ಮಾತು – ಸಂಬಂಧಗಳ ಬೆಸೆವ ಸೇತುವೆಯಾಗಲಿ..
ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ, ಮುಂಬೈ
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಹೌದೆನ್ನಬೇಕು
ನುಡಿಯೊಳಗಾಗಿ
ನಡೆಯದಿದ್ದರೆ ಕೂಡಲಸಂಗನೆಂತೊಲಿವನಯ್ಯಾ
ಮನುಷ್ಯ ಹುಟ್ಟಿದ ಒಂದು ವರ್ಷದಲ್ಲಿಯೇ ತನ್ನ ಮನೆಯಲ್ಲಿ, ಅಪ್ಪ ಅಮ್ಮ ಮಾತನಾಡುವ ಭಾಷೆಯನ್ನೇ ಅನುಕರಿಸಿ ಮಾತನಾಡುವುದನ್ನು ಕಲಿಯುತ್ತಾನೆ. ಆದರೆ ನೂರು ವರ್ಷವಾದರೂ ಜನರು ಹೇಳುವ ಮಾತು ಒಂದೇ.. ಆತನಿಗೆ/ಆಕೆಗೆ ಮಾತನಾಡಲೂ ಇನ್ನೂ ಬರುವುದಿಲ್ಲ. ಅಂದರೆ ಅರ್ಥ ಏನು? ನಾವಿನ್ನೂ ಮಾತನಾಡುವ ರೀತಿಯನ್ನು ಕಲಿತಿಲ್ಲ. ನಾವು ಮಾತನಾಡುವ ಮಾತು ಮೃದು, ಮಧುರವಾಗಿರಬೇಕು. ಆ ಮಾತೇ ಆತನಿಗೆ ಶೋಭೆಯನ್ನು ತಂದುಕೊಡುತ್ತದೆ. ಅದೇ ಮಾತು ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದು ನಮ್ಮನ್ನು ಅಧ:ಪತನಕ್ಕೆ ಕೊಂಡೊಯ್ಯಬಹುದು. ಕೆಲವೊಮ್ಮೆ ನಾವಾಡುವ ಮಾತಿನ ಧಾಟಿಯಿಂದಾಗಿ ಆವಾಂತರವಾಗಬಹುದು. ನಾವು ಹೇಳಬೇಕಾದುದನ್ನು ಹೇಳಿದ್ದರೂ ಕೇಳುವವರು ಅಪಾರ್ಥ ಮಾಡಿಕೊಂಡು, ಕೋಪಿಸಿಕೊಂಡು ಮುಂದೆ ಅದು ವೈಮನಸ್ಸಿಗೂ ಕಾರಣವಾಗಬಹುದು. ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು ಎಂಬ ಮಾತಿದೆ. ಮಾತಿನ ಮಹಿಮೆಯನ್ನು ಬಲ್ಲವರೇ ಬಲ್ಲರು. ಮಾತನಾಡುವುದೂ ಒಂದು ಕಲೆ ಎಂದು ಹೇಳಬಹುದು. ಇದ್ದದ್ದನ್ನು ಇದ್ದಂತೆ ಹೇಳಿದರೆ ನಮಗೆ ಕೆಂಡದಂತೆ ಕೋಪ ಬರುತ್ತದೆ. ಎದುರಿನ ವ್ಯಕ್ತಿ ನಮ್ಮ ತಪ್ಪನ್ನು ಮುಚ್ಚಿಟ್ಟು ನೀವು ಮಾಡಿದ್ದೆಲ್ಲವೂ ಸರಿ ಎಂದರೆ ನಾವು ತುಂಬಾ ಒಳ್ಳೆಯವರಾಗುತ್ತೇವೆ. ಇಂತಹ ಸಮಾಜದಲ್ಲಿ ನಾವಿದ್ದೇವೆ ಅನ್ನೋ ಖೇದವೂ ಇದೆ. ಮಾತನಾಡುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದೇ ತಿಳಿದವರು ನಾವು. ಹಕ್ಕಿನ ಬಗ್ಗೆ ಮಾತನಾಡುವ ನಾವು ನಮ್ಮ ಕರ್ತವ್ಯವನ್ನು ಮಾತ್ರ ಬಹು ಬೇಗ ಮರೆಯುತ್ತೇವೆ.
ಮಾತಾಡುವ ಕ್ಷಮತೆ ಮಾನವನಿಗೆ ಮಾತ್ರ ದೊರೆತಿರುವುದು. ನಮ್ಮಷ್ಟು ಜಟಿಲವಾಗಿ ಉಚ್ಚರಿಸುವ ಶಕ್ತಿ ಪ್ರಾಣಿಗಳಿಗೆ ಇಲ್ಲ. ಎಲ್ಲಾ ಭಾರತೀಯ ಭಾಷೆಗಳಿಗೆ ಹೋಲಿಸಿದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಶಬ್ದಗಳ ಭಂಡಾರ ಕಡಿಮೆ ಇದೆ. ಶಬ್ಧಗಳ ಉಚ್ಚಾರ, ಶಬ್ಧ ಭಂಡಾರ ಕಡಿಮೆ ಇದ್ದಷ್ಟು ನಮ್ಮಲ್ಲಿ ವಾಕ್ ಶುದ್ದಿ ಕಡಿಮೆಯಿರತ್ತೆ. ಆದ್ದರಿಂದ ಆ ಕೊರತೆಯನ್ನು ಅರಿವು ಮತ್ತು ಸ್ವ ಇಚ್ಛೆಯಿಂದ ಸರಿ ಮಾಡಿಕೊಳ್ಳಬೇಕು. ಅದಕ್ಕೆ ನಾವು ನಮಗೆ ಸರಿಯಾಗಿ ಬರುವ ಭಾಷೆಯಲ್ಲಿಯೇ ಮಾತನಾಡಬೇಕು. ಕೆಲವೊಮ್ಮೆಅನಿವಾರ್ಯ ಅನಿಸಿದಾಗ ಇಂಗ್ಲಿಷಿನಲ್ಲಿ ಮಾತನಾಡುವುದು ತಪ್ಪಲ್ಲ. ಆದರೆ ಮಾತಿನಲ್ಲಿ ಕ್ರಿಯೆಯ ಇಂಗಿತ ಮುಖ್ಯವೇ ಹೊರತು ಭಾಷೆಯಲ್ಲ. ಕರ್ಮದ ಪ್ರಕ್ರಿಯೆಯ ದೊಡ್ಡ ಭಾಗ ಇರುವುದು ನಮ್ಮ ಉದ್ದೇಶದಲ್ಲಿ. ನಾವು ಮಾತನಾಡುವಾಗ ಶಬ್ದಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಸಮಯ ಸಂದರ್ಭಕ್ಕನುಸಾರವಾಗು ಅದನ್ನು ಉಪಯೋಗಿಸಬೇಕು. ಇಲ್ಲವಾದರೆ ವಿಪರ್ಯಾಸವಾದೀತು. ಉಚ್ಛಾರ ಸ್ಪಷ್ಟವಾಗಿರಬೇಕು.
ನಮ್ಮ ಮಾತು ಮತ್ತು ಕೃತಿಗೂ ಸಾಮ್ಯವಿರಬೇಕು. ಮಾತನಾಡುವುದೂ ಒಂದು ಕಲೆ. ಎಲ್ಲರಿಗೆ ಈ ಕಲೆ ಸಿದ್ಧಿಸುವುದಿಲ್ಲ. ಮೊದಲು ನಾವು ಒಳ್ಳೆಯ ಕೇಳುಗರಾಗಬೇಕು. ಅದಕ್ಕೆ ತಾಳ್ಮೆ, ಪ್ರೀತಿ ಭಾವನೆ ಅಂತರಾತ್ಮದಲ್ಲಿ ಮೂಡಬೇಕು. ಆಗ ತನ್ನಿಂದ ತಾನೇ ಮಾತು ಮೃದುವಾಗುತ್ತದೆ. ಅಂತಹ ಮಾತುಗಳು ಮನಸ್ಸಿಗೆ ಹಿತವಾಗುತ್ತವೆ. ಅಧ್ಯಾತ್ಮ, ಸಾಹಿತ್ಯ ಅಥವಾ ಇನ್ನಿತರ ಮೋಟಿವೇಶನಲ್ ಭಾಷಣ ಮಾಡುವವರ ಮಾತುಗಳು ಪರಿಣಾಮಕಾರಿಯಾಗಿರಬೇಕೆಂದರೆ ಅವರ ಮಾತಿನ ವೈಖರಿಯೂ ಚೆನ್ನಾಗಿರಬೇಕು. ಕೆಲವರ ಮಾತುಗಳನ್ನು ಕೇಳುವುದಕ್ಕಾಗಿಯೇ ಜನರು ಮುಗಿಬೀಳುತ್ತಾರೆ. ಕೆಲವರ ಮಾತು ಮತ್ತೆ ಮತ್ತೆ ಕೇಳಬೆಕೆನಿಸುತ್ತದೆ. ಅಂತ ಪವಾಡ ನಡೆಯುವುದು ಅಪರೂಪವಾದರೂ ನಮ್ಮ ಮನಪೂರ್ವಕವಾಗಿದ್ದಾಗ ಅದು ಹೆಚ್ಚು ಜನರನ್ನು ತಲುಪುತ್ತದೆ.
ಮಾತಿಗಿಂತ ಮೌನವೇ ಶ್ರೇಷ್ಠ ಎನ್ನುತ್ತಾರೆ. ಯಾಕೆಂದರೆ ನಾವು ಯಾವ ಕೆಟ್ಟ ಉದ್ದೇಶವಿಲ್ಲದೆ ಆಡುವ ಸಾಧಾರಣ ಮಾತುಗಳು ಕೂಡಾ ಕೆಲವರಿಗೆ ಅಪಾರ್ಥ ಗೋಚರಿಸಬಹುದು. ಆಗ ಇಲ್ಲಸಲ್ಲದ ವಾದ ವಿವಾದ ವಾಗ್ವಾದಗಳು ನಡೆಯಬಹುದು. ನಾವು ಮಾತನಾಡುವಾಗ ನಮ್ಮ ಎದುರಿನಲ್ಲಿರುವವರು ಮಹಿಳೆಯೋ ಪುರುಷರೋ ಎಂಬುವುದು ಕೂಡಾ ಮುಖ್ಯವಾಗುತ್ತದೆ. ಮಹಿಳೆಯರಲ್ಲಿ ಗೌರವಪೂರ್ವಕವಾಗಿ ಮಾತನಾಡುವುದು ಹೆಚ್ಚು ಸೂಕ್ತ.
ಮಾತಿನಲ್ಲೂ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾದುದು ತುಂಬಾ ಮಾತನಾಡುವವರದ್ದು ಒಂದು ಗುಂಪಾದರೆ ಇನ್ನು ಹಿತಮಿತವಾಗಿ ಮಾತನಾಡುವವರದ್ದು ಇನ್ನೊಂದು ವರ್ಗ. ಹೆಚ್ಚು ಮಾತನಾಡುವವರ ಮಾತು ಕೇಳುಗರನ್ನು ಆಕರ್ಷಿಸುವಂತಿದ್ದರೆ ಪರವಾಗಿಲ್ಲ. ಇನ್ನು ಕೆಲವರ ಮಾತು ಎಷ್ಟು ಅತಿ ಎಂದರೆ ಅವರನ್ನು ಕಂಡರೇ ಕೆಲವರು ಮಾರುದ್ದ ಓಡಿ ಹೋಗುತ್ತಾರೆ. ಇನ್ನು ಕೆಲವರದ್ದು ಹಿತಮಿತವಾದ ಮೃದು ಮಾತು. ಅಂತವರನ್ನು ಹೆಚ್ಚಿನವರು ತುಂಬಾ ಇಷ್ಟ ಪಟ್ಟರೆ ಮತ್ತೆ ಕೆಲವರು ಅವರನ್ನು ಬೋರಿಂಗ್ ಅಂತನೂ ಹೇಳುವವರಿರುತ್ತಾರೆ. ಹಾಗಂತ ಜನರಿಗೆ ಬೇಕಾದಂತೆ ಬದುಕುವುದು ಕಷ್ಟ ಬಿಡಿ.
ನಾವಾಡುವ ಮಾತಿನಲ್ಲಿ ವಿನಯತೆ ಇರಬೇಕು. ಬಸವಣ್ಣನ “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ‘ ಎಂದಿದ್ದಾರೆ. ಅಹಂಕಾರದ ನಡೆ ನುಡಿಗೆ ಯಾರೂ ಬೆಲೆ ಕೊಡುವುದಿಲ್ಲ. ನಮ್ಮಲ್ಲಿ ವಿನಯತೆ ಇದ್ದರೆ ಸುತ್ತಮುತ್ತಲಿನ ಜನರೂ ನಮ್ಮನ್ನು ಪ್ರೀತಿಸುತ್ತಾರೆ. ಆದರಿಸುತ್ತಾರೆ, ಗೌರವಿಸುತ್ತಾರೆ. ಆದರೆ ಒಂದು ನೋವಿನ ಸಂಗತಿ ಎಂದರೆ ಇದ್ದದ್ದನ್ನು ಇದ್ದಂತೆ ಹೇಳುವವರಿಗೆ ಈಗಿನ ಕಾಲದಲ್ಲಿ ದಿನವಿಲ್ಲ. ಅವರು ನಿಷ್ಠುರವಾದಿಗಳಾಗುತ್ತಾರೆ. ಅದೇ ಮನಸ್ಸಿನಲ್ಲಿ ಹುಳುಕನ್ನು ಇಟ್ಟುಕೊಂಡು ನಯವಾಗಿ ಮಾತನಾಡಿದವರು ಹೆಚ್ಚಿನವರಿಗೆ ಇಷ್ಟವಾಗುತ್ತಾರೆ. ಅವರು ಹಿಂದಿನಿಂದ ಚಾಕು ಹಾಕುವವರೆಂದು ತಿಳಿಯುವಾಗ ತಡವಾಗುತ್ತದೆ. ಹಾಗಂತ ಎಲ್ಲಿ ಏನನ್ನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಹೇಳುವ ಜಾಯಮಾನವೇ ಯಾವತ್ತಿಗೂ ಒಳ್ಳೆಯದು. ಸಿಹಿಯಾಗಿ ಮಾತನಾಡಿ ಕಪಟ, ಮೋಸ ಮಾಡುವುದು ಸಹ್ಯವಲ್ಲ.
ಮಾತು ಆಡುವುದೂ ಒಂದು ಕಲೆ. ಮಾತನಾಡಲು ಬಾರದಿದ್ದರೆ ನಮ್ಮಲ್ಲಿನ ಯಾವ ಪಾಂಡಿತ್ಯವೂ ಪ್ರಯೋಜನವಿಲ್ಲದಂತಾಗುತ್ತದೆ. ಕೆಲವರು ಒಳ್ಳೆಯ ಪಾಂಡಿತ್ಯವುಳ್ಳವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಪ್ರೇಕ್ಷಕರನ್ನು ಹಿಡಿದಿಡುವ ಕಲೆ ಗೊತ್ತಿರದೇ ಸೋಲುತ್ತಾರೆ. ಅದೇ ಇನ್ನು ಕೆಲವರು ಅಲ್ಪ ಸ್ವಲ್ಪ ಪಾಂಡಿತ್ಯವಿದ್ದರೂ ತಮ್ಮ ಅಮೋಘ ಮಾತಿನ ಶೈಲಿಯಿಂದ ಜನರ ಮೆಚ್ಚುಗೆಯನ್ನು ಪಡೆಯುತ್ತಾರೆ. ನಮ್ಮ ಆಂತರ್ಯದಲ್ಲಿ ಅಡಗಿದ ಮಾತುಗಳೆಲ್ಲವೂ ಹರಿವ ತೊರೆಯಾಗುತ್ತವೆ. ಬತ್ತದ ಸಮುದ್ರವಾಗುತ್ತದೆ. ಆದ್ದರಿಂದಲೇ ಮಾತು ಮಧುರ. ಕೆಲವರು ಮಾತನಾಡುವಾಗ ಉಲಿಯುವ ಹಕ್ಕಿಯಂತೆ ಮೃದುವಾಗಿಯೂ ಮಧುವಿನಂತೆಯೂ ಇರುತ್ತದೆ. ಇನ್ನು ಕೆಲವರ ಮಾತೇ ಕರ್ಕಶ. ಅಬ್ಬ ಯಾವಾಗ ಮುಗಿಸುತ್ತಾರೋ ಅನಿಸದಿರದು. ಕವಿ ಡಾ.ದ.ರಾ ಬೇಂದ್ರೆ ಅವರು ಅಂದಂತೆ ಮಾತು ಮಾತು ಮಥಿಸಿ ಬಂದ ನಾದದ ನವನೀತವಾಗಬೇಕು.
ಮಾತಿನ ಕುರಿತು ಸರ್ವಜ್ಞನೂ ಬಹಳ ಸೊಗಸಾಗಿ ತನ್ನ ವಚನದಲ್ಲಿ ಹೇಳಿದ್ದಾನೆ.
“ಮಾತಿನಿಂ ನಗೆ ನುಡಿಯು
ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕ್ಕೆ
ಮಾತೇ ಮಾಣಿಕ್ಯವು ಸರ್ವಜ್ಞ”
ಮಾತಿನ ಮೌಲ್ಯವನ್ನು ಅರಿಯಬೇಕಾದರೆ ಸ್ವಲ್ಪ ಹೊತ್ತು ಮೂಗರೊಂದಿಗೆ ಇರಬೇಕು. ಆಗ ಅರಿವಾಗುತ್ತದೆ ನಾವೆಷ್ಟು ಅದೃಷ್ಟವಂತರು ಎಂದು. ಕೆಲವರು ಹಾಸ್ಯದ ರೂಪದಲ್ಲಿ ಎದುರಿಗಿರುವವರನ್ನು ಅವಹೇಳನ ಮಾಡುವುದನ್ನು ನೋಡಬಹುದು. ಇದು ಸರ್ವಥಾ ಸಲ್ಲದು. ಕೆಲವರು ಸುಡುಸುಡು ಮುಖವನ್ನು ಹೊತ್ತು ಸದಾ ಅಸಹನೆಯಿಂದ ಗೊಣಗುತ್ತಿರುತ್ತಾರೆ. ಅಂತಹವರನ್ನು ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಬಾಯ್ದೆರೆದರೆ ಅಹಂಕಾರದ, ದರ್ಪದ ಮಾತುಗಳು. ಈಗಿನ ಕಾಲದಲ್ಲಿ ಅಂತವರನ್ನು ಕ್ಯಾರೇ ಅನ್ನುವವರಿಲ್ಲ ಎನ್ನುವುದು ಗಮನದಲ್ಲಿರಲಿ.
ಪರಸ್ಪರ ಮಾತನಾಡುವಾಗ ಆರೋಗ್ಯಪೂರ್ಣ ಚರ್ಚೆ ಇದ್ದರೆ ಚೆನ್ನ. ವೃಥಾ ಕಾಲಹರಣಕ್ಕಾಗಿ ಸಮಯ ವ್ಯರ್ಥ ಮಾಡಬಾರದು. ಪ್ರೀತಿಯ ನುಡಿಗಳಿಂದ ನಿಮ್ಮ ಆತ್ಮೀಯರ ಮನಸ್ಸನ್ನು ಹೃದಯವನ್ನು ಗೆಲ್ಲಬಹುದು. ನಂಬಿಕೆ ಭರವಸೆಗಳಿಂದ ಸ್ನೇಹ ಸಂಪಾದನೆ ಮಾಡಬಹುದು. ಮೋಸ ವಂಚನೆಗಳ ನುಡಿಗಳು ನಿಮ್ಮನ್ನು ಏಕಾಂಗಿಯನ್ನಾಗಿಸಬಹುದು. ಆ ಕುರಿತು ಎಚ್ಚರವಿರಬೇಕು.
ಮಾತು ಎರಡು ಸಂಬಂಧಗಳ ನಡುವಿನ ಸೇತುವೆಯಾಗಬೇಕು. ಕೊಂಕು ಮಾತನಾಡುವವರಿಂದ ದೂರವಿರುವುದೇ ಲೇಸು. ಒಂದು ಅತ್ಯುತ್ತಮವಾದ ಸಂವಹನ ಪ್ರಕ್ರಿಯೆ ಮಾತು. ಅದನ್ನರಿಯದವರೊಂದಿಗೆ ಮಾತು ಜಗಳಕ್ಕೆ ತಿರುಗಬಹುದು. ನಮಗೆ ಸರಿಯಾಗಿ ತಿಳಿಯದ ಭಾಷೆಗಿಂತ ನಮ್ಮ ಮಾತೃ ಭಾಷೆಯಲ್ಲಿಯೇ ನಾವು ಮಾತನಾಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಅದು ಬಿಟ್ಟು ಫ್ಯಾಶನ್ ಎಂದೋ ಅಥವಾ ತಮಗೆ ತಿಳಿದಿದೆಯೆನ್ನುವುದನ್ನು ತೋರಿಸುವುದಕ್ಕೋ ಇಂಗ್ಲಿಷನಲ್ಲಿ ಮಾತನಾಡಿದರೆ ಅಪಹಾಸ್ಯಕ್ಕೆ ಈಡಾಗಬಹುದು.. ಮಾತೃ ಭಾಷೆಯ ಮಾತು ನಿಮ್ಮನ್ನು ಹತ್ತಿರ ತರುತ್ತದೆ. ಭಾಂಧವ್ಯವನ್ನು ಬೆಸೆಯುತ್ತದೆ ಎನ್ನುವುದನ್ನು ನಾವು ಯಾವತ್ತೂ ಮರೆಯಬಾರದು.








