ಬಿಡದಿ : ಅಜಯ್ ರಾವ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಲವ್ ಯು ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವನ್ನಪ್ಪಿದ್ದಾರೆ. 35 ವರ್ಷದ ವಿವೇಕ್ ಎಂಬುವವರು ಮೃತ ಫೈಟರ್ ಆಗಿದ್ದಾರೆ. ಪ್ರಕರಣ ಸಂಬಂಧ ನಿರ್ದೇಶಕ ಸೇರಿ ಮೂವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.. ಈ ಪ್ರಕರಣ ಸಂಬಂಧ ಬಿಡದಿ ಪೊಲೀಸರು, ನಿರ್ದೇಶಕ ಶಂಕರ್ ರಾಜ್, ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಫೈಟ್ ಮಾಸ್ಟರ್ ವಿನೋದ್ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.. ಐದು ದಿನಗಳಿಂದ ನಡೆಯುತ್ತಿದ್ದ ಚಿತ್ರೀಕರಣ ನಡೆಯುತಿತ್ತು.. ಇಂದು ಕೊನೆಯ ದಿನದ ಚಿತ್ರೀಕರಣ ಆಗಿತ್ತು. ಇನ್ನೂ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಬಿಡದಿ ಪೊಲೀಸರು ಕ್ರೇನ್ ಚಾಲಕ , ಫೈಟ್ ಮಾಸ್ಟರ್ , ನಿರ್ದೇಶಕ , ನಿರ್ಮಾಪಕನನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟ ಅಜಯ್ ರಾವ್, ಬೇಜವಾಬ್ದಾರಿಯಿಂದಲೇ ದುರಂತ ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ. ಚಿತ್ರೀಕರಣದ ವೇಳೆ ಹೈಟೆನ್ ಶನ್ ವಿದ್ಯುತ್ ತಂತಿಗೆ ಮೆಟಲ್ ರೋಪ್ ಬಳಸಿ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ಶಾಕ್ ಹೊಡೆದು ದುರಂತ ಸಂಭವಿಸಿದೆ. ನಾನು 5 ದಿನಗಳ ಹಿಂದೆಯೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೆ. ನಾವು ಪ್ರಶ್ನೆ ಮಾಡಿದರೆ ಕೋಪಕ್ಕೆ ಗುರಿಯಾಗಬೇಕಾಗುತ್ತೆ, ಮೂಗು ತೂರಿಸುತ್ತಾರೆ ಅಂತಾರೆ. ಮುಂಜಾಗೃತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಘಟನೆ ಸಂಭವಿಸಿದೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.
ಘಟನೆ ವೇಳೆ ನಾನು ಸ್ಥಳದಲ್ಲಿ ಇರಲಿಲ್ಲ 200 ಮೀಟರ್ ದೂರದಲ್ಲಿದ್ದೆ. ದುರಂತದ ವೇಳೆ ಜೋರಾದ ಸೌಂಡ್ ಆಗಿದೆ ಎದ್ದು ನೋಡುವಷ್ಟರಲ್ಲಿ ಗುಂಪು ಸೇರಿತ್ತು. ನಮ್ಮ ಹುಡುಗರು ಮಾಹಿತಿ ನೀಡಿದ್ದಾರೆ. ನಾನು ಯಾರನ್ನೂ ದೂರುತ್ತಿಲ್ಲ, ಆದರೆ ಬೇಜವಬ್ದಾರಿ ಇಂತಹ ದುರಂತಕ್ಕೆ ಕಾರಣವಾಗುತ್ತಿದೆ. ಹಾಗಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇನ್ನೂ ಯಾವುದೇ ಮುಂಜಾಗ್ರತಾ ಇಲ್ಲದೇ ಚಿತ್ರೀಕರಣ ನಡೆಯುತ್ತಿದ್ದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ಘಟನೆಯಲ್ಲಿ ತೆಂಗಿನ ಜಮೀನು ಸಂಪೂರ್ಣ ಹಾಳಾಗಿದೆ. ಫೈಟರ್ ಗೆ ಸಹಾಯವಾಗಿದ್ದ ವ್ಯಕ್ತಿಗೂ ಗಂಭೀರ ಗಾಯವಾಗಿದೆ. ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.. ಬಿಡದಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ..
ಇನ್ನೂ ತೆಂಗಿನ ತೋಟದ ಜಮೀನು ಮಾಲೀಕ ಪುಟ್ಟರಾಜು ನಾಪತ್ತೆಯಾಗಿರೋದಾಗಿ ತಿಳಿಸದುಬಂದಿದೆ. ಫೈಟ್ ಸಂಬಂಧ ವಿದ್ಯುತ್ ತಂತಿ ನೋಡದೇ ಕ್ರೇನ್ ಮೆಲಕ್ಕೆತ್ತಿದ್ದ ಪರಿಣಾಮ ಅನಾಹುತ ಸಂಭವಿಸಿದೆ ಎನ್ನಲಾಗಿದೆ.. ಈ ವೇಳೆ ವಿದ್ಯುತ್ ಸ್ಪರ್ಶಿಸಿ ವಿವೇಕ್ ಸಾವನಪ್ಪಿದ್ದಾರೆ.. ಕ್ರೇನ್ ಚಾಲಕ ಹಾಗೂ ಫೈಟ್ ಮಾಸ್ಟರ್ ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ.. ಯೋಗ್ಯವಲ್ಲದ ಜಾಗದಲ್ಲಿ ಚಿತ್ರೀಕರಣ ಮಾಡಿರುವುದೇ ಚಿತ್ರತಂಡ ಮಾಡಿರುವ ತಪ್ಪು ಎನ್ನಲಾಗ್ತಿದೆ.








