ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆಯೇ ಕಾರ್ಖಾನೆಗೆ ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಿಂದ ನೂರಾರು ಕಾರ್ಮಿಕರನ್ನ ಕರೆತಂದಿರೋದು ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನ ಆತಂಕಕ್ಕೆ ದೂಡಿದೆ.
ಸಹಕಾರಿ ಸ್ವಾಮ್ಯದ PSSK(ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ)ಯನ್ನ ಸರ್ಕಾರ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆಗೆ ನೀಡಿದೆ.
ಕಾರ್ಖಾನೆಯನ್ನ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್ ಈಗಾಗಲೇ ಕಾರ್ಖಾನೆ ಆರಂಭಕ್ಕೆ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದೆ.
ನಾಲ್ಕೈದು ವರ್ಷಗಳಿಂದ ಸ್ಥಗಿತವಾಗಿದ್ದ ಕಾರ್ಖಾನೆ ಆರಂಭವಾಗುತ್ತಿರುವುದು ಕಬ್ಬು ಬೆಳೆದ ರೈತರು ಅಷ್ಟೇ ಅಲ್ಲ. ಕಾರ್ಖಾನೆಯ ಕಾರ್ಮಿಕರು, ಹೊಸದಾಗಿ ಉದ್ಯೋಗ ಬಯಸಿದ್ದ ನೂರಾರು ನಿರುದ್ಯೋಗಿಗಳ ಉದ್ಯೋಗದ ಕನಸು ಕೂಡ ಚಿಗುರೊಡೆದಿತ್ತು.
ಈ ನಡುವೆಯೇ, ಕಾರ್ಖಾನೆ ಆಡಳಿತ ಮಂಡಳಿಯವರು ಕಾರ್ಖಾನೆಯ ಸೆಕ್ಯುರಿಟಿ ಗಾರ್ಡ್ ಗಳಿಂದ ಹಿಡಿದು, ಗಾರೆ ಕೆಲಸದವರು, ಪೇಂಟರ್, ವೆಲ್ಡರ್ ಹಾಗೂ ಕಾರ್ಖಾನೆಯ ನೌಕರಿಗೂ ಮಹಾರಾಷ್ಟ್ರ ಮತ್ತು ಬೆಳಗಾವಿಯಿಂದ ನೂರಾರು ಸಂಖ್ಯೆಯ ಜನರನ್ನ ಕರೆತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಕೊರೋನಾ ಮತ್ತು ಲಾಕ್ ಡೌನ್ ನಿಂದ ಹಲವರು ಉದ್ಯೋಗ ಕಳೆದುಕೊಂಡು, ನಿರುದ್ಯೋಗಿಗಳಾಗಿ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೂ ಸ್ಥಳೀಯರನ್ನ ಕಡೆಗಣಿಸಿ, ಹೊರಗಿನವರಿಗೆ ಆದ್ಯತೆ ನೀಡುತ್ತಿರುವ ಕಾರ್ಖಾನೆ ಆಡಳಿತ ಮಂಡಳಿಯ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಕಾರ್ಮಿಕರ ಕೈನಲ್ಲಿ ಕ್ವಾರಂಟೀನ್ ಸೀಲ್ ಇದ್ದರೂ ಸಂಚಾರ
ಮಹಾರಾಷ್ಟ್ರದಿಂದ ಕಾರ್ಮಿಕರನ್ನ ಕರೆತಂದಿರುವ ಬಗ್ಗೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರಹಾಕಿದ್ದಾರೆ.

ಮಹಾರಾಷ್ಟ್ರದಿಂದ 200ಕ್ಕೂ ಹೆಚ್ಚು ಕಾರ್ಮಿಕರನ್ನ ಕರೆ ತರಲಾಗಿದೆ. ಆ ಕಾರ್ಖಾನೆಗೆ ಆಗಮಿಸಿರುವ ಬಹುತೇಕ ಕಾರ್ಮಿಕರ ಕೈನಲ್ಲಿ ಕ್ವಾರಂಟೀನ್ ಸೀಲ್ ಇದ್ದರೂ ಪಾಂಡವಪುರ, ಶ್ರೀರಂಗಪಟ್ಟಣ ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಕೊರೋನಾ ಹೆಚ್ಚಾದರೆ ನಿರಾಣಿಯವರೇ ನೇರ ಹೊಣೆ ಆಗ್ತಾರೆ. ನಿರಾಣಿ ವರ್ತನೆಯನ್ನ ಈ ಭಾಗದ ಜನ ಒಪ್ಪಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.








