ಕೊರೋನಾ ಸೋಂಕಿನಿಂದ ಮೃತ ಪಟ್ಟ ಬಂಟ್ವಾಳ ಮಹಿಳೆಯ ಅತ್ತೆಯ ಗಂಟಲ ದ್ರವ ಪರೀಕ್ಷೆಯ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ಇದೀಗ ಅವರಿಗೂ ಕೋವಿಡ್- 19 ಸೋಂಕು ತಗುಲಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಅತ್ತೆ ಚಿಕಿತ್ಸೆ ಪಡೆಯುತ್ತಿದ್ದ ಪಡೀಲ್ ಸಮೀಪದ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯ ಸೀಮಿತ ಪ್ರದೇಶವನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಿ, ಎಲ್ಲಾ ಚಟುವಟಿಕೆಗಳಿಗೆ ದ.ಕ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಮೃತ ಮಹಿಳೆಯ ಅತ್ತೆ 75 ವರ್ಷದವರಾಗಿದ್ದು, ಕಳೆದ ಒಂದು ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಪಡೀಲ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಸೊಸೆ ಕೊರೊನಾದಿಂದ ಸಾವನ್ನಪ್ಪಿದ ಬಳಿಕ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಇವರಲ್ಲೂ ಸೋಂಕು ದೃಢಪಟ್ಟ ಕಾರಣ ಫಸ್ಟ್ ನ್ಯೂರೋ ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಾದವರು, ಆಸ್ಪತ್ರೆಗೆ ಭೇಟಿ ನೀಡಿದವರು, ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್ಗಳು ಮತ್ತು ಸಿಬ್ಬಂದಿ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸುವ ಜೊತೆಗೆ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಯನ್ನು “ಸುಪರ್ವೈಸ್ಡ್ ಐಸೋಲೆಟೆಡ್ ಸೆಂಟರ್” ಆಗಿ ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿರುವ ರೋಗಿಗಳು, ಸಿಬ್ಬಂದಿಗಳು, ವೈದ್ಯರು, ನರ್ಸ್ ಗಳು ಸೇರಿದಂತೆ ಆಸ್ಪತ್ರೆಯಿಂದ ಯಾರು ಹೊರಬರುವಂತಿಲ್ಲ ಹಾಗೂ ಯಾರು ಕೂಡಾ ಒಳಹೋಗುವಂತಿಲ್ಲ. ಆಸ್ಪತ್ರೆಯಲ್ಲಿ ಇದ್ದವರಿಗೆ ಆಹಾರ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಹೊಂದಿಕೊಂಡಿರುವ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಸೀಮಿತ ಪ್ರದೇಶವನ್ನು ಕಂಟೋನ್ಮೆಂಟ್ ವಲಯ ಎಂದು ಘೋಷಿಸಿ, ಎಲ್ಲಾ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಈ ವಲಯದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಮನೆಯಿಂದ ಯಾರು ಹೊರಗೆ ಹೋಗುವಂತಿಲ್ಲ, ಹಾಗೂ ಹೊರಗಡೆಯಿಂದ ಈ ಪ್ರದೇಶಕ್ಕೆ ಬರುವುದನ್ನು ಸಂಪೂರ್ಣ ನಿರ್ಬಂಧಿಸುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.
ಖಾಸಗಿ ಆಸ್ಪತ್ರೆಯ ಪೂರ್ವ ಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಾಥ್ ಕೃಪಾ ರೈಸ್ ಮಿಲ್, ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣಕ್ಕೆ ಸರ್ಕಾರಿ ಜಾಗದ ಸುತ್ತ ಕಂಟೋನ್ಮೆಂಟ್ ಪ್ರದೇಶ ಘೋಷಣೆ ಮಾಡಲಾಗಿದ್ದು, ಆಸ್ಪತ್ರೆಯ ಜೊತೆಗೆ ಎರಡು ಮನೆ, ಐದು ಅಂಗಡಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅಲ್ಲಿಂದ 5 ಕಿಲೋಮೀಟರ್ ವರೆಗಿನ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್ ಪ್ರದೇಶದ 42 ಸಾವಿರ ಮನೆಗಳು, 1800 ಅಂಗಡಿ ಮತ್ತು ಕಚೇರಿ, 1.8 ಲಕ್ಷ ಜನರು ಈ ವ್ಯಾಪ್ತಿಗೆ ಬರಲಿದ್ದಾರೆ.
ಮೃತ ಮಹಿಳೆಯ ಪತಿ ಹಾಗೂ ಮಗನ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿಲ್ಲ. ಮೃತ ಮಹಿಳೆಯ ಅತ್ತೆಯಲ್ಲಿ ಕೊರೊನಾ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ. ಈ ಪೈಕಿ 12 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು , 4 ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








