ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗ ರಾಗಾಯ ಮಹೇಶ್ವರಾಯ
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈನ ಕಾರಾಯ ನಮಃ ಶಿವಾಯ
ಶಿವ ಎಂದರೆ ಕೈಲಾಸದೊಡೆಯ, ಸ್ಮಶಾನವಾಸಿ, ಭಸ್ಮಧಾರಿ, ಹುಲಿಯ ಚರ್ಮವನ್ನು ಹೊದ್ದು ನಾಗರಾಜನನ್ನೇ ಆಭರಣವಾಗಿ ಧರಿಸಿದವನು. ಬಿಲ್ವಪ್ರಿಯ, ಮುಕ್ಕಣ್ಣ, ಶುದ್ಧ ಮನಸ್ಸಿನಿಂದ ಭಕ್ತರು ಕರೆದಾಗ ತಡಮಾಡದೆ ಓಗೊಟ್ಟು ಬರುವ ಕರುಣಾಕರ.
ಹಿಂದೂಗಳ ಆರಾಧ್ಯದೈವ ಶಂಭೋಶಂಕರ ಬೇರೆಲ್ಲಾ ದೇವರುಗಳಿಗಿಂತ ಬಹಳಷ್ಟು ವಿಭಿನ್ನ. ಅಡಂಬರಗಳಿಂದ ಮುಕ್ತನಾಗಿ, ಸರಳತೆಯನ್ನು ಮೈಗೂಡಿಸಿಕೊಂಡ ಧ್ಯಾನಾಸಕ್ತ ಜಗದೀಶ್ವರ ಒಲಿಯುವುದು ಭಕ್ತರ ನಿರ್ಮಲ ಮನಸ್ಸಿನ ಭಕ್ತಿಗೆ ಮಾತ್ರ. ಬದುಕಿನ ಕತ್ತಲೆಯನ್ನು ಕಳೆದು ಬಾಳನ್ನು ಬೆಳಗು ಎಂದು ಮಹಾದೇವನಲ್ಲಿ ಶಿವಭಕ್ರರು ಪ್ರಾರ್ಥಿಸುವ ಅತ್ಯಂತ ವಿಶೇಷವಾದ ದಿನ ಶಿವರಾತ್ರಿ.
ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಬಹುಳ ಚತುರ್ದಶಿಯಲ್ಲಿ ಬರುವ ಶಿವರಾತ್ರಿಯ ಮಧ್ಯರಾತ್ರಿಯಂದು ಪರಮೇಶ್ವರ ಲಿಂಗ ಸ್ವರೂಪದಲ್ಲಿ ಅವಿರ್ಭವಿಸಿದನೆಂದು ಶಿವಪುರಾಣ ತಿಳಿಸುತ್ತದೆ. ಹಾಗಾಗಿ ಅಂದು ಶಿವಭಕ್ತರು ಹಗಲಲ್ಲಿ ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡಿ ತಮ್ಮ ಸಕಲಪಾಪಗಳನ್ನು ಕಳೆದು ಪರಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ಉಪವಾಸ, ಶಿವ ಧ್ಯಾನ, ಜಾಗರಣೆ, ಶಿವಭಜನೆ, ಲಿಂಗಾಷ್ಟಕ ಪಠಣ ಮಾಡಿ ಶಿವಪೂಜೆ ನೆರವೇರಿಸಿ ಪಾವನಗೊಳ್ಳುತ್ತಾರೆ.
ಬಹಳಷ್ಟು ಜನಜನಿತವಾಗಿರುವ ಶಿವಪುರಾಣದಲ್ಲಿನ ಶಿವರಾತ್ರಿಯ ಕಥೆ ಬ್ರಹ್ಮ ಮತ್ತು ವಿಷ್ಣುವಿನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ್ದು. ದೇವಲೋಕದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ನಮ್ಮಲ್ಲಿ ಶ್ರೇಷ್ಠ ಯಾರೆಂಬ ವಾಗ್ವಾದ ನಡೆದು ತಾರಕಕ್ಕೆ ಏರಿದಾಗ, ಭಯಭೀತರಾದ ದೇವತೆಗಳು ಶಿವನಲ್ಲಿ ಅವರನ್ನು ಸಮಾಧಾನ ಪಡಿಸುವಂತೆ ಕೇಳಿಕೊಳ್ಳುತ್ತಾರೆ. ಆಗ ಶಿವನು ಅಗ್ನಿ ಕಂಬದ
ರೂಪದಲ್ಲಿ ನಿಂತು ತನ್ನ ಆದಿ ಮತ್ತು ಅಂತ್ಯವನ್ನು ಹುಡುಕುವಂತೆ ಬ್ರಹ್ಮ ಮತ್ತು ವಿಷ್ಣುವಿಗೆ ಸೂಚಿಸುತ್ತಾನೆ.
ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಆದಿಯನ್ನು ಹುಡುಕಲು ಮುಂದಾದರೆ, ವಿಷ್ಣುವು ಹಂದಿಯ ರೂಪದಲ್ಲಿ ಅಗ್ನಿ ಕಂಬದ ಅಂತ್ಯವನ್ನು ಗುರುತಿಸಲು ಮುಂದಾಗುತ್ತಾನೆ. ಆದರೆ ಇಬ್ಬರಿಗೂ ಎಷ್ಟೇ ಮುಂದೆ ಸಾಗಿದರೂ, ಆದಿ ಮತ್ತು ಅಂತ್ಯ ಕಾಣಿಸುವುದಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲದ ಬ್ರಹ್ಮ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇದಗೆ ಹೂವನ್ನು ಕಂಡು ನೀನು ಎಲ್ಲಿಂದ ಬೀಳುತ್ತಿರುವೆ ಎಂದು ಪ್ರಶ್ನಿಸುತ್ತಾನೆ. ಆಗ ಕೇದಗೆ ಹೂವು ಶಿವನ ಶಿರದಿಂದ ಎಂದು ಹೇಳುತ್ತದೆ. ಬ್ರಹ್ಮ ಕೇದಗೆ ಹೂವನ್ನು ಶಿವನಿಗೆ ತೋರಿಸಿ, ತಾನು ಆದಿಯನ್ನು ನೋಡಿರುವುದಾಗಿಯೂ, ಅಲ್ಲಿಂದಲೇ ಈ ಹೂವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಬ್ರಹ್ಮ ಸುಳ್ಳು ಹೇಳಿದ್ದನ್ನು ಅರಿತ ಶಿವ ಭೂಲೋಕದಲ್ಲಿ ಯಾರೂ ಬ್ರಹ್ಮನನ್ನು ಪೂಜಿಸಬಾರದು ಎಂದೂ, ಬ್ರಹ್ಮನ ಪರವಾಗಿ ನಿಂತ ಕೇದಗೆ ಹೂವನ್ನು ಯಾವುದೇ ಪೂಜೆಗೆ ಬಳಸಬಾರದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿ.
ಶಿವಪುರಾಣದಲ್ಲಿ ಶಿವರಾತ್ರಿಯಂದು ತನ್ನನ್ನು ನಿಷ್ಕಳಂಕ ಮನಸ್ಸಿನಿಂದ ಪೂಜಿಸುವ ಭಕ್ತರಿಗೆ ತಾನು ವಿಶೇಷ ಅನುಗ್ರಹ ನೀಡುತ್ತೇನೆ ಎಂದು ಶಿವ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುವ ಉಲ್ಲೇಖವಿದೆ.
ಪ್ರಾಮಾಣಿಕ ಭಕ್ತಿಗಷ್ಟೇ ಶಂಕರ ಪರವಶನಾಗುತ್ತಾನೆ ಎಂದು ಶಿವಪುರಾಣದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ ತಿಳಿಸಿದರೆ, ಶಿವರಾತ್ರಿಯಂದು ಉಪವಾಸ ಮಾಡಿ ಜಾಗರಣೆಯಲ್ಲಿದ್ದು ಶಿವನ ಪೂಜೆ ಮಾಡಿದರೆ ಪಾಪ ಪರಿಹಾರವಾಗುತ್ತದೆ ಎಂದು ಹೇಳುವ ಇನ್ನೊಂದು ಕಥೆ ಹೀಗಿದೆ. ಗುರುದ್ರುಹ ಎಂಬ ಬೇಡ ಶಿವರಾತ್ರಿಯ ದಿನ ಬೇಟೆ ಸಿಗದೆ ಉಪವಾಸದಲ್ಲಿ ಬಿಲ್ವಪತ್ರೆಯ ಮರವೇರುತ್ತಾನೆ. ಅವನ ಬಳಿಯಲ್ಲಿದ್ದ ಸೋರೆಕಾಯಿ ಬುರುಡೆಯಲ್ಲಿ ನೀರಿರುತ್ತದೆ. ಅದೇ ಸಂಧರ್ಭದಲ್ಲಿ ಅಲ್ಲಿಗೆ ಬಂದ ಜಿಂಕೆಯೊಂದರ ಮೇಲೆ ಬೇಡ ಬಾಣ ಹೂಡುತ್ತಾನೆ. ಆಗ ಶಿವನಿಗೆ ಅತ್ಯಂತ ಶ್ರೇಷ್ಠವಾಗಿರುವ ಬಿಲ್ವಪತ್ರೆ ಎಲೆ ಮತ್ತು ಸೋರೆಕಾಯಿ ಬುರುಡೆಯಲ್ಲಿದ್ದ ನೀರು ಬೇಡನ ಕೈತಾಗಿ ಕೆಳಗಡೆ ಇದ್ದ ಶಿವಲಿಂಗದ ಮೇಲೆ ಬೀಳುತ್ತದೆ. ಬೇಡನಿಗೆ ಅರಿವಿಲ್ಲದೆ ಶಿವರಾತ್ರಿಯಂದು ಅವನ ಪ್ರಥಮ ಪೂಜೆ ಶಿವನಿಗೆ ಸಲ್ಲುತ್ತದೆ. ಆ ಕ್ಷಣವೇ ಬೇಡನ ಸಕಲ ಪಾಪವೂ ಪರಿಹಾರವಾಗಿ ಅವನಿಗೆ ಜ್ಞಾನೋದಯವಾಗುತ್ತದೆ. ಬೇಡನ ಮುಂದೆ ಪ್ರತ್ಯಕ್ಷನಾದ ಮಹಾದೇವನು, ಅವನಿಗೆ ಗುಹನೆಂದು ನಾಮಕರಣ ಮಾಡಿ, ರಾಮಾವತಾರದಲ್ಲಿ ಶ್ರೀಮನ್ನಾರಾಯಣ ಕಾಡಿಗೆ ಬಂದಾಗ ಆತನ ಸೇವೆ ಮಾಡಿ ಮುಕ್ತಿ ಹೊಂದುವಂತೆ ಅನುಗ್ರಹಿಸುತ್ತಾನೆ.
ಪುರಾಣದಲ್ಲಿ ಶಿವರಾತ್ರಿಗೆ ಸಂಬಂಧಿಸಿದ ಅನೇಕ ಕಥೆಗಳಿದ್ದು, ಶಿವನು ಪಾರ್ವತಿದೇವಿಯನ್ನು ವಿವಾಹವಾದ ದಿನ ಶಿವರಾತ್ರಿಯೆಂದು ಒಂದು ಕಥೆ ತಿಳಿಸಿದರೆ, ಸಮುದ್ರ ಮಂಥನದ ಸಮಯದಲ್ಲಿ ಉದ್ಬವವಾದ ವಿಷವನ್ನು ಶಿವ ಕುಡಿಯುತ್ತಾನೆ. ಆಗ ಪಾರ್ವತಿ ವಿಷ ಶಿವನ ಗಂಟಲೊಳಗೆ ಇಳಿಯದಂತೆ ತಡೆದ ಇಡೀ ರಾತ್ರಿಯೇ ಶಿವರಾತ್ರಿ ಎಂದು ಇನ್ನೊಂದು ಕಥೆ ಹೇಳುತ್ತದೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಧರಿಸುತ್ತಾನೆ. ಆಗ ಭಗೀರಥ ಜಟೆಯಲ್ಲಿದ್ದ ಗಂಗೆಯನ್ನು ಭೂಮಿಗೆ ಹರಿಸುವಂತೆ ಪ್ರಾರ್ಥಿಸಲು, ಅವನ ಭಕ್ತಿಗೆ ಮೆಚ್ಚಿ ಗಂಗೆಯನ್ನು ಹರಿಯಬಿಟ್ಟ ದಿನ ಶಿವರಾತ್ರಿ ಎಂದೂ ಪುರಾಣ ತಿಳಿಸುತ್ತದೆ. ಪುರಾಣದಲ್ಲಿ ಶಿವರಾತ್ರಿಗೆ ಸಂಬಂಧಿಸಿದ ಇನ್ನೂ ಅನೇಕ ಕಥೆಗಳಿವೆ.
ಇನ್ನು ವೈಜ್ಞಾನಿಕವಾಗಿ ನಾವು ಶಿವರಾತ್ರಿಯನ್ನು ನೋಡಿದರೆ ಇದು ಚಳಿಗಾಲ ಕಳೆದು ಬೇಸಿಗೆ ಕಾಲ ಪ್ರಾರಂಭಗೊಳ್ಳುವ ಸಮಯ. ಈ ಸಂದರ್ಭಗಳಲ್ಲಿ ಕ್ರಿಮಿಗಳಿಂದ ಅನಾರೋಗ್ಯ ಸಂಭವ ಅಧಿಕ. ಭೂಮಿ ಚಂದ್ರರ ಚಲನೆಯಿಂದಾಗುವ ಕಾಲದ ವ್ಯತ್ಯಾಸಕ್ಕೆ ನಮ್ಮ ಶರೀರ ಹೊಂದಿಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಮನಗಂಡು ನಮ್ಮ ಹಿರಿಯರು ಉಪವಾಸ, ಲಿಂಗಕ್ಕೆ ಅಭಿಷೇಕ, ಬಿಲ್ವಪತ್ರೆ ಪೂಜೆ ಮುಂತಾದ ಹಲವು ಆಚರಣೆಗಳನ್ನು ಜಾರಿಗೆ ತಂದಿದ್ದಾರೆ. ದೇಹಕ್ಕೆ ಅದರಿಂದ ಅನೇಕ ಲಾಭಗಳಿವೆ. ಉಪವಾಸದಿಂದ ಅಜೀರ್ಣ ದೂರವಾದರೆ, ಬಿಲ್ವಪತ್ರೆಗೆ ಉಸಿರಾಟದ ತೊಂದರೆ ಶಮನಗೊಳಿಸುವ ಸಾಮರ್ಥ್ಯವಿದೆ. ಶೀತ ಮುಂತಾದ ರೋಗ ಶಮನಗೊಳಿಸಲು ಕೂಡ ಬಿಲ್ವಪತ್ರೆ ಉಪಕಾರಿ. ಶಿವಲಿಂಗ ಕಲ್ಲಿನದಾಗಿದ್ದು, ಲಿಂಗಾಭಿಷೇಕ ಮಾಡಿದ ಜಲ ಸೇವಿಸುವುದರಿಂದ ಶರೀರಕ್ಕೆ ಬಹಳಷ್ಟು ರೋಗ ನಿರೋಧಕ ಶಕ್ತಿ ದೊರಕುತ್ತದೆ.
ಅಮಾವಾಸ್ಯೆಯ ಮೊದಲು ಮಹಾಶಿವರಾತ್ರಿ ಬರುತ್ತದೆ. ಅಮಾವಾಸ್ಯೆಯ ಕತ್ತಲು ಎಂದರೆ ಭಯ. ಆ ಭಯವನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಅಜ್ಞಾನ ಮುಸುಕುವ ಮೊದಲು ಜ್ಞಾನದ ಅರಿವಾಗಿರಬೇಕು ಎಂಬುವುದು ಶಿವರಾತ್ರಿಯ ಸಂದೇಶ.
ಈ ಮಹಾ ಶಿವರಾತ್ರಿ ಅಜ್ಞಾನದ ಕತ್ತಲೆಯನ್ನು ಕಳೆದು ಎಲ್ಲೆಡೆ ಸುಜ್ಞಾನದ ಬೆಳಕನ್ನು ಬೆಳಗಲಿ..








