನುಷ್ಯನ ಅಸಹಾಯಕತೆ, ಸುಪ್ತ ಆಕ್ರೋಶ, ಹೇಡಿತನಗಳು ಕೂಡ ಇಂತಹ ದೊಂಬಿಗಳ ಸಂಧರ್ಭದಲ್ಲಿ ಜಾಗೃತಗೊಂಡು ಸೇಡು ತೀರಿಸಿಕೊಳ್ಳುತ್ತವೆ.
ಸದರಿ ಪ್ರಕರಣದಲ್ಲಿ ಮಾದ್ಯಮಗಳು ನಿರ್ದಾಕ್ಷಿಣ್ಯವಾಗಿ ಇಡೀ ಮುಸ್ಲಿಂ ಸಮುದಾಯವನ್ನೇ ಕಟಕಟೆಗೆ ನಿಲ್ಲಿಸಿಬಿಟ್ಟಿವೆ! ಮಾದ್ಯಮಗಳು ಪೂರ್ವಾಗ್ರಹದಿಂದ ಕೂಡಿದಾಗ, ಮತಾಂಧವಾದಾಗ, ಅಮಾನುಷವಾದಾಗ, ಹೃದಯಹೀನವಾದಾಗ ಹೀಗಾಗುತ್ತವೆ. ಆಶ್ಚರ್ಯವೆಂದರೆ ಮಾದ್ಯಮವೊಂದರಲ್ಲಿ ಜೈನ ಧರ್ಮಕ್ಕೆ ಸೇರಿದ ಆ್ಯಂಕರನೊಬ್ಬ ಸರಾಗವಾಗಿ ಹಿಂದು ಮತ್ತು ಮುಸ್ಲಿಮರನ್ನು ಮುಖಾಮುಕಿಯಾಗಿಸಿ ಕಾದಾಟಕ್ಕೆ ತಂದಿಟ್ಟು ತಾನು ಮಾತ್ರ ಮಜಾ ಮತ್ತು ಲಾಭ ನೋಡುತ್ತಾನೆ!! ದುರಂತವೆಂದರೆ ಈ ಷಡ್ಯಂತ್ರ ಅಲ್ಲಿ ಆವೇಶದ ವಾದದಲ್ಲಿ ತೊಡಗಿದ ಹಿಂದುಮುಸ್ಲಿಂಗಳಿಗಿಬ್ಬರ ಅರಿವಿಗೂ ಬಂದಿರುವುದಿಲ್ಲ! 
ಮೊನ್ನೆಯ ಗಲಭೆ ಸಂಧರ್ಭದಲ್ಲಿ ಅಂತಹ ಹುಚ್ಚುದೊಂಬಿಯ ನಡುವೆಯೂ ಅಲ್ಲಿನ ಆಂಜನೇಯಸ್ವಾಮಿ ದೇವಸ್ಥಾನವನ್ನು ರಕ್ಷಿಸಿದ್ದು. ಪೈಗಂಬರ್ ವಿರುದ್ದ ಪೋಸ್ಟ್ ಹಾಕಿದ ಪಾಪಿಯ ತಾಯಿಯನ್ನೇ ಪ್ರಾಣಾಪಾಯದಿಂದ ಪಾರುಮಾಡಿದ್ದು ಕೂಡ ಮುಸ್ಲಿಂ ಹುಡುಗರೇ ಎಂಬುದನ್ನು ಮಾದ್ಯಮದ ದ್ವೇಶಕೋರರು ಅಪ್ಪಿತಪ್ಪಿಯೂ ಪ್ರಮುಖವಾಗಿ ಹೇಳುವುದಿಲ್ಲ! ಅವರಿಗೆ ಬೆಂಕಿ ಬೇಕು, ಉರಿಯುವ ಬಡವರ ಮನೆಯ ಬೆಂಕಿಯಲ್ಲಿ ಇವರು ಅನ್ನ ಬೇಯಿಸಿ, ಉಂಡು, ಅವರ ಹೆಂಡತಿಗೆ ರೇಷ್ಮೆ ಸೀರೆ, ಅವರ ಮಕ್ಕಳ ಅಂಡಿಗೆ ಬಣ್ಣಬಣ್ಣದ ಚೆಡ್ಡಿ ಹೊಲಿಸಿ ಮೆರೆಯಬೇಕಲ್ಲವೆ?
ಇನ್ನು ಸದಾ ಹಣೆಯಲ್ಲಿ ಕಾಸಗಲ ಕುಂಕುಮ ಇಟ್ಟುಕೊಂಡಿರುವ ದೈವಭಕ್ತ ಅಖಂಡ ಶ್ರೀನಿವಾಸಮೂರ್ತಿ ಬೋವಿ ಸಮುದಾಯಕ್ಕೆ ಸೇರಿದ್ದು, ಆತ ಮುಗ್ದ ಮತ್ತು ಒಳ್ಳೆಯವರು ಎನ್ನುತ್ತಾರೆ, ಆದರೆ ಆತ ಅಲ್ಲಿ ಅನಾಯಾಸವಾಗಿ ಶಾಸಕನಾದದ್ದು ಅಂಬೇಡ್ಕರ್ ಕೊಟ್ಟ ಮೀಸಲಾತಿಯಿಂದ ಮತ್ತು ಮುಸ್ಲಿಮರು ಕೊಟ್ಟ ಮತಗಳಿಂದ. ಆತನ ಮತ್ತು ಅವರ ಕುಟುಂಬಕ್ಕೆ ಅಂಬೇಡ್ಕರ್ ಅರಿವು, ಪ್ರಜ್ಞೆ ಮತ್ತು ಕನಿಷ್ಠ ನಿಯತ್ತು ಇದ್ದಿದ್ದರೆ ಇಂತಹ ದುಷ್ಕೃತ್ಯಗಳೇ ನಡೆಯುತ್ತಿರಲಿಲ್ಲ! ಯಾಕೆಂದರೆ ಅಂತಹ ಅಂಬೇಡ್ಕರ್ ಪ್ರಜ್ಞೆ ಇರುವಂತ ಕುಟುಂಬದಲ್ಲಿ ನವೀನ್ ಅಂತ ಕೋಮುವಾದಿ ಹುಟ್ಟುತ್ತಲೇ ಇರಲಿಲ್ಲ!
ಇನ್ನು ಜಮೀರ್, ರಿಸ್ವಾನ್, ರೋಷನ್ ಬೇಗ್, ಸಿ.ಎಂ.ಇಬ್ರಾಹಿಂ ರಂತಹ ಮುಸ್ಲಿಂ ನಾಯಕರನೇಕರು ಇಲ್ಲಿನ ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುತಿದ್ದಾರೆ ಎಂಬ ಮಾತಿದೆ. ದುರಂತವೆಂದರೆ ಇವರೆಲ್ಲ ಕಾಂಗ್ರೆಸಿನಲ್ಲಿ ಇರುವ ಮತ್ತು ಕಾಂಗ್ರೆಸಿನಿಂದ ಬಂದ ನಾಯಕರೆ. ಇವರ ಮತ್ತು ಬಡ ಮುಸ್ಲಿಮರ ಸಂಭಂದ ಕೇವಲ ಓಟು ಹಾಕುವವನ ಮತ್ತು ಓಟು ಪಡೆಯುವವನ ಸಂಭಂದವಕ್ಕೆ ಸೀಮಿತವಷ್ಟೇ! ಮಿಕ್ಕಂತೆ ಇಂತಹ ಸಂಧರ್ಭಗಳಲ್ಲಿ ‘ಮುಸ್ಲಿಂ ನಾಯಕರು’ ಎಂದು ಒಂದಷ್ಟು ಮಾದ್ಯಮದ ಕ್ಯಾಮೆರಾಗಳ ಮುಂದೆ ಓಡಾಡುವುದು. ಆದರೆ ಡಿಜೆ ಹಳ್ಳಿ, ಕೆಜೆ ಹಳ್ಳಿ, ಟ್ಯಾನರಿ ರಸ್ತೆಯ ಸುತ್ತಲಿನ ಮುಸ್ಲಿಮರ ಬಡತನ, ಅನಕ್ಷರತೆ, ದಾರಿದ್ರ್ಯತೆ ಗಳನ್ನು ನೋಡಿದರೆ ಇವರ್ಯಾರಿಗೂ ಆ ಬಡವರನ್ನು ಪ್ರತಿನಿಧಿಸುವ ನೈತಿಕತೆಯೇ ಇಲ್ಲ! ದೇಶದ ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅದ್ಯಯನ ಮಾಡಿದ ರಾಜೇಂದ್ರ ಸಾಚಾರ್ ವರದಿಯಾಗಲಿ ಅಥವಾ ರಂಗನಾಥ ಮಿಶ್ರಾ ವರದಿಯನ್ನಾಗಲಿ ಜಾರಿ ಮಾಡಬೇಕೆಂದು ಈ ನಾಯಕರು ತಮ್ಮ ಪಕ್ಷದಲ್ಲಿ ಅಥವಾ ತಮ್ಮ ಪಕ್ಷ ಆಡಳಿತದಲ್ಲಿರುವ ಸರ್ಕಾರಗಳಲ್ಲಿ ದನಿಯೆತ್ತಿದ ದಾಖಲೆಗಳೇ ಇಲ್ಲ! ಈಗಲೂ ಈ ಸಮುದಾಯಕ್ಕೆ ಬೇಕಿರುವುದು ನಸೀರ್ ಸಾಬ್, ಅಜೀಜ್ ಸೇಠ್, ಮೊಹಿಯುದ್ದೀನ್, ಜಗಳೂರು ಇಮಾಮ್ ಸಾಬ್ ಮತ್ತು ಶಿವಮೊಗ್ಗದ ಇಬ್ರಾಹಿಂ ಸಾಹೇಬರಂತ ನಾಯಕರು.
ಸದಾ ಸಾಮಾಜಿಕ ಜಾಲತಾಣದಲ್ಲಿ ಜಾಗೃತರಾಗಿರುವ ದುಬೈ, ಅಬುದಾಬಿ, ಬೆಹ್ರೇನ್ ನಂತಹ ಗಲ್ಫ್ ದೇಶಗಳಲ್ಲಿ ಕುಂತು ‘ಜಾತ್ಯಾತೀತತೆ’ ಬೋದಿಸುತ್ತಾ ಮಾದ್ಯಮಗಳನ್ನು ಟೀಕಿಸುವವರಿಗೂ ಇಡೀ ಮುಸ್ಲಿಮರಿಗೂ ನಮ್ಮ ಡಿಜೆ ಹಳ್ಳಿ, ಕೆಜೆ ಹಳ್ಳಿಗಳ ಗ್ಯಾರೇಜುಗಳಲ್ಲಿ, ಮಾಂಸದ ಅಂಗಡಿಗಳಲ್ಲಿ, ಗುಜರಿಗಳಲ್ಲಿ ಕೆಲಸ ಮಾಡುವ ಬಡ ಮುಸ್ಲಿಮರಿಗೂ ಯಾವುದೇ ಸಂಭಂದವಿಲ್ಲ. ಇವರು ಮನಸ್ಸು ಮಾಡಿ ತಲೆಗೆ ಹತ್ತು ಡಾಲರ್ ಹಾಕಿಕೊಂಡು ಒಂದು ಪರ್ಯಾಯ ಮಾಧ್ಯಮವನ್ನು ನಿರ್ಮಿಸಬಹುದಿತ್ತು ಆದರೆ ಇವರಿಗೆ ಯಾವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮನಸ್ಸೇ ಇಲ್ಲ.
ಮುಸ್ಲಿಂ ಕೇಂದ್ರಿತ ಪಿ.ಎಫ್.ಐ. ಮತ್ತು ಎಸ್ಡಿಪಿಐ ಸಂಘಟನೆಗಳ ಬಗ್ಗೆ ಇಂತಹ ಸಂಧರ್ಭದಲ್ಲಿ ಸಹಜವಾಗಿಯೇ ಚರ್ಚೆಗೆ ಬರುತ್ತವೆ. ಈ ಸಂಘಟನೆಗಳ ಕುರಿತು ಚರ್ಚೆ ಬಂದಾಗಲೆಲ್ಲಾ ಮಾದ್ಯಮಗಳು ಇವನ್ನು ಟೆರರಿಸ್ಟ್ ಅಥವಾ ಭಯೋತ್ಪಾದಕ ಸಂಘಟನೆಗಳೆಂದು ಭೂತಗನ್ನಡಿ ಹಿಡಿದು ವಿಜೃಂಬಿಸುತ್ತವೆ. ಒಂದಷ್ಟು ಬೆರಳೆಣಿಕೆಯಷ್ಟು ಸಣ್ಣಪುಟ್ಟ ಅಪವಾದಗಳನ್ನು ಬಿಟ್ಟರೆ ಈವೆರೆಗೂ ಈ ಸಂಘಟನೆಗಳು ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ್ದಕ್ಕೆ ಇವರ ವಿರುದ್ಧ ಒಂದೇ ಒಂದು ನ್ಯಾಯಾಲಯದ ಗಂಭೀರ ಅಪರಾಧದ ತೀರ್ಪಿಲ್ಲ! ಇವು ಮುಸ್ಲಿಂ ಸಂಘಟನೆಗಳೆಂಬ ಏಕೈಕ ಕಾರಣಕ್ಕೆ ಮಾದ್ಯಮಗಳು ಇವರ ಮೇಲೆ ಆರೋಪ ಹೊರೆಸುವುದು, ಜನರನ್ನು ನಂಬಿಸುವುದು ಸುಲಭ! ಜನಸಾಮಾನ್ಯರಿರಲಿ ನಮ್ಮ ‘ಪ್ರಗತಿಪರ’ರೂ ಕೂಡ ಇಂತಹ ಮಾದ್ಯಮಗಳ ಆರೋಪಗಳನ್ನು ಪ್ರಶ್ನಿಸದೆ ನಂಬಿ ಇವರನ್ನು ದೂರುತ್ತಾ ತಮ್ಮನ್ನು ತಾವು ಜಾತ್ಯಾತೀತರು, ಪ್ರಗತಿಪರರು ಎನಿಸಿಕೊಂಡು ಸಂತೋಷ ಪಡುತ್ತಾರೆ!

ಪಿ.ಎಫ್.ಐ. ಮತ್ತು ಎಸ್ಡಿಪಿಐ ಸಂಘಟನೆಗಳು ತಲೆ ಎತ್ತಿದ ನಂತರ, ನಿರಂತರವಾಗಿ ಹಲ್ಲೆಗೆ ಒಳಗಾಗುತ್ತಿದ್ದು ಸರ್ಕಾರದ, ಪೋಲೀಸರ ಯಾವ ರಕ್ಷಣೆಯೂ ಇಲ್ಲದೆ ಅಸಹಾಯಕರಾಗಿದ್ದ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯಕ್ಕೆ ದೈರ್ಯ ಮತ್ತು ಸ್ಥೈರ್ಯ ಬಂದಿದ್ದನ್ನು ಯಾರೂ ಅಲ್ಲಗೆಳೆಯಲಾರರು. ಈಚಿನ ಜಲಪ್ರಳಯಗಳು, ಕರೋನ ಸಂಧರ್ಭದಲ್ಲಿ ಈ ಎರಡೂ ಸಂಘಟನೆಗಳು ಜಾತಿಧರ್ಮಗಳನ್ನು ನೋಡದೆ ಮಾಡಿದ ಜನಸೇವೆ ಸಾಟಿಯಿಲ್ಲ! ಇಂತಹ ಕಾರ್ಯಗಳನ್ನು ಗಮನಿಸದಿದ್ದರೆ ನಾವು ಕೃತಘ್ನರಾಗುತ್ತೇವೆ. ದುರಂತವೆಂದರೆ ಎಸ್.ಡಿ.ಪಿ.ಐ ಅಂತಹ ಮುಸ್ಲಿಂ ತಳಹದಿ ಇರುವ ಪಕ್ಷ ಇಲ್ಲಿನ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿ, ಅಲೆಮಾರಿಗಳನ್ನು ಒಳಗೊಳ್ಳಲೇ ಇಲ್ಲ!? ಈ ಕಾರಣಕ್ಕೆ ಈ ಪಕ್ಷ ಕೇವಲ ಮುಸ್ಲಿಮರ ಪಕ್ಷವಾಗಿಯೇ ಉಳಿದುಬಿಟ್ಟಿತು ಎನ್ನುವುದನ್ನು ಬಿಟ್ಟರೆ ಇದು ಮುಖ್ಯವಾಹಿನಿಯ ಪಕ್ಷವಾಗುವತ್ತ ಹೊರಡಲೇ ಇಲ್ಲ!
ಇನ್ನು ಆರೆಸೆಸ್ ಇಲ್ಲಿ ಹೇಗೆ ಪಾಲ್ಗೊಂಡಿರಬಹುದು? ಮೇಲ್ನೋಟಕ್ಕೆ ಇದರ ಹೆಜ್ಜೆ ಗುರುತುಗಳು ಸಿಗುವುದು ಕಷ್ಟ! ನಾನು ಬಿಜೆಪಿಯನ್ನು ಕಾಂಗ್ರೆಸ್ ನೊಂದಿಗೆ ಒಂದು ರಾಜಕೀಯ ಪಕ್ಷವನ್ನಾಗಿ ಇಟ್ಟು ನೋಡುವುದೇ ಇಲ್ಲ!? ಆಶ್ಚರ್ಯವೆಂದರೆ ಬಿಜೆಪಿಗೆ ತನ್ನ ಸ್ವಂತದ್ದು ಎನ್ನಲಾದ ಯಾವುದೇ ಸಾಮಾಜಿಕ, ರಾಜಕೀಯ ಕಾರ್ಯಕ್ರಮ ಇರುವುದಿಲ್ಲ. ಇದು ಆರೆಸೆಸ್ ಸೂಚಿಸಿದ್ದನ್ನು ಮಾಡುತ್ತದೆ ಅಷ್ಟೇ! ಆದ್ದರಿಂದ ಇಲ್ಲಿ ಬಿಜೆಪಿಯ ಕೈವಾಡ ಖಂಡಿತ ಇರುವುದಿಲ್ಲ. ಆರೆಸೆಸ್ ತಣ್ಣಗೆ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಒಂದು ಮೊಳಕೆ ಹೂತು ಅದು ಬಲಿಯುವುದನ್ನು ನೋಡುತ್ತಾ, ಸಂಧರ್ಭಕ್ಕಾಗಿ ಕಾಯುತ್ತಾ ಕೂರುತ್ತದೆ. ಆರೆಸೆಸ್ ಸುಮಾರು ತೊಂಬತ್ತು ವರ್ಷಗಳ ಹಿಂದೆ ತನ್ನ ಮೂರು ಪರ್ಸೆಂಟ್ ಜನರ ಹಿತದೃಷ್ಟಿಯಿಂದ ಒಂದು ಪೈರು ನೆಟ್ಟಿತು, ಅದಕ್ಕೆ ಹಿಂದು, ಹಿಂದುತ್ವ, ರಾಷ್ಟ್ರೀಯತೆ, ಭಾರತೀಯತೆ ಮುಂತಾಗಿ ಹೆಸರಿಡುತ್ತಾ ಹೆಮ್ಮರವಾಗಿ ಬೆಳೆಯಿತು ಆದರೆ ಅದರ ಮೂರು ಪರ್ಸೆಂಟ್ ಹಿತಚಿಂತನೆಯ ಅಜೆಂಡವನ್ನು ಬದಲಿಸಲೇ ಇಲ್ಲ.
ಆರೆಸೆಸಿಗೆ ದೇಹವಿದೆ, ದಷ್ಟಪುಷ್ಟ ಕೈಕಾಲುಗಳಿವೆ, ಚಕಿತಗೊಳಿಸುವಂತಹ ಅಂಗಾಂಗಳಿವೆ. ತೀಕ್ಷ್ಣವಾದ ಮೆದುಳೂ ಇದೆ. ಆದರೆ ಇದಕ್ಕೆ ಹೃದಯವೊಂದಿದ್ದರೆ ಇದು ಇಡೀ ಭಾರತೀಯ ದಲಿತ, ಅಲ್ಪಸಂಖ್ಯಾತ, ಹಿಂದುಳಿದವರನ್ನು ಬಾಚಿ ತಬ್ಬಿಕೊಂಡುಬಿಡುತಿತ್ತು ಸ್ಪೃಶ್ಯ ಸಮುದಾಯದ ನಾಯಕನೊಬ್ಬ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸಿನಲ್ಲಿರಲು ಹೇಗೆ ಸಾದ್ಯ? ಆರೆಸೆಸ್ ಇಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಇಲ್ಲಿನ ಹಿಂದೂ ಭಾವುಕತೆಯನ್ನು ಇದೊಂದೇ ಘಟನೆಯಿಂದ consolidate ಮಾಡಹೊರಟಿತು. ಇನ್ನು ಮುಂದಿನ ರಾಜಕಾರಣ ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ!? ಇಲ್ಲಿನ ಬಹುಸಂಖ್ಯಾತ ಮುಸ್ಲಿಂ ಮತಗಳು ಕಾಂಗ್ರೆಸ್ ಮತ್ತು ಎಸ್ಡಿಪಿಐ ನಡುವೆ ಹಂಚಿಹೋಗುತ್ತವೆ. ಹಿಂದು ಮತಗಳು ಕ್ರೋಡೀಕರಣಗೊಂಡು ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರ ಬಿಜೆಪಿಯ ಪಾಲಾದರೂ ಆಶ್ಚರ್ಯವಲ್ಲ..!
ಇಂತವನ್ನೆಲ್ಲ ಯಾವ ಮುಲಾಜು ಇಲ್ಲದೆ, ಯಾರ ಹಂಗೂ ಇಲ್ಲದೆ ಎಳೆಎಳೆಯಾಗಿ ತೆರೆದಿಡುತಿದ್ದದ್ದು ಲಂಕೇಶರ ‘ಲಂಕೇಶ್ ಪತ್ರಿಕೆ’. ಇದು ನಿಜ ಅರ್ಥದ ಜಾಣಜಾಣೆಯರ ಪತ್ರಿಕೆ ಯಾಗಿತ್ತು, ಆದ್ದರಿಂದಲೇ ‘ಕೊತ್ತಮೀರಿ’ ರಾತ್ರಿ ಒಂದು ಗಂಟೆಗೆ ಎಲ್ಲಿ ಸಿಗುತ್ತದೆ ಎಂಬ ಅರಿವಿರುವ ಪತ್ರಿಕೆ ಅದಾಗಿತ್ತು, ಅನಕ್ಷರಸ್ಥ, ಮುಗ್ದ ಮುಸ್ಲಿಂ ಹೆಣ್ಣುಮಗಳ ಬಾಯಲ್ಲಿ ತಿಂಗಳು ವರ್ಷವಾಗುವ ವ್ಯತ್ಯಾಸದ ಹೃದಯವಂತಿಕೆಯ ಪ್ರಜ್ಞೆ ಅದಕ್ಕಿತ್ತು. ನಿಜಕ್ಕೂ ಲಂಕೇಶ್ ಪತ್ರಿಕೆ ಇಲ್ಲದ್ದು ಇಂದು ಈ ನಾಡಿನಲ್ಲಿ ಒಂದು ಅಗಾದ ಶೂನ್ಯವನ್ನು ಆವರಿಸಿದಂತಿದೆ.
– ಸಿ.ಎಸ್.ದ್ವಾರಕಾನಾಥ್
ಖ್ಯಾತ ಚಿಂತಕರು








