ಅಪ್ಪನ ಕನಸು ನನಸು ಮಾಡಿದ ರಿಷಬ್ ಪಂತ್.. ಆದ್ರೆ ಅದನ್ನು ಸಂಭ್ರಮಿಸುವ ಕ್ಷಣ ಬಂದಾಗ ಅಪ್ಪನೇ ಜೊತೆಗಿಲ್ಲ..!
Life in Gurudwara to IPL success, Rishabh Pant’s story of big sacrifices
ಅಪ್ಪನ ಕನಸು ನನಸು ಆದಾಗ ಅದನ್ನು ನೋಡುವ ಭಾಗ್ಯ ಅಪ್ಪನಿಗಿಲ್ಲ. ಮಗ ಕ್ರಿಕೆಟಿಗನಾಗಬೇಕು ಅನ್ನೋ ಆಸೆಯನ್ನು ಮಗ ಈಡೇರಿಸಿದಾಗ ಅದನ್ನು ನೋಡುವ ಅವಕಾಶವನ್ನು ಆ ವಿಧಿ ನೀಡಲಿಲ್ಲ. ಮಗ ಟೀಮ್ ಇಂಡಿಯಾದ ಸೈಡರ್ ಮ್ಯಾನ್ ಆಗಿ ಹೊರಹೊಮ್ಮುತ್ತಿದ್ದಾಗ ಅದನ್ನು ನೋಡಿ ಸಂತಸಪಡುವ ಯೋಗ ಅಪ್ಪನಿಗಿರಲಿಲ್ಲ. ಇದೀಗ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿ ಮಗನನ್ನು ತಬ್ಬಿಕೊಂಡು ಆನಂದಿಸುವ ಕ್ಷಣವನ್ನೂ ಆ ದೇವರು ನೀಡಲಿಲ್ಲ.
ಇದು ಟೀಮ್ ಇಂಡಿಯಾದ ಸೂಪರ್ ಮ್ಯಾನ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರ ಬದುಕಿನ ನೋವಿನ ಕಥೆ.
ಉತ್ತರಖಂಡ್ ನ ರೂರ್ಕಿ ಅನ್ನೋ ಗ್ರಾಮೀಣ ಪ್ರದೇಶದ ಹುಡುಗ. ಸುಮಾರು ಹತ್ತು ಹನ್ನೊಂದು ವರ್ಷಗಳ ಹಿಂದೆ. ರಿಷಬ್ ಪಂತ್ ತಂದೆ ರಾಜೇಂದ್ರ ಪಂತ್ಗೆ ಮಗನನ್ನು ಕ್ರಿಕೆಟ್ ಆಟಗಾರನಾಗಿಸಬೇಕು ಎಂಬ ಆಸೆ. ಹಾಗಾಗಿ ಉತ್ತರಖಂಡ್ ನಿಂದ ದೆಹಲಿಗೆ ಮಗನನ್ನು ಕರೆದುಕೊಂಡು ಬಂದಾಗ ಸಿಕ್ಕ ಅಕಾಡೆಮಿಯೇ ಸೊನ್ನೆಟ್ ಕ್ರಿಕೆಟ್ ಅಕಾಡೆಮಿ.
ಸೊನ್ನೆಟ್ ಕ್ರಿಕೆಟ್ ಅಕಾಡೆಮಿಯಲ್ಲಿ 45 ದಿನಗಳ ಕ್ರಿಕೆಟ್ ಶಿಬಿರ ನಡೆಯುತ್ತಿತ್ತು. ಈ ಕ್ರಿಕೆಟ್ ಶಿಬಿರಕ್ಕೆ ರಿಷಬ್ ಪಂತ್ ಕೂಡ ಸೇರಿಕೊಂಡ್ರು. ದೆಹಲಿಯಲ್ಲಿ ಮೂರು ಮಂದಿ ಜೀವನ ಸಾಗಿಸೋದು ತುಂಬಾನೇ ಕಷ್ಟವಾಗುತ್ತಿತ್ತು. ಹೀಗಾಗಿ ರಿಷಬ್ ತಾಯಿ ದೆಹಲಿಯಲ್ಲೇ ಉಳಿದುಕೊಂಡ್ರು. ದೆಹಲಿಯ ಮೋತಿಭಾಗ್ ನ ಗುರುದ್ವಾರದಲ್ಲಿ ಕೆಲಸ ಮಾಡಿಕೊಂಡು ಮಗನ ಕ್ರಿಕೆಟ್ ಆಟಕ್ಕೆ ಪ್ರೇರಣೆ ನೀಡಿದ್ರು.
12 ವಯೋಮಿತಿಯ ಟೂರ್ನಿಯಲ್ಲಿ ಮೂರು ಶತಕಗಳನ್ನು ಸಿಡಿಸಿ ಗಮನ ಸೆಳೆದ ರಿಷಬ್ ಪಂತ್ ಗೆ ಗಾಡ್ ಫಾದರ್ ಆಗಿ ಸಿಕ್ಕಿದ್ದು ಸೊನ್ನೆಟ್ ಕ್ರಿಕೆಟ್ ಅಕಾಡೆಮಿಯ ಹೆಡ್ ಕೋಚ್ ತಾರಕ್ ಸಿನ್ಹಾ. ಜೊತೆಗೆ ಕೋಚ್ ದೇವೇಂದ್ರ ಶರ್ಮಾ.
ರಿಷಬ್ ಪಂತ್ ಅವರ ಪ್ರತಿಭೆಯನ್ನು ಗುರುತಿಸಿದ್ದು ತಾರಕ್ ಮತ್ತು ದೇವೇಂದ್ರ ಶರ್ಮಾ. ಅಲ್ಲದೆ ದೆಹಲಿಯ ಏರ್ ಫೋರ್ಸ್ ಸ್ಕೂಲ್ ಗೂ ಸೇರಿಸಿದ್ರು. ನಂತರ ರಿಷಬ್ ಪಂತ್ ಹಿಂತಿರುಗಿ ನೋಡಲೇ ಇಲ್ಲ. 19 ವಯೋಮಿತಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಪಂತ್ ಬಳಿಕ ದೆಹಲಿ ರಣಜಿ ತಂಡ, ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಈಗ ಟೀಮ್ ಇಂಡಿಯಾದಲ್ಲಿ ರಾರಾಜಿಸುತ್ತಿದ್ದಾರೆ.
ಆದ್ರೆ ಪಂತ್ ಅವರು ಈ ಖುಷಿಯನ್ನು ಹಂಚಿಕೊಳ್ಳಲು ಅವರ ಜೊತೆ ಅವರ ಅಪ್ಪ ರಾಜೇಂದ್ರ ಪಂತ್ ಈಗಿಲ್ಲ. 2017ರ ಐಪಿಎಲ್ ಟೂರ್ನಿಯ ವೇಳೆ ರಾಜೇಂದ್ರ ಪಂತ್ ನಿಧನರಾಗಿದ್ದರು. ನಿಧನದ ಸುದ್ದಿ ತಿಳಿದಾಗ ಪಂತ್ ಬೆಂಗಳೂರಿನಲ್ಲಿದ್ದರು. ಆರ್ ಸಿಬಿ ತಂಡದ ವಿರುದ್ಧ ಆಡಲು ತಯಾರು ನಡೆಸುತ್ತಿದ್ದರು.
ಆಗ 19ರ ಹರೆಯದ ಪಂತ್ ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದೇ ತಿಳಿಯಲಿಲ್ಲ. ಒಬ್ಬನೇ ಮಗ. ಅಪ್ಪನ ಅಂತ್ಯ ಕ್ರಿಯೆ ಮಾಡಬೇಕು. ಪಂದ್ಯದಿಂದ ಹೊರನಡೆಯಬೇಕೋ ಅಥವಾ ಊರಿಗೆ ಹೋಗಬೇಕೋ ಅನ್ನೋ ಗೊಂದಲದಲ್ಲಿದ್ದರು.
ಆದ್ರೆ ಗಟ್ಟಿ ಮನಸ್ಸು ಮಾಡಿಕೊಂಡ ರಿಷಬ್ ಪಂತ್ ಅಂದು ರಾತ್ರಿಯೇ ಉತ್ತರಖಂಡ್ ಗೆ ಹೊರಟ್ರು. ಬೆಳಗ್ಗೆ ಅಪ್ಪನ ಅಂತ್ಯಕ್ರಿಯೆ ಮುಗಿಸಿ ಮಧ್ಯಾಹ್ನ ಬೆಂಗಳೂರಿಗೆ ಬಂದಿದ್ರು. ಸಂಜೆ ನೆಟ್ಸ್ ನಲ್ಲಿ ತಾಲೀಮು ನಡೆಸಿದ್ದರು. ರಾತ್ರಿ ಪಂದ್ಯಕ್ಕೆ ಸಿದ್ಧರಾಗಿದ್ದರು.
ಅಷ್ಟೇ ಅಲ್ಲ, ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಕರ್ಷಕ 57 ರನ್ ದಾಖಲಿಸಿದ್ದರು. ಆದ್ರೆ ಆ ಪಂದ್ಯವನ್ನು ಡೆಲ್ಲಿ ತಂಡಕ್ಕೆ ಸಾಧ್ಯವಾಗಲಿಲ್ಲ. ಆದ್ರೆ ರಿಷಬ್ ಪಂತ್ ಎಲ್ಲರ ಮನ ಗೆದ್ದಿದ್ದರು.
ರಿಷಬ್ ಪಂತ್ ರೀತಿಯಲ್ಲೇ ವಿರಾಟ್ ಕೊಹ್ಲಿ ಕೂಡ ಅಪ್ಪನ ನಿಧನ ಸುದ್ದಿ ಕೇಳಿ ಆಟವನ್ನು ಮುಂದುವರಿಸಿದ್ದರು. ಕರ್ನಾಟಕದ ವಿರುದ್ಧ ಆಡುತ್ತಿರುವಾಗ ವಿರಾಟ್ ಕೊಹ್ಲಿ ದಿನದ ಆಟ ಮುಗಿದ ನಂತರ ಅಪ್ಪನ ಅಂತ್ಯಕ್ರಿಯೆ ಮುಗಿಸಿ ಮರುದಿನ ಪಂದ್ಯವನ್ನು ಆಡಿದ್ದರು. ಇತ್ತೀಚೆಗೆ ಮಹಮ್ಮದ್ ಸೀರಾಜ್ ಕೂಡ ಆಸ್ಟ್ರೇಲಿಯಾ ಸರಣಿಯ ವೇಳೆ ಅಪ್ಪನನ್ನು ಕಳೆದುಕೊಂಡಿದ್ದರು. ಅಲ್ಲದೆ ಪಂದ್ಯವನ್ನು ಕೂಡ ಆಡಿದ್ದರು. ಇನ್ನು 1999ರ ವಿಶ್ವಕಪ್ ನಲ್ಲಿ ಸಚಿನ್ ತೆಂಡುಲ್ಕರ್ ಕೂಡ ತನ್ನ ತಂದೆಯನ್ನು ಕಳೆದುಕೊಂಡಾಗ ಮುಂಬೈಗೆ ಬಂದು ಅಂತ್ಯಕ್ರಿಯೆ ಮುಗಿಸಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡು ಶತಕ ಕೂಡ ದಾಖಲಿಸಿದ್ದರು.
ಹೀಗೆ ಕ್ರಿಕೆಟಿಗರ ಬದುಕಿನಲ್ಲೂ ಕೆಲವೊಂದು ದುರ್ಘಟನೆಗಳು ನಡೆದಾಗ ಮನಸ್ಸು ಗಟ್ಟಿ ಮಾಡಿಕೊಂಡು ಬದ್ಧತೆಯನ್ನು ಪ್ರದರ್ಶಿಸಿಸುತ್ತಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ಅವರ ಬದುಕಿನಲ್ಲಿ ಅವರ ತಂದೆ ಮತ್ತು ತಾಯಿ ಪ್ರಮುಖ ಪಾತ್ರ ವಹಿಸಿದ್ದರು.