ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನ ಬಗ್ಗೆ ಕಳೆದ ಮೂರು ದಿನಗಳಿಂದ ಸುದ್ದಿಗೋಷ್ಠಿ ನಡೆಸಿ ಹಂತಹಂತವಾಗಿ ವಿವರಣೆ ನೀಡುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಇಂದು ನಾಲ್ಕನೇ ಸುದ್ದಿಗೋಷ್ಠಿಯಲ್ಲಿ ರಚನಾತ್ಮಕ ಸುಧಾರಣೆ ಕ್ರಮಗಳತ್ತ ಗಮನ ಹರಿಸಿದ್ದಾರೆ. ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲಾಗುವುದು. ರಕ್ಷಣಾ ಸಾಮಾಗ್ರಿಗಳನ್ನು ದೇಶದಲ್ಲಿಯೇ ಖರೀದಿಸಲು ಅವಕಾಶ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್, ‘ಇವತ್ತು ರಚನಾತ್ಮಕ ಸುಧಾರಣೆ ಕ್ರಮಗಳನ್ನ ಘೋಷಿಸುತ್ತೇವೆ. ಇವತ್ತಿನ ಸುಧಾರಣಾ ಕ್ರಮಗಳಿಂದ ಹೆಚ್ಚೆಚ್ಚು ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಹೆಚ್ಚು ಉತ್ಪನ್ನಗಳು ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ’
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸರ್ಕಾರಿ ನಿಯಂತ್ರಣವನ್ನು ತೆಗೆದುಹಾಕಲಾಗಿದೆ. ವಾಣಿಜ್ಯೀಕರಣಕ್ಕೆ ಹೆಜ್ಜೆ ಹಾಕಲಾಗಿದೆ. ಖಾಸಗಿ ಕಂಪನಿಗಳಿಗೆ ಆದಾಯ ಹಂಚಿಕೆ ಆಧಾರದಲ್ಲಿ ಗಣಿಗಾರಿಕೆ ಕೊಡಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ದೇಶದಲ್ಲಿ ಈಗ ಶೇ. 60ರಷ್ಟು ವಾಯುಸ್ಥಳ ಮಾತ್ರ ಮುಕ್ತವಾಗಿ ಲಭ್ಯವಿದೆ. ವಿಮಾನ ನಿಲ್ದಾಣ ಬಳಕೆಯಲ್ಲಿದ್ದ ನಿರ್ಬಂಧಗಳನ್ನ ಸಡಿಲಿಸಲಾಗುವುದು ಮತ್ತು ಇನ್ನೂ 6 ವಿಮಾನ ನಿಲ್ದಾಣಗಳನ್ನು ಪಿಪಿಪಿ ಆಧಾರದ ಮೇಲೆ ಹರಾಜು ಹಾಕಲಾಗುವುದು. ಇದರಿಂದ ಏರ್ ಪೋರ್ಟ್ ಗಳ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ. ಇದರ ಲಾಭವು ಪ್ರಯಾಣಿಕರಿಗೆ ಸಿಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.








